ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳಿಂದ ಬರೋಬ್ಬರಿ 48 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ 

ಹುಬ್ಬಳ್ಳಿ(ನ.23): ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ಬಯಸಿ ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳಿಂದ ಬರೋಬ್ಬರಿ 48 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ನ. 5ರಿಂದ 21ರ ವರೆಗೆ ಕೆಪಿಸಿಸಿ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿತ್ತು. ಹೀಗಾಗಿ ಕಾಂಗ್ರೆಸ್‌ ಆಕಾಂಕ್ಷಿಗಳೆಲ್ಲರೂ ಅರ್ಜಿ ಸಲ್ಲಿಸಿದ್ದು, ಇದರಲ್ಲಿ ಕುಂದಗೋಳ ಕ್ಷೇತ್ರಕ್ಕೆ ಅತಿ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. ಕುಂದಗೋಳದಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿ, ಮುತ್ತಣ್ಣ ಶಿವಳ್ಳಿ, ಎಂ.ಎಸ್‌. ಅಕ್ಕಿ, ಅರವಿಂದ ಕಟಗಿ ಸೇರಿದಂತೆ ಬರೋಬ್ಬರಿ 14 ಜನ ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್‌ ಶಾಸಕಿಯಾಗಿದ್ದರೂ ಇಲ್ಲಿ ಹೆಚ್ಚಿನ ಅರ್ಜಿ ಸಲ್ಲಿಕೆಯಾಗಿರುವುದು ಅಚ್ಚರಿಯನ್ನುಂಟು ಮಾಡಿದೆ.

Add Asianetnews Kannada as a Preferred SourcegooglePreferred

ಇನ್ನೂ ಎರಡನೆಯ ಸ್ಥಾನದಲ್ಲಿ ಪಶ್ಚಿಮ ಕ್ಷೇತ್ರವಾಗಿದೆ. ಇಲ್ಲಿ ಮುಖಂಡರಾದ ದೀಪಕ ಚಿಂಚೋರೆ, ಪಿ.ಎಚ್‌. ನೀರಲಕೇರಿ, ಕೀರ್ತಿ ಮೋರೆ ಸೇರಿದಂತೆ 10 ಜನರು ಅರ್ಜಿ ಸಲ್ಲಿಸಿದ್ದಾರೆ. ನವಲಗುಂದದಲ್ಲೂ ಟಿಕೆಟ್‌ಗೆ ಭಾರೀ ಫೈಟ್‌ ನಡೆಯುತ್ತಿದೆ. ಇತ್ತೀಚಿಗೆ ಕಾಂಗ್ರೆಸ್‌ಗೆ ಬಂದ ಎನ್‌.ಎಚ್‌. ಕೋನರಡ್ಡಿ, ವಿನೋದ ಅಸೂಟಿ, ಮಾಜಿ ಸಚಿವ ಕೆ.ಎನ್‌. ಗಡ್ಡಿ, ರಾಜಶೇಖರ ಮೆಣಸಿನಕಾಯಿ ಸೇರಿದಂತೆ 8 ಜನರು ಅರ್ಜಿ ಸಲ್ಲಿಸಿದ್ದಾರೆ.

ಕೊಟ್ಟ ಭರವಸೆಗಳನ್ನು ಈಡೆರಸದೆ ಹೋದ್ರೆ 2028 ಕ್ಕೆ ನಾವು ನಿಮ್ಮಲ್ಲಿ ಮತ ಕೇಳಲ್ಲ: ಸಿ.ಎಂ.ಇಬ್ರಾಹಿಂ

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲೂ ಅರ್ಜಿ ಸಲ್ಲಿಸಿದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಸದಾನಂದ ಡಂಗನವರ, ಗಿರೀಶ ಗದಿಗೆಪ್ಪಗೌಡರ, ಅನಿಲಕುಮಾರ ಪಾಟೀಲ, ರಜತ್‌ ಉಳ್ಳಾಗಡ್ಡಿಮಠ ಸೇರಿದಂತೆ 8 ಜನ ಟಿಕೆಟ್‌ ಬಯಸಿದ್ದಾರೆ. ಕಲಘಟಗಿ ಕ್ಷೇತ್ರದ ಮೇಲೆ ಮಾಜಿ ಸಚಿವ ಸಂತೋಷ ಲಾಡ್‌, ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ, ಬಂಗಾರೇಶ ಹಿರೇಮಠ ಕಣ್ಣಿಟ್ಟು ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಕಾಂಗ್ರೆಸ್‌ ಶಾಸಕ ಇರುವ ಪೂರ್ವ ಕ್ಷೇತ್ರದಲ್ಲೂ ಟಿಕೆಟ್‌ಗೆ ಈ ಸಲ ಫೈಟ್‌ ನಡೆಯುತ್ತಿದೆ. ಪ್ರಸಾದ ಅಬ್ಬಯ್ಯಗೆ ಟಿಕೆಟ್‌ ಬೇಡ ನಮಗೆ ಕೊಡಿ ಎಂದು ಪಾಲಿಕೆ ಮಾಜಿ ಸದಸ್ಯರಾದ ಮೋಹನ ಹಿರೇಮನಿ, ಹನುಮಂತ ಬಂಕಾಪುರ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಪ್ರಸಾದ ಅಬ್ಬಯ್ಯ ಸೇರಿದಂತೆ ಮೂವರ ನಡುವೆ ಟಿಕೆಟ್‌ಗೆ ಫೈಟ್‌ ನಡೆಯುತ್ತಿದೆ. ಒಟ್ಟಿನಲ್ಲಿ ಚುನಾವಣೆಗೆ ಆರು ತಿಂಗಳು ಬಾಕಿಯಿರುವಾಗಲೇ ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ಫೈಟ್‌ ಬಲು ಜೋರಾದಂತಾಗಿದೆ.