40% ಕಮೀಷನ್ಗೆ ಉತ್ತರಿಸದ ಮೋದಿ ವಿರುದ್ಧ ಸಿದ್ದು ಕಿಡಿ
ಮುಖ್ಯಮಂತ್ರಿಗಳ ಸುಪರ್ದಿಯಲ್ಲಿಯೇ 24/7 ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಮಾಡುತ್ತೇವೆ ಎಂದು ಹೇಳಿದ್ದಿರಿ. ಇದೀಗ 40 ಪರ್ಸೆಂಟ್ ಕಮಿಷನ್ ಬಗ್ಗೆ ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆದರೂ ಉತ್ತರವಿಲ್ಲ.
ಬೆಂಗಳೂರು (ಸೆ.02): ಮುಖ್ಯಮಂತ್ರಿಗಳ ಸುಪರ್ದಿಯಲ್ಲಿಯೇ 24/7 ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಮಾಡುತ್ತೇವೆ ಎಂದು ಹೇಳಿದ್ದಿರಿ. ಇದೀಗ 40 ಪರ್ಸೆಂಟ್ ಕಮಿಷನ್ ಬಗ್ಗೆ ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆದರೂ ಉತ್ತರವಿಲ್ಲ. ಇದೇನಾ ‘ನಿಮ್ಮ ನಾ ಖಾವೂಂಗಾ, ನಾ ಖಾನೆ ದೂಂಗ’ ನರೇಂದ್ರ ಮೋದಿಯವರೇ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ‘ಉತ್ತರ ಕೊಡಿ ಬಿಜೆಪಿ’ ಅಭಿಯಾನದ ಅಂಗವಾಗಿ ಟ್ವಿಟರ್ ಮೂಲಕ ಸರಣಿ ಪ್ರಶ್ನೆ ಮಾಡಿರುವ ಅವರು, 2022ಕ್ಕೆ ಎಲ್ಲರ ಮನೆಗೆ ವಿದ್ಯುತ್ ನೀಡುತ್ತೇವೆ ಎಂದು ಹೇಳಿದ್ದಿರಿ.
ಇದೀಗ ಕರ್ನಾಟಕದಲ್ಲಿ ದಿನಕ್ಕೆ ಕನಿಷ್ಠ 10 ಗಂಟೆಯೂ ವಿದ್ಯುತ್ ಇಲ್ಲ. ರಾಜ್ಯದ ಜನತೆ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದ್ದು, ಮಹಿಳೆಯರು ಮಸಾಲೆ ಅರೆಯಲು ವಿದ್ಯುತ್ ಕಚೇರಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕಾಗಿಯೇ ಜನರಿಗೆ ಕ್ಯಾಂಡಲ್ ಹಚ್ಚಲು ಕರೆ ನೀಡಿದ್ದೀರಾ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ. ಸಣ್ಣ ಕೈಗಾರಿಕೆಗಳಿಗೆ ರೂ.6000 ಕೋಟಿ ನೆರವು ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದೀರಿ. ಎರಡು ವರ್ಷಗಳಲ್ಲಿ 754 ಕೈಗಾರಿಕೆಗಳಿಗೆ ಬೀಗ, 44,000 ಉದ್ಯೋಗ ನಷ್ಟಉಂಟು ಮಾಡಿದ್ದೀರಿ.
ಗಂಭೀರ ಆರೋಪ ಬಂದಾಗ ಭಂಡತನ ಬೇಡ: ಸಿದ್ದರಾಮಯ್ಯ
ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವ ನಿಮ್ಮ ಭರವಸೆ ಎಲ್ಲಿ? ಎಂದು ಪ್ರಶ್ನಿಸಿದ್ದಾರೆ. ಇನ್ನು ರೈತರಿಗೆ ಲಾಭದಾಯಕ ಬೆಂಬಲ ಬೆಲೆ, 2022ಕ್ಕೆ ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದಿರಿ. ಎಂಎಸ್ಪಿ ಲೆಕ್ಕದಲ್ಲಿಯೇ ಮೋಸ ಮಾಡಿ ಎಂಎಸ್ಪಿ ದರದಲ್ಲಿ ಬೆಳೆ ಖರೀದಿಸುವವರೇ ಇಲ್ಲದಂತೆ ಮಾಡಿದ್ದೀರಿ. ರೈತರಿಗೆ ಇನ್ನೂ ಯಾವಾಗ ಅಚ್ಚೇ ದಿನ್ ನೀಡುತ್ತೀರಿ ಹೇಳಿ ಎಂದು ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದ್ದಾರೆ.
