ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸೀರಂ ಸಂಸ್ಥೆ, ಐಸಿಎಂಆರ್ ಮತ್ತು ಏಮ್ಸ್ ನಡೆಸಿದ ಅಧ್ಯಯನಗಳು ಕೋವಿಡ್ ಲಸಿಕೆಗೂ, ಹಠಾತ್ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ದೃಡಪಡಿಸಿವೆ.
ನವದೆಹಲಿ (ಜು.04): ಹಾಸನ ಜಿಲ್ಲೆಯಲ್ಲಿ ಘಟಿಸುತ್ತಿರುವ ಹಠಾತ್ ಹೃದಯಾಘಾತದ ಸಾವುಗಳಿಗೆ ಕೋವಿಡ್ ಲಸಿಕೆಯೇ ಕಾರಣ ಎಂದಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ದೆಹಲಿಯ ಏಮ್ಸ್ ಆಸ್ಪತ್ರೆ ತಜ್ಞರು, ಕೋವಿಶೀಲ್ಡ್ ಲಸಿಕೆ ತಯಾರಕರಾದ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಹಾಗೂ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ತಳ್ಳಿ ಹಾಕಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಏಮ್ಸ್ನ ಸಹಾಯಕ ಪ್ರಾಧ್ಯಾಪಕ ಡಾ. ಕರಣ್ ಮದನ್, ಹಠಾತ್ ಹೃದಯಸಂಬಂಧಿ ಸಾವುಗಳ ಕುರಿತು ಏಮ್ಸ್ನಿಂದ ಅಧ್ಯಯನ ನಡೆಸಲಾಗಿದೆ.
ಆದರೆ ಸಾವುಗಳಿಗೂ ಲಸಿಕೆಗೂ ಯಾವುದೇ ಸಂಬಂಧ ಕಂಡುಬಂದಿಲ್ಲ ಎಂದರು. ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸೀರಂ ಸಂಸ್ಥೆ, ಐಸಿಎಂಆರ್ ಮತ್ತು ಏಮ್ಸ್ ನಡೆಸಿದ ಅಧ್ಯಯನಗಳು ಕೋವಿಡ್ ಲಸಿಕೆಗೂ, ಹಠಾತ್ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ದೃಡಪಡಿಸಿವೆ. ಲಸಿಕೆಗಳು ಸುರಕ್ಷಿತ ಮತ್ತು ವೈಜ್ಞಾನಿಕವಾಗಿ ಮೌಲ್ಯೀಕರಿಸಲ್ಪಟ್ಟಿವೆ ಎಂದಿದೆ. ಇಂಡಿಯನ್ ಫಾರ್ಮಾಸ್ಯುಟಿಕಲ್ ಅಲೈಯನ್ಸ್ (ಐಪಿಎ) ಔಷಧ ಕಂಪನಿ ಸಹ ಪ್ರತಿಕ್ರಿಯಿಸಿದ್ದು, ಕೋವಿಡ್ ಸಮಯದಲ್ಲಿ ಲಸಿಕೆಗಳು ನಿರ್ಣಾಯಕ ಪಾತ್ರ ವಹಿಸಿವೆ.
ತಪ್ಪು ಮಾಹಿತಿ ನೀಡುವುದು ಮತ್ತು ಸತ್ಯವನ್ನು ತಿರುಚುವುದು ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ ಮತ್ತು ಜಾಗತಿಕವಾಗಿ ವಿಜ್ಞಾನ, ವೈದ್ಯಕೀಯದ ಮೇಲಿನ ನಂಬಿಕೆಯನ್ನು ಹಾಳು ಮಾಡುತ್ತದೆ ಎಂದಿದೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಿರಣ್ ಷಾ, ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೋವಿಡ್ ಲಸಿಕೆಗಳನ್ನು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ, ಕಠಿಣ ಶಿಷ್ಟಾಚಾರಗಳನ್ನು ಅನುಸರಿಸಿ ಅನುಮೋದಿಸಲಾಗಿದೆ. ಈ ಲಸಿಕೆಗಳನ್ನು ಆತುರದಿಂದ ಅನುಮೋದಿಸಲಾಗಿದೆ ಎಂಬ ಹೇಳಿಕೆ ತಪ್ಪು. ಅದು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತದೆ ಎಂದಿದ್ದಾರೆ.
