ಇಡೀ ರಾಜ್ಯದಲ್ಲಿ ಅಭಿವೃದ್ಧಿಯೇ ಸ್ಥಗಿತಗೊಂಡಿದೆ. ಭ್ರಷ್ಟಾಚಾರ ಮಿತಿ ಮೀರಿರುವುದೇ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹರಿಹಾಯ್ದರು.
ದಾವಣಗೆರೆ (ಏ.01): ನಂಬಿಕೆ ದ್ರೋಹ, ವಿಶ್ವಾಸದ್ರೋಹಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ. ಸಿದ್ದು-ಡಿಕೆಶಿ ನಡುವಿನ ಕುರ್ಚಿ ಕಿತ್ತಾಟ, ಗ್ಯಾರಂಟಿಗಳ ನೆಪದಲ್ಲಿ ಇಡೀ ರಾಜ್ಯದಲ್ಲಿ ಅಭಿವೃದ್ಧಿಯೇ ಸ್ಥಗಿತಗೊಂಡಿದೆ. ಭ್ರಷ್ಟಾಚಾರ ಮಿತಿ ಮೀರಿರುವುದೇ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹರಿಹಾಯ್ದರು. ನಗರದ ಹೊರವಲಯದ ಅಪೂರ್ವ ರೆಸಾರ್ಟ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರವು ಗ್ಯಾರಂಟಿಗಳಿಂದಾಗಿ ಇಡೀ ರಾಜ್ಯವನ್ನೇ ದಿವಾಳಿ ಮಾಡಿದ್ದು, 1 ಕಿ.ಮೀ. ರಸ್ತೆ ಕಾಮಗಾರಿ ಸಹ ಸಿದ್ದರಾಮಯ್ಯ ಸರ್ಕಾರದಿಂದ ಮಾಡಲು ಆಗುತ್ತಿಲ್ಲ ಎಂದರು. ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಬಿಜೆಪಿ ಅವಧಿಯಲ್ಲಿ ರೈತರಿಗೆ ನೀಡುತ್ತಿದ್ದ ₹3000 ಕೋಟಿ ಮೊತ್ತದ ಕಿಸಾನ್ ಸಮ್ಮಾನ್ ಯೋಜನೆಯನ್ನು ಕಿತ್ತುಕೊಂಡಿದ್ದೇ ಕಾಂಗ್ರೆಸ್ಸಿನ ದೊಡ್ಡ ಸಾಧನೆ. ಜನರ ಜೇಬಿಗೆ ₹2000 ಹಾಕಿ, ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿ, ಜನರಿಗೆ ಕಿರುಕುಳ ನೀಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಅವರು ದೂರಿದರು.
ಬಿಜೆಪಿ ಅವಧಿಯಲ್ಲಿ ವಿದ್ಯಾನಿಧಿ ಯೋಜನೆ, ದಲಿತ ಮತ್ತು ಆದಿವಾಸಿಗಳಿಗೆ ಸಾಮಾಜಿಕ ನ್ಯಾಯ, ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳದ ಐತಿಹಾಸಿಕ ತೀರ್ಮಾನಗಳಾಗಿದ್ದವು. ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆ ಜಿಲ್ಲೆಗೆ ₹1,000 ಕೋಟಿ ಅನುದಾನ ನೀಡಿದ್ದು, ಇದರಲ್ಲಿ ₹600 ಕೋಟಿಗಳನ್ನು ದಕ್ಷಿಣ ಕ್ಷೇತ್ರಕ್ಕೆ ನೀಡಲಾಗಿತ್ತು. ಇದೀಗ ಬಿಜೆಪಿ ಗೆಲ್ಲುವುದರೊಂದಿಗೆ ಕಾಂಗ್ರೆಸ್ ಸರ್ಕಾರದ ಪತನ ದಾವಣಗೆರೆ ದಕ್ಷಿಣದಿಂದಲೇ ಆರಂಭವಾಗಲಿದೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.
ಎರಡೂ ಕಡೆ ಬಿಜೆಪಿ ಗೆಲುವು ನಿಶ್ಚಿತ
ಎದುರಾಳಿಗಳ ಬಳಿ ಹಣ ಬಲ ಇರಬಹುದು. ಆದರೆ, ಜನಬಲ ಹಾಗೂ ಸಂಘಟನೆಯ ಬಲದೊಂದಿಗೆ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ. ಈ ಚುನಾವಣೆ ಕೇವಲ ಶಾಸಕರ ಆಯ್ಕೆ ಮಾತ್ರವಲ್ಲ, ಭ್ರಷ್ಟ ಸರ್ಕಾರಕ್ಕೆ ಪಾಠ ಕಲಿಸಲು ಜನರಿಗೆ ಸಿಕ್ಕಿರುವ ಅವಕಾಶ. ಎರಡೂ ಕ್ಷೇತ್ರಗಳ ಫಲಿತಾಂಶ 2028ರ ವಿಧಾನಸಭಾ ಚುನಾವಣೆಗೆ ಮುನ್ನುಡಿಯಾಗಲಿದೆ.


