ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದ್ದು, ಅದನ್ನು ಸರ್ಕಾರದ ಅಭಿಪ್ರಾಯವಾಗಿಸಲು ಪ್ರಯತ್ನಿಸುತ್ತೇನೆ. ಆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು (ಜು.06): ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದ್ದು, ಅದನ್ನು ಸರ್ಕಾರದ ಅಭಿಪ್ರಾಯವಾಗಿಸಲು ಪ್ರಯತ್ನಿಸುತ್ತೇನೆ. ಆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಶನಿವಾರ ನಗರದಲ್ಲಿ ಜನಪ್ರಕಾಶನದಿಂದ ಪ್ರಕಟವಾಗಿರುವ ಸಂಸ್ಕೃತಿ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಸಂಪಾದಿಸಿರುವ ‘ಕುವೆಂಪು ವಿಚಾರ ಕ್ರಾಂತಿ’ ಕೃತಿಯನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದರು. ರಾಜ್ಯದ ಎಲ್ಲಾ ಜನರಿಗೆ ಸಂವಿಧಾನವನ್ನು ಅರ್ಥೈಸಲು ಒಂದು ಸಂಸ್ಥೆಯನ್ನೇ ಸ್ಥಾಪಿಸಬೇಕು ಎನ್ನುವ ಸಲಹೆಯನ್ನು ಈ ವೇದಿಕೆಯಲ್ಲಿ ನೀಡಲಾಗಿದೆ. ಅದನ್ನು ಪರಿಗಣಿಸುತ್ತೇವೆ. ಆದರೆ, ಜನರು ಸಂವಿಧಾನವನ್ನು ಓದುವುದನ್ನು ಮತ್ತು ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಸವಣ್ಣ, ಕುವೆಂಪು ಸೇರಿ ಅನೇಕ ಮಹಾನೀಯರು ಮೌಢ್ಯಗಳನ್ನು ಬಿಟ್ಟು ಹೊರಬನ್ನಿ. ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದು ತಮ್ಮ ಕೃತಿಗಳು, ವಚನಗಳು, ಸಂದೇಶಗಳ ಮೂಲಕ ತಿಳಿಸಿದ್ದಾರೆ. ದಾರ್ಶನಿಕರ ಸಂದೇಶಗಳು ನಮ್ಮ ಸಂವಿಧಾನದಲ್ಲಿ ಅಡಕವಾಗಿವೆ. ಆದರೆ, ಜನರು ಅವುಗಳಿಂದ ಹೊರ ಬರುತ್ತಿಲ್ಲ. ಈ ಕುರಿತು ಕಮ್ಯುನಿಸ್ಟರಿಗೆ, ಸಾಹಿತಿಗಳಿಗೆ, ಸಾಮಾನ್ಯ ಜನರಿಗೆ ನಿರ್ಬಂಧ ಇರುವುದಿಲ್ಲ. ಆದರೆ, ರಾಜಕಾರಣಗಳಿಗೆ ನಿರ್ಬಂಧ ಇರುತ್ತವೆ ಎಂದು ಹೇಳಿದರು. ಸಾಮಾನ್ಯವಾಗಿ ನಾನು ದೇಗುಲಕ್ಕೆ ಹೋಗುವುದಿಲ್ಲ. ಹೋದಾಗ ಕುಂಕುಮ ಹಚ್ಚಿದರೆ ಅದಕ್ಕೆ ದೊಡ್ಡ ಕತೆ ಕಟ್ಟುತ್ತಾರೆ. ಆದರೆ, ರಾಜಕಾರಣಿ ದೇಗುಲಕ್ಕೆ ಹೋಗದಿದ್ದರೆ ಓಟ್ ಸಿಗುವುದಿಲ್ಲ. ದೇಗುಲಕ್ಕೆ ಹೋಗುವುದಿಲ್ಲ ಎಂದರೆ, ಅಹಂಕಾರ ಎಷ್ಟಿದೆ ನೋಡು, ಇವರಿಗೆ ಓಟ್ ಹಾಕುವುದು ಬೇಡ ಎನ್ನುತ್ತಾರೆ ಎಂದರು.

ವಿಪಕ್ಷದವರು ಮೂಢಾತ್ಮರು: ಸಿದ್ದರಾಮಯ್ಯ ಅವರ ಕಾಲುಗುಣ ಚೆನ್ನಾಗಿಲ್ಲ, ಕಾಂಗ್ರೆಸ್ ಸರ್ಕಾರದ ಕಾಲುಗುಣ ಸರಿಯಿಲ್ಲ ಎಂದು ವಿರೋಧಪಕ್ಷಗಳು ಟೀಕಿಸಿದ್ದವು. ಈಗ ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆ ಆಗುತ್ತಿದೆ. ವಿರೋಧಪಕ್ಷಗಳು ಮೂಢಾತ್ಮರು. ಈಗ ಏನು ಹೇಳುತ್ತಾರೆ. ನಾವು ಅಧಿಕಾರದಲ್ಲಿದ್ದಾಗ ಯಾವಾಗಲಾದರೂ ರೈತರಿಗೆ ಬೀಜ-ಗೊಬ್ಬರಕ್ಕೆ ತೊಂದರೆ ಮಾಡಿದ್ದೇವಾ. ಬಿತ್ತನೆ ಬೀಜ ಕೇಳಿದವರ ಮೇಲೆ ಗೋಲಿಬಾರ್ ಮಾಡಿದ್ದೇವಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾವೇರಿ ಮಾತೆಗೆ ಬಾಗಿನ ಸಮರ್ಪಣಾ ಸಮಾರಂಭದಲ್ಲಿ ಪ್ರಶ್ನಿಸಿದರು.

ಯಾವ ಇಲಾಖೆಗೆ ದುಡ್ಡು ಕೊಟ್ಟಿಲ್ಲ ಹೇಳಲಿ: ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಶಾಸಕರಿಗೆ ೫೦ ಕೋಟಿ ರು. ಕೊಡಲಾಗಿದೆ. ಡಿ.ಕೆ.ಶಿವಕುಮಾರ್‌ಗೆ ಹೇಳಿ ನೀರಾವರಿಗೆ ಅಂತ ಕೊಡಿಸಿದ್ದೇನೆ. ಆದರೂ ಸರ್ಕಾರದಲ್ಲಿ ದುಡ್ಡಿಲ್ಲ, ಅಭಿವೃದ್ಧಿಗೆ ಕೆಲಸಗಳಿಗೆ ದುಡ್ಡಿಲ್ಲ ಎಂದು ವಿಪಕ್ಷದವರು ಟೀಕೆ ಮಾಡುತ್ತಾರೆ. ಯಾವ ಅಭಿವೃದ್ಧಿಗೆ, ಯಾವ ಇಲಾಖೆಗೆ ದುಡ್ಡು ಕೊಟ್ಟಿಲ್ಲ ಹೇಳಲಿ. ಅಭಿವೃದ್ಧಿಗಾಗಿ ಗ್ಯಾರಂಟಿಗಳನ್ನು ನಿಲ್ಲಿಸಿಲ್ಲ. ಗ್ಯಾರಂಟಿಗಳನ್ನು ಕೊಟ್ಟರೆ ಆರ್ಥಿಕ ದಿವಾಳಿ ಆಗುತ್ತೆ ಎಂದಿದ್ದರು. ಆರ್ಥಿಕ ಶಿಸ್ತಿನ ಮೂಲಕ ಆಡಳಿತ ಮಾಡಿರೋದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಸಮರ್ಥನೆ ಮಾಡಿಕೊಂಡರು.