ಹಗರಣಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ಹಿಂಜರಿಕೆ ಏಕೆ, ಬಿಜೆಪಿ ಸರ್ಕಾರದಿಂದ ಸಾಲಗಾರರಾದ ಕನ್ನಡಿಗರು: ಪ್ರಿಯಾಂಕ್‌ ಖರ್ಗೆ ಆರೋಪ

ಮಂಗಳೂರು(ಸೆ.07):  ಬಿಜೆಪಿಯದ್ದು ಡಬಲ್‌ ಎಂಜಿನ್‌ ಸರ್ಕಾರ ಅಲ್ಲ, ಡಬಲ್‌ ದೋಖಾ ಸರ್ಕಾರ ಎಂದು ಮಾಜಿ ಸಚಿವ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷ ಪ್ರಿಯಾಂಕ್‌ ಖರ್ಗೆ ಟೀಕಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಗೆ ನರೇಂದ್ರ ಮೋದಿ ಆಗಮನದಿಂದ ಅಚ್ಛೇದಿನ್‌ ಬಂದೀತೆಂದು ಜನರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಮೋದಿ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುತ್ತಾರೆ, ನಾರಾಯಣಗುರು ಪೀಠ ಮತ್ತು ನಿಗಮ ಸ್ಥಾಪನೆ ಮಾಡುತ್ತಾರೆ ಎಂಬ ನಿರೀಕ್ಷೆ ಜನರಲ್ಲಿತ್ತು. ಆದರೆ ಮೋದಿ ಏನೂ ಘೋಷಣೆ ಮಾಡದೆ ಜನರಿಗೆ ಭಾರೀ ನಿರಾಸೆಯಾಗಿದೆ. ಇದು ಡಬಲ್‌ ಎಂಜಿನ್‌ ಸರ್ಕಾರ ಅಲ್ಲ, ಡಬಲ್‌ ಧೋಕಾ ಸರ್ಕಾರ. ಅಭಿವೃದ್ಧಿ ಏನೂ ಆಗಲ್ಲ ಅಂತ ಸ್ವತಃ ಬಿಜೆಪಿ ಕಾರ್ಯಕರ್ತರಿಗೇ ಮನವರಿಕೆಯಾಗಿದೆ ಎಂದು ಹೇಳಿದರು.

Add Asianetnews Kannada as a Preferred SourcegooglePreferred

ತನಿಖೆಗೆ ಹಿಂಜರಿಕೆ ಏಕೆ?: 

ಶಿಕ್ಷಣ, ಉದ್ಯೋಗ ನೇಮಕಾತಿ ವಿಚಾರದಲ್ಲಿ ಬಿಜೆಪಿ ಶಾಸಕರು, ಸಚಿವರೇ ಭ್ರಷ್ಟಾಚಾರದ ಬ್ರೋಕರ್‌ಗಳಾಗಿದ್ದಾರೆ. ವಿಧಾನಸೌಧವನ್ನೇ ವ್ಯಾಪಾರೀ ಕೇಂದ್ರ ಮಾಡಿದ್ದಾರೆ. ನೇಮಕಾತಿಗಳಲ್ಲಿ ಹಗರಣ ಆಗಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಐಪಿಎಸ್‌ ಅಧಿಕಾರಿ ಸೇರಿದಂತೆ ಹತ್ತಾರು ಮಂದಿ ಅರೆಸ್ಟ್‌ ಆಗಿರುವುದು ಯಾಕೆ? ಈ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ಬಿಜೆಪಿ ಸರ್ಕಾರಕ್ಕೆ ಹಿಂಜರಿಕೆ ಯಾಕೆ ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದರು.

Bengaluru flooding ಕಟು ಸತ್ಯ ತಿಳಿಸಿ ಟ್ರೋಲ್ ಆದ ರಮ್ಯಾ, ತಪ್ಪು ಅಂಕಿ ಅಂಶ ನೀಡಿದ ಮಾಜಿ ಸಂಸದೆ!

