Asianet Suvarna News Asianet Suvarna News

Santosh Suicide Case: ಕಾಂಗ್ರೆಸ್ಸಿಗರು ತನಿಖಾಧಿಕಾರಿಗಳಾಗುವುದು ಬೇಡ: ಸಿಎಂ ಬೊಮ್ಮಾಯಿ

*  ಮುಕ್ತ ತನಿಖೆಯಾಗಲು ಬಿಡಬೇಕು: ಮುಖ್ಯಮಂತ್ರಿ ಬೊಮ್ಮಾಯಿ
*  ಇದೆಲ್ಲವೂ ಕಾಂಗ್ರೆಸ್‌ ಷಡ್ಯಂತ್ರ: ಅರುಣ ಸಿಂಗ್‌
*  40ರಷ್ಟು ಕಮಿಷನ್‌ ಪಡೆಯುತ್ತಾರೆಂಬುದು ಅರ್ಥವಿಲ್ಲದ ಆರೋಪ
 

CM Basavaraj Bommai Slams on Congress grg
Author
Bengaluru, First Published Apr 16, 2022, 7:10 AM IST

ಹುಬ್ಬಳ್ಳಿ(ಏ.16):  ಕಾಂಗ್ರೆಸ್ಸಿಗರು(Congress) ತನಿಖಾಧಿಕಾರಿಗಳು, ನ್ಯಾಯಮೂರ್ತಿಗಳಾಗುವ ಅವಶ್ಯಕತೆ ಇಲ್ಲ. ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ ಮುಕ್ತವಾಗಿ ತನಿಖೆಯಾಗಲು ಬಿಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಕಿವಿಮಾತು ಹೇಳಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪ(KS Eshwarappa) ಬಂಧನಕ್ಕೆ ಕಾಂಗ್ರೆಸ್‌ ಆಗ್ರಹಿಸುತ್ತಿರುವುದಕ್ಕೆ ಮೇಲಿನಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಪೊಲೀಸರಿಗೆ(Police) ತಮ್ಮ ಕೆಲಸ ಮಾಡಲು ಬಿಡಬೇಕು. ಏನು ಅವಶ್ಯಕತೆ ಇದೆ, ಏನಿಲ್ಲ ಎಂಬುದು ಪೊಲೀಸರು ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ಸಿನವರು ಯಾಕೆ ಗಾಬರಿಯಾಗುತ್ತಿದ್ದಾರೆ. ಸತ್ಯ ಹೊರಬರಲಿ. ಅದು ಬಿಟ್ಟು ಇವರೇ ತನಿಖಾಧಿಕಾರಿ, ಜಡ್ಜ್‌ ಆಗುವುದು ಸರಿಯಲ್ಲ ಎಂದರು.

ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯಲ್ಲಿ ಉಕಕ್ಕೆ ಅನ್ಯಾಯ!

ಈ ಪ್ರಕರಣ ಒಂದು ಷಡ್ಯಂತ್ರವೇ ಎಂಬ ಪ್ರಶ್ನೆಗೆ, ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯಲಿದೆ. ಸತ್ಯಾಂಶ ಹೊರಬೀಳಲಿದೆ. ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಆಗಿನ ಗೃಹ ಸಚಿವ ಕೆ.ಜೆ. ಜಾರ್ಜ್‌(KJ George) ಅವರನ್ನು ಬಂಧಿಸಿರಲಿಲ್ಲ. ತನಿಖೆ(Investigation) ನಡೆಯಲಿ ಸತ್ಯಾಂಶ ಹೊರಬರುತ್ತದೆ ಎಂದರು. ಕೆ.ಎಸ್‌. ಈಶ್ವರಪ್ಪ ತಾವಾಗಿಯೇ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡುತ್ತಿದ್ದಾರೆ. ಹೀಗಿದ್ದೂ ಬಂಧಿಸುವಂತೆ ಹೇಳುತ್ತಿದ್ದಾರೆ ಎಂದು ಖಾರವಾಗಿ ಪ್ರತಿಕ್ರೀಯಿಸಿದರು.

ಕೆ.ಎಸ್‌. ಈಶ್ವರಪ್ಪ ಅವರ ರಾಜೀನಾಮೆ ಘೋಷಣೆಯಿಂದ ಸರ್ಕಾರಕ್ಕೆ ಹಿನ್ನಡೆ ಅಥವಾ ಮುಜುಗರ ತಂದಿದೆಯೇ ಎಂಬ ಪ್ರಶ್ನೆಗೆ, ತನಿಖೆಯಾದ ನಂತರ ಈಶ್ವರಪ್ಪ ಅವರು ಆರೋಪ ಮುಕ್ತರಾಗುವ ಬಗ್ಗೆ ವಿಶ್ವಾಸ ಇದೆ. ಇಲ್ಲಿ ಯಾರದೂ ವೈಯಕ್ತಿಕ ವಿಚಾರವಿಲ್ಲ. ಇಲ್ಲಿ ಹಿನ್ನಡೆ, ಮುನ್ನಡೆ ಪ್ರಶ್ನೆ ಬರುವುದಿಲ್ಲ. ಈಶ್ವರಪ್ಪ ತಮ್ಮೊಂದಿಗೆ ಚರ್ಚೆ ನಡೆಸಿದ್ದಾರೆ. ಅವರಿಗೆ ಅವರ ನಿಲುವಿನ ಬಗ್ಗೆ ಸ್ಪಷ್ಟತೆ ಇದೆ ಎಂದು ನುಡಿದರು.

