ಬಿಎಸ್ವೈ-ವಿಜಯೇಂದ್ರ ವಿರುದ್ಧ ಬಿಜೆಪಿಯಲ್ಲಿಯೇ ಎದ್ದಿದೆಯಾ ಅಸಮಾಧಾನ..?
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ ಎನ್ನುವ ಸದ್ದು ಕೇಳಿ ಬಂದಿದೆ. ಬಿಜೆಪಿಯಲ್ಲಿಯೇ ಅಸಮಾಧಾನದ ಹೊಗೆ ಭುಗಿಲೆದ್ದಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.
ಬೆಂಗಳೂರು [ಮಾ.13]: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಆಡಳಿತಾರೂಢ ಬಿಜೆಪಿಯಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ ಎಂಬ ಆರೋಪವನ್ನು ಪುಷ್ಟೀಕರಿಸುವಂತೆ ಅವರಿಬ್ಬರ ಕಾರ್ಯವೈಖರಿ ವಿರುದ್ಧ ಮತ್ತೊಂದು ಅನಾಮಧೇಯ ಪತ್ರ ಬಾಂಬ್ ಸದ್ದು ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸುಮಾರು ಆರು ಪುಟಗಳ ಈ ಅನಾಮಧೇಯ ಪತ್ರದಲ್ಲಿ ಇಂತಿ ನೊಂದ ನಿಷ್ಠಾವಂತ ಬಿಜೆಪಿ ಶಾಸಕರು ಎಂದು ನಮೂದಿಸಲಾಗಿದೆ. ಇದು ಯಾರನ್ನೂ ಉದ್ದೇಶಿಸಿ ಬರೆದ ಪತ್ರವಲ್ಲ. ಆದರೆ, ವಿಜಯೇಂದ್ರ ಅವರನ್ನೇ ಗುರಿಯಾಗಿಸಿಕೊಂಡು ಅವರು ಹೇಗೆ ಕೂಟ ರಚಿಸಿಕೊಂಡಿದ್ದಾರೆ? ಆ ಕೂಟದಲ್ಲಿ ಯಾರಾರಯರಿದ್ದಾರೆ? ಅವರಿಗೆ ಯಾವ ಯಾವ ಇಲಾಖೆಗಳ ಜವಾಬ್ದಾರಿಗಳನ್ನು ನೀಡಲಾಗಿದೆ ಎಂಬಿತ್ಯಾದಿ ವಿವರಗಳನ್ನು ಆಪ್ತರ ಫೋಟೋ ಮತ್ತು ಮೊಬೈಲ್ ಸಂಖ್ಯೆಗಳ ಸಹಿತ ಪ್ರಸ್ತಾಪಿಸಲಾಗಿದೆ. ಹಲವು ಆರೋಪಗಳನ್ನು ಮಾಡಲಾಗಿದೆ.
ಕಾಂಗ್ರೆಸ್ ಶಾಸಕನ ನೋಡಲು ಬಂದ ತಂದೆ ಮೇಲೆ ಪೊಲೀಸ್ ಹಲ್ಲೆ: ಡಿಕೆಶಿ..
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಪ್ಪಿನ ಲಾಭ ಪಡೆದಿರುವ ಕುಟುಂಬದ ಸದಸ್ಯರು ಸರ್ಕಾರಕ್ಕೆ ಸಮಾನಾಂತರವಾಗಿ ಪರ್ಯಾಯ ಕೂಟ ರಚಿಸಿಕೊಂಡು ಅಧಿಕಾರ ನಡೆಸುತ್ತಿದ್ದಾರೆ. ವಿಜಯೇಂದ್ರ ಸೇರಿದಂತೆ ಅವರ ಆಪ್ತರು, ಕುಟುಂಬದ ಮಕ್ಕಳು, ಮೊಮ್ಮಕಳು ಕಮಿಷನ್ ಆಧಾರದ ಮೇಲೆ ದಿನನಿತ್ಯದ ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಡುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿನ ಹಳೆ ಚಾಳಿಯನ್ನೇ ಈ ಸರ್ಕಾರದಲ್ಲೂ ಮುಂದುವರೆಸಿದ್ದಾರೆ. ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಿ ತಾವು ಮುಂಚೂಣಿಗೆ ಬರಲು ವಾಮಮಾರ್ಗಗಳನ್ನು ಹಿಡಿದಿದ್ದಾರೆ ಎಂದು ಪತ್ರದಲ್ಲಿ ಗಂಭೀರವಾಗಿ ಆಪಾದಿಸಲಾಗಿದೆ.
ಒಂದು ಕಾಲದಲ್ಲಿ ದೇವೇಗೌಡ ಮತ್ತವರ ಪುತ್ರ ವ್ಯಾಮೋಹದ ವಿರುದ್ಧ ಗರ್ಜಿಸುತ್ತಿದ್ದ ಯಡಿಯೂರಪ್ಪ ಅವರು ಇಂದು ತಮ್ಮ ಪುತ್ರ-ಪುತ್ರಿಯರಿಗೆ ಅಧಿಕಾರ ದಂಡ ಹಸ್ತಾಂತರಿಸುವ ಮೂಲಕ ದೇವೇಗೌಡರನ್ನೂ ಮೀರಿಸಿದ್ದಾರೆ. ಈ ಪರಿಸ್ಥಿತಿಯ ಲಾಭ ಪಡೆದ ಪುತ್ರ ವಿಜಯೇಂದ್ರ ಸೂಪರ್ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆ ಮಕ್ಕಳ ಈ ವರ್ತನೆಗೆ ಜನಪ್ರತಿನಿಧಿಗಳಾದ ನಾವು ಕ್ಷೇತ್ರದ ಮತದಾರರ ಮುಂದೆ ತಲೆತಗ್ಗಿಸುವಂತಾಗಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.