Asianet Suvarna News Asianet Suvarna News

ಬಡಮಕ್ಕಳ ಬಿಎಂಎಸ್‌ ಟ್ರಸ್ಟ್ ಖಾಸಗೀಕರಣ ಮಾಡಿದ ಅಶ್ವತ್ಥನಾರಾಯಣ: ಕುಮಾರಸ್ವಾಮಿ ಆರೋಪ

ಬಡಮಕ್ಕಳ ಅಭಿವೃದ್ಧಿಗೆ ಸ್ಥಾಪಿಸಲಾದ ಬಿಎಂಎಸ್‌ ಸಾರ್ವಜನಿಕ ಸಂಸ್ಥೆಯನ್ನು ಒಂದು ಕುಟುಂಬದ ಹಿತಾಸಕ್ತಿಗಾಗಿ ಸಚಿವ ಅಶ್ವತ್ಥನಾರಾಯಣ ಖಾಸಗಿ ಸಂಸ್ಥೆಯನ್ನಾಗಿ ಮಾಡಿದ್ದಾರೆ.

CN Ashwath Narayan privatized BMS Trust HD Kumaraswamy allegation sat
Author
First Published Feb 7, 2023, 3:50 PM IST

ಬೆಂಗಳೂರು (ಫೆ.07): ಸಚಿವ ಅಶ್ವತ್ಥನಾರಾಯಣ ಅವರು ಬಡಮಕ್ಕಳ ಅಭಿವೃದ್ಧಿಗೆ ಸ್ಥಾಪಿಸಲಾದ ಬಿಎಂಎಸ್‌ ಸಾರ್ವಜನಿಕ ಸಂಸ್ಥೆಯನ್ನು ಒಂದು ಕುಟುಂಬದ ಹಿತಾಸಕ್ತಿಗಾಗಿ ಬರೆದುಕೊಟ್ಟು ಅವರ ಮನೆಯಲ್ಲಿ ಊಟ ಮಾಡುತ್ತಿರುವುದು ಗೊತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ಬೆಂಗಳೂರಿನ ಜೆ.ಪಿ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಿಎಂ ಮಾಡಲಾಗುತ್ತದೆ ಎಂಬ ಬಗ್ಗೆ ಹೇಳಿದ್ದಕ್ಕೆ ಬಿಜೆಪಿಯ ಎಲ್ಲ ಘಟಾನುಘಟಿ ನಾಯಕರು ಹೇಳಿಕೆ ಕೊಟ್ಟಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಅಶ್ವತ್ಥನಾರಾಯಣ ನಾನು ಏನೋ ತಿಂದಿದ್ದೇನೆ ಎಂಬ ಆರೋಪ ಮಾಡಿದ್ದಾರೆ. ಆದರೆ, ಬಡಮಕ್ಕಳ ಅಭಿವೃದ್ಧಿಗೆ ಸ್ಥಾಪಿಸಲಾದ ಬಿಎಂಎಸ್‌ ಸಂಸ್ಥೆಯನ್ನು ಯಾರು ಬಗೆದು ತಿನ್ನುತ್ತಿದ್ದಾರೆ ಎನ್ನುವುದು ಗೊತ್ತಿದೆ. ಈ ಬಗ್ಗೆ ವಿಧಾನಸೌಧದಲ್ಲಿ ಪ್ರಶ್ನೆ ಮಾಡಿದರೂ ಯಾರೊಬ್ಬರೂ ಉತ್ತರಿಸಲಿಲ್ಲ. ಸಾರ್ವಜನಿಕ ಆಸ್ತಿಯಾದ ಬಿಎಂಎಸ್‌ ಟ್ರಸ್ಟ್‌ ಅನ್ನು ಖಾಸಗಿ ಕುಟುಂಬಕ್ಕೆ ಬರೆದುಕೊಟ್ಟಿರುವ ಬಗ್ಗೆ ಮಾಹಿತಿಯಿದೆ. ಈಗ ಅವರ ಮನೆಯಲ್ಲಿ ಊಟ ಮಾಡುತ್ತಾ ಕುಳಿತುಕೊಂಡಿದ್ದಾರೆ ಎಂದು ಬಿಎಂಎಸ್ ಟ್ರಸ್ಟ್ ಮುಖ್ಯಸ್ಥರೊಂದಿಗೆ ಅಶ್ವಥ್ ನಾರಾಯಣ್ ಊಟ ಮಾಡುತ್ತಿರುವ ಫೋಟೋ ಪ್ರದರ್ಶನ ಮಾಡಿದರು. 