ಈಶ್ವರಪ್ಪ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ

ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್‌. ಈಶ್ವರಪ್ಪ ಅವರ ಮೇಲಿನ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದೆಲ್ಲವೂ ಕಾಂಗ್ರೆಸ್‌ ಷಡ್ಯಂತ್ರ. ಪ್ರಕರಣದ ತನಿಖೆ ನಡೆಯುತ್ತಿದೆ ಸತ್ಯ ಬಹಿರಂಗವಾಗಲಿದೆ ಎಂದು ಬಿಜೆಪಿ(BJP) ರಾಜ್ಯ ಉಸ್ತುವಾರಿ ಅರುಣ ಸಿಂಗ್‌(Arun Singh) ತಿಳಿಸಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 40ರಷ್ಟು ಕಮಿಷನ್‌ ಪಡೆಯುತ್ತಾರೆ ಎನ್ನುವುದು ಅರ್ಥವಿಲ್ಲದ ಆರೋಪ. ಈ ಕುರಿತು ಕಾಂಗ್ರೆಸಿಗರು ಷಡ್ಯಂತ್ರ ನಡೆಸುತ್ತಿದ್ದಾರೆ ಅಷ್ಟೇ. ಜನರಲ್ಲೂ ಗೊಂದಲ ಸೃಷ್ಟಿಸಿ ತಾವೂ ಗೊಂದಲದಲ್ಲೇ ಬದುಕು ಸಾಗಿಸುತ್ತಿದ್ದಾರೆ ಎಂದರು.

40ರಷ್ಟು ಕಮಿಷನ್‌(40% Commission) ಎನ್ನುವುದೇ ಗೊಂದಲದ ವಿಷಯ. ಗುತ್ತಿಗೆದಾರರ ಆರೋಪದ ಹಿಂದೆಯೂ ಕಾಂಗ್ರೆಸ್‌ ಕೈವಾಡವಿದೆ. ಆತ್ಮಹತ್ಯೆ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಸತ್ಯ ಬಹಿರಂಗವಾಗಲಿದೆ. ರಾಜ್ಯದ ಜನತೆಗೂ ಸತ್ಯ ಏನೆಂದು ತಿಳಿದಿದೆ ಎಂದರು.

ಕಾಂಗ್ರೆಸ್‌ ಗೊಂದಲ ಸೃಷ್ಟಿಸುತ್ತಿರುವುದು ಇದೇ ಮೊದಲ ಅಲ್ಲ. ಅನೇಕ ವರ್ಷಗಳಿಂದ ಇದನ್ನೇ ಮಾಡಿಕೊಳ್ಳುತ್ತಲೇ ಬರುತ್ತಿದೆ. ಹಿಂದಿನ ದಾಖಲೆಗಳನ್ನು ತೆಗೆದು ನೋಡಿದರೆ ಸತ್ಯ ತಿಳಿಯುತ್ತದೆ. ಚುನಾವಣೆ ಸಮೀಪಿಸುತ್ತಿದ್ದಂತೆ ರಾಹುಲ್‌ ಗಾಂಧಿ ಮಂದಿರಕ್ಕೆ ಭೇಟಿ ನೀಡುತ್ತಾರೆ. ಉಳಿದ ವೇಳೆ ನಾಪತ್ತೆಯಾಗುತ್ತಾರೆ. ಕೋವಿಡ್‌ ವ್ಯಾಕ್ಸಿನ್‌ ಬಂದಾಗ ರಾಹುಲ್‌ ಗಾಂಧಿ ಮೋದಿ ವ್ಯಾಕ್ಸಿನ್‌ ಎಂದಿದ್ದರು. ನಂತರ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅದೇ ವ್ಯಾಕ್ಸಿನ್‌ ಪಡೆಯುತ್ತಾರೆ ಎಂದು ವ್ಯಂಗ್ಯವಾಡಿದರು.