ನಾನು ಯಾವ ಗುತ್ತಿಗೆದಾರರ ಪರವೂ ಇಲ್ಲ: ರಾಜ್ಯ ಸರ್ಕಾರದ ಮೇಲಿನ ಶೇ.40ರಷ್ಟುಕಮಿಷನ್ ವಿಚಾರವಾಗಿ ನಾನು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿ ಯಾವ ಗುತ್ತಿಗೆದಾರರ ಪರವೂ ನಿಲ್ಲುತ್ತಿಲ್ಲ, ನಾನೇನಿದ್ದರೂ ಕಾನೂನಿನ ಪರ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಜತೆಗೆ, ಬಿಜೆಪಿಯವರು ಪ್ರಾಮಾಣಿಕರೇ ಆಗಿದ್ದರೆ ಕಮಿಷನ್ ಆರೋಪವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಿ ಎಂದು ಪುನರುಚ್ಚರಿಸಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಕ್ರಮ ಕೈಗೊಳ್ಳುವ ಮುಖ್ಯಮಂತ್ರಿ ಹೇಳಿಕೆ ಕುರಿತು ಮಂಡ್ಯ ಜಿಲ್ಲೆಯ ಪಾಂಡವಪುರ ಹಾಗೂ ಮೈಸೂರಲ್ಲಿ ಮಾತನಾಡಿದರು.
ಚೀನಾ ವಿಚಾರದಲ್ಲಿ ಅಮೆರಿಕದ ಹಸ್ತಕ್ಷೇಪದ ಕುರಿತು ಬೆಂಗ್ಳೂರಲ್ಲಿ ಪ್ರತಿಭಟನೆ, ಸಿದ್ಧರಾಮಯ್ಯ ಸ್ಪಷ್ಟನೆ!
ನ್ಯಾಯಾಂಗ ತನಿಖೆ ಮಾಡಿದರೆ ದಾಖಲೆ ಕೊಡುವುದಾಗಿ ಕೆಂಪಣ್ಣ ಹೇಳಿದ್ದಾರೆ. ಸರ್ಕಾರದ ಕೆಳಗೆ ಗುತ್ತಿಗೆದಾರರು ಕೆಲಸ ಮಾಡಬೇಕು. ಇದೇ ಕಾರಣಕ್ಕೆ ಅವರು ಹೆದರಿದ್ದು, ತನಿಖೆ ವೇಳೆ ದಾಖಲೆ ಕೊಡುತ್ತೇನೆ ಎಂದು ಹೇಳುತ್ತಿದ್ದಾರೆ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗಂಭೀರ ಆರೋಪಗಳು ಬಂದಾಗ ಸರ್ಕಾರ ನೆಪ ಹೇಳುವ ಅಥವಾ ಅದರಿಂದ ತಪ್ಪಿಸಿಕೊಳ್ಳುವ ಭಂಡತನ ಪ್ರದರ್ಶಿಸಬಾರದು. ಬದಲಿಗೆ ಸ್ವತಂತ್ರ ಸಂಸ್ಥೆಯಿಂದ ತನಿಖೆಗೆ ಒಳಪಡಿಸಬೇಕು. ಹೈಕೋರ್ಚ್ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕಿರುವ ಸಮಸ್ಯೆಯಾದರೂ ಏನು ಎಂದು ಪ್ರಶ್ನಿಸಿದರು.