Asianet Suvarna News Asianet Suvarna News

ಸಿದ್ಧಾಂತದಡಿ ಬೆಳೆದವರಿಂದಲೇ ಮೋಸ: ಶಾಸಕ ಶಿವರಾಮ ಹೆಬ್ಬಾರ್

ನಾನು ನಂಬಿದ ಸಿದ್ಧಾಂತವೇ ನನ್ನ ಕಾಲೆಳೆದರೆ ಎನಾದಿತು. ಆದರೂ ನಾನು ಅವೆಲ್ಲವನ್ನೂ ಮೆಟ್ಟಿನಿಂತಿದ್ದೇನೆ. ಈ ಚುನಾವಣೆಯಲ್ಲಿ ಸಿದ್ದಾಂತದಡಿಯೇ ಬೆಳೆದು ಬಂದವರು ಮೋಸ ಮಾಡಿರುವುದು ಮಾತ್ರ ವಿಪರ್ಯಾಸ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

Cheating by who those grew up under ideology: MLA Shivram Hebbar at yallapur rav
Author
First Published Jun 7, 2023, 5:44 AM IST

ಯಲ್ಲಾಪುರ (ಜೂ.7) ನಾನು ನಂಬಿದ ಸಿದ್ಧಾಂತವೇ ನನ್ನ ಕಾಲೆಳೆದರೆ ಎನಾದಿತು. ಆದರೂ ನಾನು ಅವೆಲ್ಲವನ್ನೂ ಮೆಟ್ಟಿನಿಂತಿದ್ದೇನೆ. ಈ ಚುನಾವಣೆಯಲ್ಲಿ ಸಿದ್ದಾಂತದಡಿಯೇ ಬೆಳೆದು ಬಂದವರು ಮೋಸ ಮಾಡಿರುವುದು ಮಾತ್ರ ವಿಪರ್ಯಾಸ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಪಟ್ಟಣದ ಅಡಕೆ ಭವನದಲ್ಲಿ ತಾಲೂಕಾ ಅಡಕೆ ವ್ಯವಹಾರಸ್ಥರ ಸಂಘ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಅತ್ಯಂತ ಕಡಿಮೆ ಮತಗಳ ಅಂತರದಿಂದ ವಿಜಯಶಾಲಿಯಾದ ಕುರಿತ ನೋವಿನಿಂದ ಹೆಬ್ಬಾರರು ಇನ್ನೂ ಹೊರ ಬಂದಿಲ್ಲವೆಂಬ ಭಾವನೆ ಕೆಲವರಲ್ಲಿ ಇದೆ. ಒಂದು ಸಿದ್ದಾಂತದ ಅಡಿಯಲ್ಲಿ ಕೆಲಸ ಮಾಡುತ್ತಾ ಬಂದವರು ತಾವು ನಂಬಿದ ಸಿದ್ದಾಂತದ ವಿರುದ್ಧವೇ ಕೆಲಸ ಮಾಡಿದ್ದು ನೋವು ತಂದಿದೆಯೇ ಹೊರತು, ಇದಕ್ಕೆ ಬೇರೇನೂ ಕಾರಣಗಳಿಲ್ಲ ಎಂದರು.

ಉತ್ತರ ಕನ್ನಡ: ಯಲ್ಲಾಪುರ ಕ್ಷೇತ್ರ ಅಭಿವೃದ್ಧಿ ಕಾರ್ಯವೇ ಒಂದು ಸವಾಲು !