ಎಚ್‌ಡಿಕೆ ಬಿಜೆಪಿ ಸಿಎಂ ವಿಚಾರ ಬಿಟ್ಟು ಹಾಸನ ಟಿಕೆಟ್‌ ಬಗ್ಗೆ ಚಿಂತಿಸಲಿ: ಸಿ.ಸಿ. ಪಾಟೀಲ

ನಾನು ಒಂದೇ ಹೇಳಿಕೆಗೆ ಸ್ಟಿಕಾನ್‌ ಆಗಿದ್ದೇನೆ: ನಾನು ಎಂದೂ ಜಾತಿ ರಾಜಕಾರಣ ಮಾಡಿದವನಲ್ಲ. ನಾವು ಯಾವುದೇ ಸಮಾಜವನ್ನು ಅಪಮಾನ ಮಾಡುವುದಿಲ್ಲ. ನಾನು ಮೊದಲ ದಿನ ಏನು ಹೇಳಿಕೆ ಕೊಟ್ಟಿದ್ದೇನೋ ಅದೇ ಹೇಳಿಕೆಗೆ ನಾನು ಸ್ಟಿಕಾನ್‌ ಆಗಿದ್ದೇನೆ. ಕೆಲವರು ವಿಶ್ಲೇಷಣೆ ಮಾಡುವಾಗ ಗೊಂದಲ ಸೃಷ್ಟಿಸಿದ್ದಾರೆ. ನನಗೆ ಬರಾಹ್ಮಣ, ದಲಿತ ಸೇರಿ ಯಾವುದೇ ಸಮಾಜಗಳಿಗೆ ಅವಮಾನ ಮಾಡುವ ಸಂಸ್ಕೃತಿಯಿಂದ ನಾನು ಬಂದಿಲ್ಲ. ಯಾವುದೇ ಸಮಾಜದ ಸಮುದಾಯ, ಸಂಘಟನೆ ಇದನ್ನು ಅರ್ಥ ಮಾಡಿಕೊಳ್ಳಬೇಕು. ಈ ದೇಶದ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಸಿಎಂ ಆಗಬಹುದು. ಪಾರ್ಲಿಮೆಂಟ್‌ಗೆ ಎಷ್ಟು ಜನ ಯಾವ ಯಾವ ಹಿನ್ನೆಲೆಯಲ್ಲಿ ಆಯ್ಕೆಯಾಗಿ ಲೋಕಸಭೆಗೆ ಹೋಗಿದ್ದಾರೆ ಎಂಬುದುಗೊತ್ತಿದೆ, ಜನಾಭಿಪ್ರಾಯಕ್ಕೆ ನಾವು ತಲೆಬಾಗಲೇಬೇಕು. ಅದನ್ನು ನಾನೂ ಕೂಡ ತಿಳಿದುಕೊಂಡಿದ್ದೇನೆ ಎಂದರು.

ಕರ್ನಾಟಕ ಮತ್ತು ಸಾವರ್ಕರ್‌, ಗೋಡ್ಸೆಗೆ ಸಂಬಂಧವೇನು?: ಕಳೆದ ಮೂರು ವರ್ಷಗಳಿಂದ ಬಿಜೆಪಿ ಆಡಳಿತಕ್ಕೆ ಬಂದ ನಂತರ ಕರ್ನಾಟಕಕ್ಕೂ ಸಾವರ್ಕರ್‌ ಹಾಗೂ ಗೋಡ್ಸೆಗೆ ಸಂಭಂಧವೇನು. ಸುವರ್ಣಸೌಧದಲ್ಲಿ ಸಾವರ್ಕರ್‌ ಫೋಟೋ ಹಾಕಿದ್ದಾರೆ. ಸಮಾಜ ಒಡೆಯಲು ಕೈ ಹಾಕಲು ಹೊರಟಿರುವುದು ಹಾಗೂ ಮೀಸಲಾತಿ ವ್ಯವಸ್ಥೆಯ ವಿಚಾರದಲ್ಲಿಯೂ ಗೊಂದ ಸೃಷ್ಟಿ ಮಾಡಿರುವುದು (ಮೂಗಿಗೆ ತುಪ್ಪ ಸವರುವ ಬದಲು ತಲೆಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ) ಗೊತ್ತಿದೆ. ಪಾಪ ಬಸವರಾಜ ಬೊಮ್ಮಾಯಿ ಅವರನ್ನು ಅಧಿಕಾರದಲ್ಲಿ ಕೂರಿಸಿ ಹಿಂದುಗಡೆಯಿಂದ ಅಧಿಕಾರ ಬೇರೆಯವರೇ ಮಾಡಲಾಗುತ್ತಿದೆ.

Brahmin CM: ಬಿಜೆಪಿ ಗೆದ್ದರೆ ಪ್ರಲ್ಹಾದ್ ಜೋಶಿ ಸಿಎಂ: 'ಬ್ರಾಹ್ಮಣ ಸಿಎಂ' ಬಾಂಬ್‌ ಹಾಕಿದ ಎಚ್‌ಡಿಕೆ!