ಕಾಶ್ಮೀರದಲ್ಲಿ 370 ಕಲಂ ರದ್ದು ಮಾಡಿದಾಗ ಕಾಂಗ್ರೆಸ್‌ ಗದ್ದಲ ಎಬ್ಬಿಸಿತ್ತು. ಕೋರ್ಚ್‌ನಲ್ಲಿ ರಾಮಮಂದಿರ ವಿಷಯ ಬಂದಾಗ, ಆಗಲೂ ಗೊಂದಲ ಸೃಷ್ಟಿಸಿ ತೀರ್ಪು ನೀಡದಂತೆ ನ್ಯಾಯಧೀಶರಿಗೆ ಒತ್ತಡ ಹೇರಿತ್ತು. ಇದೆಲ್ಲವನ್ನೂ ನೋಡಿದಾಗ ಕಾಂಗ್ರೆಸ್‌ ಗೊಂದಲದಲ್ಲಿ ಸಿಲುಕಿದೆ ಎಂದು ಭಾಸವಾಗುತ್ತದೆ. ಈಶ್ವರಪ್ಪ ವಿಷಯದಲ್ಲೂ ಅದೇ ಆಗಿದೆ ಅಷ್ಟೇ ಎಂದರು.

ಕಾಂಗ್ರೆಸ್‌ ಜನರ ನಡುವೆ ಹೋಗುವುದಿಲ್ಲ. ಯಾವ ಅಭಿವೃದ್ಧಿ ಕೆಲಸಕ್ಕೂ ಕೈ ಜೋಡಿಸುವುದಿಲ್ಲ. ಅವರ ಎಲ್ಲ ಮುಖಂಡರು ಸಹ ಷಡ್ಯಂತ್ರ ನಡೆಸುವುದರಲ್ಲಿಯೇ ಕಾಲ ಕಳೆಯುತ್ತಾರೆ ಎಂದು ಆರೋಪಿಸಿದ ಅವರು, ಕರ್ನಾಟಕ ಸೇರಿ ಮುಂಬರುವ ಎಲ್ಲ ರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಕರ್ನಾಟಕದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್‌ ಸಂಪೂರ್ಣ ನೆಲಕಚ್ಚಲಿದೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್‌ ಸತ್ಯ ಎದುರಿಸುವ ದಿನ ಬರಲಿದೆ: ವಿಪಕ್ಷದ ವಿರುದ್ಧ ಬೊಮ್ಮಾಯಿ ಕಿಡಿ

ಇತ್ತೀಚಿಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ಕಡೆ ಬಿಜೆಪಿ ಬಂದಿದೆ. ಬಿಜೆಪಿ ಜನಪರ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ? ಎಂದ ಪ್ರಶ್ನಿಸಿದ ಅವರು, ಕರ್ನಾಟಕದಲ್ಲೂ ಅದೇ ರೀತಿ ಆಗುತ್ತದೆ. ಇಲ್ಲಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಳ, ಸಜ್ಜನರಾಗಿದ್ದಾರೆ. ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ ಎಂದರು. ಚುನಾವಣೆ ವಿಷಯ ಏನಿರುತ್ತದೆ ಎಂಬ ಪ್ರಶ್ನೆಗೆ, ನಮ್ಮದು ಏನಿದ್ದರೂ ಬರೀ ವಿಕಾಸ, ಅಭಿವೃದ್ಧಿ ಮೇಲೆಯೇ ಚುನಾವಣೆ ಎದುರಿಸುತ್ತೇವೆ. ಅದರ ಆಧಾರದ ಮೇಲೆಯೇ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೊಸಪೇಟೆಯಲ್ಲಿ ನಡೆಯಲಿರುವ ಕಾರ್ಯಕಾರಿಣಿಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪಾಲ್ಗೊಳ್ಳಲಿದ್ದಾರೆ. ಅವರ ಸ್ವಾಗತಕ್ಕೆ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ಸಿದ್ಧತೆ ನಡೆಸಿದ್ದಾರೆ. ಕಾರ್ಯಕಾರಿಣಿ ಪಕ್ಷದ ಕಾರ್ಯಕರ್ತರಿಗೆ ಉತ್ತೇಜನ ನೀಡಲಿದೆ ಎಂದರು.

ಪಿಎಫ್‌ಐ ಸಂಘಟನೆ ನಿಷೇಧ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರವಿದ್ದಾಗ ಪಿಎಫ್‌ಐ ಸಂಘಟನೆಯ ಪಥಸಂಚಲನ ನಡೆಯುತ್ತಿತ್ತು. ಆ ಸಂದರ್ಭ 23 ಹಿಂದೂಗಳ ಹತ್ಯೆ ಸಹ ನಡೆದಿತ್ತು. ಬಿಜೆಪಿ ಸರ್ಕಾರ ಬಂದಾಗ ಸಂಘಟನೆಯನ್ನು ನಿಯಂತ್ರಿಸಿದೆ. ಕಾಂಗ್ರೆಸ್‌ ಆಡಳಿತವಿರುವ ರಾಜಸ್ಥಾನದಲ್ಲಿ ಪಿಎಫ್‌ಐ ಸಕ್ರಿಯವಾಗಿದೆ. ಕೆಲವೆಡೆ ಗಲಭೆ ಸಹ ನಡೆಯುತ್ತಿವೆ. ಇದಕ್ಕೆ ಕಾಂಗ್ರೆಸ್‌ ಬೆಂಬಲವಿರುವುದು ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.
 

Follow Us:
Download App:
  • android
  • ios