ಹೆಚ್ಚಾಗುತ್ತಿರುವ ಹೃದಯಾಘಾತ ಪ್ರಕರಣಗಳು: ಜಿಲ್ಲೆಯಲ್ಲಿ ಯುವಕರು ಮತ್ತು ಮಕ್ಕಳಲ್ಲಿ, ಹೃದಯಾಘಾತ ಪ್ರಕರಣಗಳ ಆತಂಕಕಾರಿ ಏರಿಕೆಯ ಕುರಿತು ಸಂಸದ ಶ್ರೇಯಸ್ ಎಂ. ಪಟೇಲ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಅಧಿಕಾರಿಗಳು ಮತ್ತು ಸಾರ್ವಜನಿಕರು ತಕ್ಷಣದ ಮತ್ತು ಸಮನ್ವಯದ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಕರೆ ನೀಡಿದ್ದಾರೆ. ನಗರದ ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಆಘಾತಕಾರಿ ಅಂಕಿಅಂಶಗಳನ್ನು ಬಹಿರಂಗಪಡಿಸಿ, ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ 507 ಹೃದಯಾಘಾತ ಪ್ರಕರಣಗಳು ವರದಿಯಾಗಿದ್ದು, ೧೯೦ ಸಾವುಗಳು ಸಂಭವಿಸಿವೆ. ಇದು ತಕ್ಷಣದ ಗಮನಹರಿಸಬೇಕಾದ ಗಂಭೀರ ಸಂಗತಿಯಾಗಿದೆ. ಕೋವಿಡ್ ಲಸಿಕೆ ಮತ್ತು ಹೃದಯಾಘಾತದ ಕುರಿತ ಪ್ರಶ್ನೆಗೆ ಸ್ಪಷ್ಟನೆ ನೀಡಿ, ಕೋವಿಡ್ ಲಸಿಕೆ ಮತ್ತು ಹೃದಯಾಘಾತ ಪ್ರಕರಣಗಳ ಹೆಚ್ಚಳದ ನಡುವೆ ಸಂಬಂಧವಿದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಲಸಿಕೆ ನೀಡಿ ಈಗಾಗಲೇ ಎರಡು ವರ್ಷಗಳಾಗಿವೆ. ಸದ್ಯಕ್ಕೆ ಇದರ ಬಗ್ಗೆ ಯಾವುದೇ ನಿರ್ದಿಷ್ಟವಾದ ಅಥವಾ ಅಧಿಕೃತ ಮಾಹಿತಿಯಿಲ್ಲ.
ಅನಗತ್ಯ ಗೊಂದಲಗಳಿಗೆ ದಾರಿ ಮಾಡಿಕೊಡುವುದು ಬೇಡ ಎಂದು ಸ್ಪಷ್ಟಪಡಿಸಿದರು. ತಜ್ಞರ ಚರ್ಚೆಗಳ ಆಧಾರದ ಮೇಲೆ, ಬಿಕ್ಕಟ್ಟನ್ನು ಎದುರಿಸಲು ಸಂಸದ ಪಟೇಲ್ ಹಲವಾರು ಕ್ರಮಗಳನ್ನು ವಿವರಿಸಿ, ಆರಂಭಿಕ ಹಂತದಲ್ಲಿ ಹೃದಯಾಘಾತ ಪತ್ತೆ ಮತ್ತು ಚಿಕಿತ್ಸೆ ಸಾಮರ್ಥ್ಯವನ್ನು ಹೆಚ್ಚಿಸಲು, ವೈದ್ಯಕೀಯ ತಂತ್ರಜ್ಞರಿಗೆ ವಿಶೇಷ ತರಬೇತಿ ಕಾರ್ಯಕ್ರಮವು ಈ ವಾರದಿಂದ ಪ್ರಾರಂಭವಾಗಲಿದೆ. ವೈದ್ಯಕೀಯ ಸಲಹೆಗಳ ಅನುಷ್ಠಾನದ ಬಗ್ಗೆ ಸಭೆಯಲ್ಲಿ ವೈದ್ಯಕೀಯ ವೃತ್ತಿಪರರು ನೀಡಿದ ಸಲಹೆಗಳನ್ನು ಜಾರಿಗೆ ತರಲು ಆಡಳಿತವು ಆದ್ಯತೆ ನೀಡಲಿದೆ.