ಬಿಜೆಪಿಯವರೇ ಆದ ಯೋಗೇಶ್ವರ್‌, ವಿಶ್ವನಾಥ್‌, ಯತ್ನಾಳ್‌, ರೇಣುಕಾಚಾರ್ಯ, ಮಾಧುಸ್ವಾಮಿ ಮತ್ತಿತರರು ತಮ್ಮ ಪಕ್ಷದ ವಿರುದ್ಧವೇ ಟೀಕೆ ಮಾಡುತ್ತಾರೆ. ರಾಜ್ಯದಲ್ಲಿ ಬಿಜೆಪಿ ವರ್ಸಸ್‌ ಬಿಜೆಪಿ ಜಗಳವಾಗುತ್ತಿದೆ. ಪ್ರಧಾನಿ ಮೋದಿ ಕರಾವಳಿಗೆ ಬರುವ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರನ್ನೇ ಬದಲಿಸಬೇಕೆಂಬ ಅಭಿಯಾನ ನಡೆಸಿರುವುದು ಬಿಜೆಪಿಯ ಪರಿಸ್ಥಿತಿ ಏನೆಂಬುದನ್ನು ತೋರಿಸುತ್ತದೆ. ಆದರೆ ಬಿಜೆಪಿಯವರು ಕಾಂಗ್ರೆಸ್‌ ಪಕ್ಷದ ಶಿಸ್ತಿನ ಬಗ್ಗೆ ಮಾತನಾಡುತ್ತಾರೆ ಎಂದು ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದರು.

ಬಿಜೆಪಿಯವರಿಗೆ ಈಗ ಉಳಿದಿರುವುದು ಕೇವಲ ಧರ್ಮ ರಾಜಕೀಯ ಮಾತ್ರ. ಭ್ರಷ್ಟಾಚಾರದ ಬಗ್ಗೆ ಮಾತನಾಡಿ ಅಂದ್ರೆ ಹಲಾಲ್‌ ಜಟ್ಕಾ ವಿಷಯ ಎತ್ತುತ್ತಾರೆ. ಅಭಿವೃದ್ಧಿಗೆ ಹಣ ನೀಡಿ ಎಂದರೆ ಕಾಶ್ಮೀರ್‌ ಫೈಲ್‌ ನೋಡಿದ್ರಾ ಅಂತ ಕೇಳ್ತಾರೆ. ಬೆಲೆ ಏರಿಕೆ ಬಗ್ಗೆ ಮಾತನಾಡಿದರೆ ಟಿಪ್ಪುಸುಲ್ತಾನ್‌ ವಿಚಾರ ಮುನ್ನೆಲೆಗೆ ತರುತ್ತಾರೆ ಎಂದರು.

Rahul Gandhi ಪಾಕಿಸ್ತಾನಕ್ಕೆ ಹೋಗಿ ಭಾರತ್‌ ಜೋಡೋ ಯಾತ್ರೆ ಮಾಡಲಿ: ಅಸ್ಸಾಂ ಸಿಎಂ

ಕಾಂಗ್ರೆಸ್‌ ಮುಖಂಡರಾದ ಬಿ. ರಮಾನಾಥ ರೈ, ಹರೀಶ್‌ ಕುಮಾರ್‌, ಮಧು ಬಂಗಾರಪ್ಪ, ಮಂಜುನಾಥ ಭಂಡಾರಿ, ಬಿ.ಎ. ಮೊಯ್ದೀನ್‌ ಬಾವ, ಜೆ.ಆರ್‌. ಲೋಬೊ, ಐವನ್‌ ಡಿಸೋಜ, ಎ.ಸಿ. ವಿನಯ ರಾಜ್‌, ಕೆ.ಕೆ. ಶಾಹುಲ್‌ ಹಮೀದ್‌, ಶಾಲೆಟ್‌ ಪಿಂಟೊ ಮತ್ತಿತರರು ಇದ್ದರು.

ತನಿಖೆ ಮಾಡಿದ್ರೆ ಸರ್ಕಾರ ಉರುಳುತ್ತೆ!

ಬಿಟ್‌ ಕಾಯಿನ್‌, ಪಿಎಸ್‌ಐ ಹಗರಣದ ಬಗ್ಗೆ ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ನ್ಯಾಯಾಂಗ ತನಿಖೆ ಮಾಡಿದರೆ ಸರ್ಕಾರ ಬೀಳುತ್ತೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು. ಎಲ್ಲ ವಿಚಾರಗಳ ಬಗ್ಗೆ ಮಾತನಾಡುವ ಬಿಜೆಪಿ ರಾಜ್ಯಾಧ್ಯಕ್ಷರು ಬಿಟ್‌ ಕಾಯಿನ್‌ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.