ನಮ್ಮ ರಾಜ್ಯದ ಬ್ರಾಹ್ಮಣರು ಸುಸಂಸ್ಕೃತರು: ನಮ್ಮ ರಾಜ್ಯದಲ್ಲಿರುವ ಬ್ರಾಹ್ಮಣ ಸಮಾಜ ಅತ್ಯಂತ ಸುಸಂಸ್ಕೃತವಾಗಿ ಜೀವನ ಮಾಡುವ ಸಮಾಜವಾಗಿದೆ. ನಮ್ಮ ಶೃಂಗೇರಿಯ ವಿದ್ಯಾರಣ್ಯ ಅವರು ಕಟ್ಟಿದ ಚಂದ್ರಮೌಳೀಶ್ವರ ದೇವಾಲಯ ಧ್ವಂಸ ಮಾಡಿದ, ಮರಾಠ ಶಿವಾಜಿಯನ್ನು ಕೊಂದಂತಹ ಹಾಗೂ ಗಾಂಧೀಜಿ ಕೊಂದಂತಹ ನೆರೆ ರಾಜ್ಯದ ಬ್ರಾಹ್ಮಣ ಸಮಾಜದ ಸಂಸ್ಕೃತಿಯೇ ಬೇರೆ ಇದೆ. ನನ್ನ ರಾಜ್ಯ ಮುಮದಿನ ದಿನಗಳಲ್ಲಿ ಅನಾಹುತ ಸೃಷ್ಟಿ ಆಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸಲು ಕೊಟ್ಟಂತಹ ಹೇಳಿಕೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಯಾವ್ಯಾವ ಅಶಾಂತಿ ಘಟನೆಗಳು ನಡೆದಿವೆ ಎಂಬುದು ಗೊತ್ತಿದೆ. ಟಿಪ್ಪು, ಸಾವರ್ಕರ್‌ ವಿಚಾರದಲ್ಲಿ ಸಂಘರ್ಷಗಳನ್ನು ಬೆಳೆಸಿಕೊಂಡು ಹೋಗಲಾಗುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಅಧಿಕಾರಕ್ಕೆ ತಂದ ಯಡಿಯೂರಪ್ಪ ಮೂಲೆಗುಂಪು: ರಾಜ್ಯದಲ್ಲಿ ಯಡಿಯೂರಪ್ಪ ಕಷ್ಟಪಟ್ಟು ಮೈತ್ರಿ ಸರ್ಕಾರ ತೆಗೆದು ಮುಖ್ಯಮಂತ್ರಿಯಾದರು. ಕೇವಲ ಎರಡು ವರ್ಷದಲ್ಲಿ ಅಧಿಕಾರ ಕೊಟ್ಟು ದೆಹಲಿ ಮತ್ತು ಆರ್‌ಎಸ್‌ಎಸ್‌ನವರು ಹೇಗೆ ನಡೆಸಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಮೈತ್ರಿ ಸರ್ಕಾರ ಬಿದ್ದು ಹೋದ ನಂತರ ವಿದಾಯದ ಭಾಷಣದ ವೇಳೆ ಯಡಿಯೂರಪ್ಪ ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದೇನೆ. ನೀವು ಈಗ ಕಷ್ಟಪಟ್ಟು ಮುಖ್ಯಮಂತ್ರಿ ಆಗಿದ್ದೀರಿ. ಉತ್ತಮ ಕೆಲಸ ಮಾಡಿ, ಜನರಿಂದ ಉತ್ತಮ ಹೆಸರನ್ನು ಪಡೆದುಕೊಳ್ಳಬೇಕು ಎಂದು ಒಳ್ಳೆಯ ಸಲಹೆ ನೀಡಿದ್ದೆನು. ಅವರು ಮಾತನಾಡುವ ಪರಿಸ್ಥಿತಿ ಇಲ್ಲ. ದೇಶದಲ್ಲಿ ಇಡಿ ಮತ್ತು ಐಟಿಯನ್ನು ಅಸ್ತ್ರವಾಗಿ ಇಟ್ಟುಕೊಳ್ಳಲಾಗಿದೆ. ಇನ್ನು ಒಂದು ತಿಂಗಳಲ್ಲಿ ಚುನಾವಣಾ ಕೋಡ್‌ ಆಫ್‌ ಕಂಡಕ್ಟ್‌ ಜಾರಿಯಾಗಲಿದೆ. ಈ ವೇಳೆ ಯಾವ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದು ಹೇಳಿದರು.

ಬಿಎಂಎಸ್‌ ಅಕ್ರಮದ ಬಗ್ಗೆ ಪ್ರಧಾನಿಗೆ ಪತ್ರ: ಕುಮಾರಸ್ವಾಮಿ

Follow Us:
Download App:
  • android
  • ios