ನನ್ನನ್ನು 4ನೇ ಬಾರಿ ಈ ಕ್ಷೇತ್ರದ ಜನ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ್ದಾರೆ. ಪ್ರತಿಯೊಂದರಲ್ಲೂ ಸಮಸ್ಯೆ ಮತ್ತು ಸವಾಲುಗಳಿರುವುದು ಸಹಜ. ಅದನ್ನು ಮೆಟ್ಟಿನಿಂತು ಹೋರಾಡುವ ಸಾಮರ್ಥ್ಯ ನನಗಿದೆ. ಪ್ರತಿ ಚುನಾವಣೆಯೂ ಹೊಸ ಹೊಸ ಅನುಭವ ನೀಡುತ್ತದೆ. ಹಿಂದೆ ನಾವು 17 ಜನ ಧೈರ್ಯ ಮಾಡಿ 6 ತಿಂಗಳ ಕಾಲ ಸೆರೆಮನೆವಾಸ ಅನುಭವಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಯಡಿಯೂರಪ್ಪನವರ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿದ್ದೇವು. ಕುಟುಂಬದಿಂದ ದೂರವಿದ್ದು, ಕೇಳಬಾರದ ನಿಂದನೆಗೆ ಒಳಗಾಗಿದ್ದೇವೆ. ಅಲ್ಲದೇ ಮಾಧ್ಯಮಗಳ ಟೀಕೆ ಟಿಪ್ಪಣಿ ಎದುರಿಸಿದ್ದೇವೆ. ಮಂತ್ರಿಯಾಗಿದ್ದರೂ 2 ವರ್ಷ ಕೋವಿಡ್‌ ಸಂಕಷ್ಟವನ್ನು ಮೆಟ್ಟಿನಿಂತು, ಶಕ್ತಿ ಮೀರಿ ಅಭಿವೃದ್ಧಿ ಕಾರ್ಯ ಸಾಧಿಸಿದ್ದೇನೆ ಎಂದರು.

ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಎಪಿಎಂಸಿ, ಕೆಡಿಸಿಸಿ ಮತ್ತು ಅಪೆಕ್ಸ್‌ ಬ್ಯಾಂಕ್‌ಗಳ ಆಡಳಿತ ಮಂಡಳಿಗೆ ಆಯ್ಕೆ ಮಾಡಿದ್ದಲ್ಲದೇ, 4 ಬಾರಿ ಶಾಸಕನನ್ನಾಗಿಸಿದ್ದಾರೆ ಆದ್ದರಿಂದ ಜನರನ್ನು ಮರೆಯುವ ಪ್ರಶ್ನೆಯೇ ಇಲ್ಲ. ಭವಿಷ್ಯತ್ತಿನಲ್ಲಿ ಯಾರು ಮೋಸ ಮಾಡಿದ್ದಾರೋ ಅಂತಹ ಜನರಿಗೆ ಅದರ ಅರಿವಾಗಲಿದೆ. ನಾನು ವಿಷಯಾಧಾರಿತ ರಾಜಕಾರಣ ಮಾತ್ರ ಮಾಡುತ್ತೇನೆ. ಜಾತಿ ರಾಜಕಾರಣ ಮಾಡಲಾರೆ. ಆದರೆ ಜನರ ಸಾತ್ವಿಕ ಟೀಕೆಯನ್ನೇ ಜನರ ಎಚ್ಚರಿಕೆಯ ಸೂಚನೆ ಎಂದು ಭಾವಿಸುತ್ತೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ರವಿ ಹೆಗಡೆ ಮಾತನಾಡಿ, ಶಾಸಕ ಹೆಬ್ಬಾರರು ಶಿರಸಿ ರಸ್ತೆಯ ಎಪಿಎಂಸಿ ಯವರೆಗೆ ನಮ್ಮ ಸಂಘದ ಬೇಡಿಕೆಗೆ ಸ್ಪಂದಿಸಿ ರಸ್ತೆ ಅಗಲಿಕರಣ ಮಾಡಿದ್ದಾರೆ. ಕಾರ್ಮಿಕ ಖಾತೆಯನ್ನು ವಹಿಸಿಕೊಂಡು ದೇಶದಲ್ಲಿ ಹೆಸರು ಮಾಡಿದ್ದಾರೆ ಎಂದರು.

ಹವ್ಯಕ ಸಂಘದ ಅಧ್ಯಕ್ಷ ಡಿ. ಶಂಕರ್‌ ಭಟ್ಟಮಾತನಾಡಿ, ತಾಲೂಕಿನ ರೈತರ ಜೀವನಾಡಿಯಾಗಿರುವ ಎಪಿಎಂಸಿಯನ್ನು ಕಟ್ಟಿಬೆಳೆಸಿದ ಹೆಬ್ಬಾರರು, ಶಾಸಕರಾದ ನಂತರ ಅತ್ಯಾಧುನಿಕ ಆಸ್ಪತ್ರೆ ನಿರ್ಮಿಸಿ ಬಡವರ ಆಶಾಕಿರಣವಾಗಿದ್ದಾರೆ ಎಂದರು.

