ಅಥಣಿ ಮತ ಕ್ಷೇತ್ರದಲ್ಲಿ ಯಾವುದೇ ನಾಯಕರು ಬಂದು ಪ್ರಚಾರ ಮಾಡಲಿ. ನನ್ನ ಮತ ಕ್ಷೇತ್ರದ ಮತದಾರರು ನನಗೆ ಆಶೀರ್ವಾದ ಮಾಡುತ್ತಾರೆಂಬ ಆತ್ಮವಿಶ್ವಾಸವಿದೆ. ಮೇ. 13ರವರೆಗೆ ಯಾವ ನಾಯಕರ ಆರೋಪ ಪ್ರತ್ಯಾರೋಪಗಳಿಗೆ ಉತ್ತರಿಸುವುದಿಲ್ಲ. ಚುನಾವಣಾ ಫಲಿತಾಂಶದ ದಿನವೇ ಕ್ಷೇತ್ರದ ಮತದಾರರು ತಕ್ಕ ಉತ್ತರ ನೀಡುತ್ತಾರೆ ಎಂದ ಲಕ್ಷ್ಮಣ ಸವದಿ. 

ಅಥಣಿ(ಏ.28):  ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪನವರು ಹೇಳಿದಂತೆ ನಾನೇನು ಬಿಜೆಪಿ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲ. ಅವರೇ ನನ್ನನ್ನು ಪಕ್ಷದಿಂದ ಹೊರ ದೂಡಿದ್ದಾರೆ. ಕೊಟ್ಟ ಮಾತಿನಂತೆ ನನಗೆ ಟಿಕೆಟ್‌ ನೀಡಿದೇ ಮೋಸ ಮಾಡಿದ್ದಾರೆ. ಅಲ್ಲದೆ ಯಡಿಯೂರಪ್ಪನವರು ಬಿಜೆಪಿ ಪಕ್ಷವನ್ನು ತೊರೆದು ಕೆಜೆಪಿ ಪಕ್ಷಕ್ಕೆ ಹೋಗಿ ಬಂದವರು. ಈಗ ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗಿಲ್ಲ ಎಂದು ಬಿಎಸ್‌ವೈ ಅವರಿಗೆ ಮಾಜಿ ಡಿಸಿಎಂ, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಲಕ್ಷ್ಮಣ ಸವದಿ ತಿರುಗೇಟು ನೀಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಥಣಿ ಮತ ಕ್ಷೇತ್ರದಲ್ಲಿ ಯಾವುದೇ ನಾಯಕರು ಬಂದು ಪ್ರಚಾರ ಮಾಡಲಿ. ನನ್ನ ಮತ ಕ್ಷೇತ್ರದ ಮತದಾರರು ನನಗೆ ಆಶೀರ್ವಾದ ಮಾಡುತ್ತಾರೆಂಬ ಆತ್ಮವಿಶ್ವಾಸವಿದೆ. ಮೇ. 13ರವರೆಗೆ ಯಾವ ನಾಯಕರ ಆರೋಪ ಪ್ರತ್ಯಾರೋಪಗಳಿಗೆ ಉತ್ತರಿಸುವುದಿಲ್ಲ. ಚುನಾವಣಾ ಫಲಿತಾಂಶದ ದಿನವೇ ಕ್ಷೇತ್ರದ ಮತದಾರರು ತಕ್ಕ ಉತ್ತರ ನೀಡುತ್ತಾರೆ ಎಂದರು.

KARNATAKA ELECTION 2023: ಕಾಂಗ್ರೆಸ್‌ ಮುಕ್ತ ಭಾರತ ಮಾಡುವ ಬದ್ಧರಾಗಬೇಕು: ಬಿಎಸ್‌ವೈ

ಆಣೆ, ಪ್ರಮಾಣ ಮಾಡಲಿ:

ಶಾಸಕ ಮಹೇಶ ಕುಮಟಳ್ಳಿ ಕಾಂಗ್ರೆಸ್‌ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಬರುವ ಸಂದರ್ಭದಲ್ಲಿ .50 ಕೋಟಿಗಳನ್ನು ಪಡೆದುಕೊಂಡಿದ್ದಾರೆನ್ನುವ ಆರೋಪ ನಾನು ಎಲ್ಲಿಯೂ ಮಾಡಿಲ್ಲ. ದೇವಸ್ಥಾನಕ್ಕೆ ಹೋಗಿ ಆಣೆ ಪ್ರಮಾಣ ಮಾಡುವ ಅಗತ್ಯ ಇಲ್ಲ, ಹೇಳಿದ ವ್ಯಕ್ತಿ ಅದೇ ಪಕ್ಷದಲ್ಲಿ ಇರುವುದರಿಂದ ಇಬ್ಬರೂ ಕೂಡಿ ದೇವಸ್ಥಾನಕ್ಕೆ ಹೋದರೇ ಇಬ್ಬರಿಗೂ ಮಾನಸಿಕ ನೆಮ್ಮದಿ ದೊರಕುತ್ತದೆ ಎಂದು ಮಹೇಶ್‌ ಕುಮಟಳ್ಳಿ ಹೇಳಿಕೆಗೆ ಮಾಜಿ ಡಿಸಿಎಂ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ ಸವದಿ ತಿರುಗೇಟು ನೀಡಿದರು.

ಮಾಜಿ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಅನೇಕ ಕಾಂಗ್ರೆಸ್‌ ಪಕ್ಷದ ಮುಖಂಡರು ಬಿಜೆಪಿ ಪಕ್ಷವನ್ನು ಸೇರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಕಾಂಗ್ರೆಸ್‌ ಪಕ್ಷಕ್ಕೆ ಬಂದ ನಂತರ ಬಿಜೆಪಿಯ ಅನೇಕ ಮುಖಂಡರು ಮತ್ತು ಪುರಸಭೆಯ ಎಲ್ಲ ಸದಸ್ಯರು ಕಾಂಗ್ರೆಸ್‌ ಪಕ್ಷಕ್ಕೆ ಬಂದಿದ್ದಾರೆ. ಒಬ್ಬರು ಅಥವಾ ಇಬ್ಬರು ಪಕ್ಷ ಬಿಟ್ಟು ಹೋಗುವುದರಿಂದ ನಮಗೆ ಅಂತಹ ನಷ್ಟವೆನಿಲ್ಲ. ಮತಕ್ಷೇತ್ರದಲ್ಲಿ ಜನರು ಬದಲಾವಣೆ ಬಯಸಿದ್ದಾರೆ. ರಾಜ್ಯದಲ್ಲಿ ಕೂಡ ಕಾಂಗ್ರೆಸ್‌ ಪರವಾದ ಅಲೆ ಇರುವುದರಿಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾದ ನನಗೆ ಮತದಾರರು ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ಹೆಚ್ಚಿನ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸುತ್ತಾರೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.