ಮಲೆನಾಡು ಕೃಷಿ ಅಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಆರ್‌. ಹೆಗಡೆ ಕುಂಬ್ರಿಗುಡ್ಡೆ ಮಾತನಾಡಿ, ಹೆಬ್ಬಾರ ಯಲ್ಲಾಪುರದ ಸಮಗ್ರ ಅಭಿವೃದ್ಧಿ ಹರಿಕಾರರು. ಅವರ ಪ್ರತಿ ಕಾರ್ಯಗಳನ್ನು ನಾವು ಬೆಂಬಲಿಸಿದಾಗ ಮಾತ್ರ ಅಭಿವೃದ್ಧಿ ಸಾದ್ಯ. 10 ವರ್ಷದ ಹಿಂದಿನ ಯಲ್ಲಾಪುರದ ಸ್ಥಿತಿಗೂ, ಇಂದಿನ ಸ್ಥಿತಿಗೂ ಇರುವ ವ್ಯತ್ಯಾಸಗಳ ಅರಿವಾಗಲು ಬೇರೆ ಕ್ಷೇತ್ರಗಳಿಗೆ ಹೋಗಿ ನೋಡಬೇಕು ಎಂದರು.

ವೈಟಿಎಸ್‌ಎಸ್‌ ಅಧ್ಯಕ್ಷ ರವಿ ಶಾನಭಾಗ, ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್‌ ಮಾತನಾಡಿದರು.

 

ಯಾವುದೇ ಸರ್ಕಾರವಿದ್ದರೂ ಅಭಿವೃದ್ಧಿಗೆ ತೊಡಕಾಗದು: ಶಾಸಕ ಶಿವರಾಮ ಹೆಬ್ಬಾರ್

ಈ ಸಂದರ್ಭದಲ್ಲಿ ತಾಲೂಕ ಹವ್ಯಕ ಸಂಘ, ಕಿರಾಣಿ ವರ್ತಕರ ಸಂಘ, ದುಗಾಂರ್‍ಬಾ ದಲಾಲ್ಸ್‌ , ಓಂಕಾರ್‌ ಟ್ರೇಡಿಂಗ್‌ ಕಂಪನಿ, ವಿಕಾಸ್‌ ಅರ್ಬನ್‌ ಬ್ಯಾಂಕ್‌ ಸಿಬ್ಬಂದಿ, ಟಿಎಂಎಸ್‌ ಸಿಬ್ಬಂದಿ, ಟಿಎಸ್‌ಎಸ್‌ ಸಿಬ್ಬಂದಿ, ಸಹ್ಯಾದ್ರಿ ಸೇವಾ ಸಹಕಾರಿ ಸಂಘ, ಕೈಗಾರಿಕಾ ಸೇವಾ ಸಹಕಾರಿ ಸಂಘ, ಕ್ಯಾಂಪ್ಕೊ ಅಧಿಕಾರಿಗಳು, ಎಂ.ಕೆ.ಬಿ ಗ್ರೂಪ್‌ ಮುಂತಾದವರು ಶಾಸಕ ಶಿವರಾಮ್‌ ಹೆಬ್ಬಾರರನ್ನು ಸನ್ಮಾನಿಸಿದರು.

ವಿಕಾಸ್‌ ಬ್ಯಾಂಕ್‌ ಅಧ್ಯಕ್ಷ ಮುರಳಿ ಹೆಗಡೆ ಶುಭ ಕೋರಿದರು. ಅಡಕೆ ವ್ಯವಹಾಸ್ಥರ ಸಂಘದ ಕಾರ್ಯದರ್ಶಿ ಮಾರುತಿ ಘಟ್ಟಿಸ್ವಾಗತಿಸಿ, ನಿರ್ವಹಿಸಿದರು.

6ವೈ.ಎಲ್‌.ಪಿ. 01 ಅಡಕೆ ಭವನದಲ್ಲಿ ತಾಲೂಕಾ ಅಡಕೆ ವ್ಯವಹಾರಸ್ಥರ ಸಂಘದ ವತಿಯಿಂದ ಶಾಸಕರನ್ನು ಅಭಿನಂದಿಸಲಾಯಿತು.

Follow Us:
Download App:
  • android
  • ios