ವಿಮಾನ ನಿಲ್ದಾಣ ಉದ್ಘಾಟನೆಗೆ ಮೋದಿ ಸುಮ್ಮನೆ ಬಂದುಕಥೆ ಹೇಳಿ ಹೋಗುವುದಲ್ಲ. ಇಲ್ಲಿನ ವಿಐಎಸ್‌ಎಲ್‌ ಕಾರ್ಖಾನೆಯ ಕಥೆ-ವ್ಯಥೆಯನ್ನು ಕೇಳಬೇಕು. ಧಮ್ಮು ತಾಕತ್ತಿದ್ದರೆ ಇಲ್ಲಿನ ಜನಪ್ರತಿನಿಧಿಗಳು ಇದನ್ನು ಅವರಿಗೆ ಅರ್ಥ ಮಾಡಿಸಲಿ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ಸವಾಲು ಹಾಕಿದರು.

ಶಿವಮೊಗ್ಗ (ಫೆ.26) : ವಿಮಾನ ನಿಲ್ದಾಣ ಉದ್ಘಾಟನೆಗೆ ಮೋದಿ ಸುಮ್ಮನೆ ಬಂದುಕಥೆ ಹೇಳಿ ಹೋಗುವುದಲ್ಲ. ಇಲ್ಲಿನ ವಿಐಎಸ್‌ಎಲ್‌ ಕಾರ್ಖಾನೆಯ ಕಥೆ-ವ್ಯಥೆಯನ್ನು ಕೇಳಬೇಕು. ಧಮ್ಮು ತಾಕತ್ತಿದ್ದರೆ ಇಲ್ಲಿನ ಜನಪ್ರತಿನಿಧಿಗಳು ಇದನ್ನು ಅವರಿಗೆ ಅರ್ಥ ಮಾಡಿಸಲಿ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌(H Vishwanath) ಸವಾಲು ಹಾಕಿದರು.

ಇಲ್ಲಿನ ಪ್ರೆಸ್‌ಟ್ರಸ್ಟ್‌ನಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಬಿಜೆಪಿ(BJP)ಯವರು ಮಾತೆತ್ತಿದ್ದರೆ ಅಭಿವೃದ್ಧಿ, ಅಭಿವೃದ್ಧಿ ಎನ್ನುತ್ತಾರೆ. ಜನರು ಅಸ್ಮಿತೆಯಾಗಿರುವ ಕಾರ್ಖಾನೆ(VISL Factory) ಮುಚ್ಚುವುದೇ ಅಭಿವೃದ್ಧಿಯೇ. ಅದನ್ನು ಬಿಜೆಪಿಗರು ಸ್ಪಷ್ಟಪಡಿಸಬೇಕು ಎಂದು ಹಾರಿಹಾಯ್ದರು.

BS Yadiyurappa: 40 ವರ್ಷಗಳ ಬಳಿಕ ವಿಧಾನಸೌಧದ ನಂಟು ಕಳಚಿದ ರಾಜಾಹುಲಿ!

ವಿಐಎಸ್‌ಎಲ್‌ ಕಾರ್ಖಾನೆ ನಡೆಸಲು ಖಾಸಗಿಯವರು ಮುಂದೆ ಬಂದಿಲ್ಲವೆಂದರೆ ಸರ್ಕಾರವೇ ನಡೆಸಲಿ. ಅದನ್ನು ಇದನ್ನು ಜಿಂದಾಲ್‌ ಕಂಪನಿ(Jindal company)ಗೆ ಮಾರಾಟ ಮಾಡಲು ಬಿಜೆಪಿ ಸರ್ಕಾರ ಸಿದ್ದತೆ ನಡೆಸಿದೆ. ಈ ಸಂಬಂಧ ಜಿಂದಾಲ್‌ ಕಂಪನಿಯೊಂದಿಗೆ ಒಂದು ಸುತ್ತಿನ ಮಾತುಕಥೆಯನ್ನೂ ಮುಗಿಸಿದ್ದಾರೆ. ವಿಮಾನ ನಿಲ್ದಾಣ ಉದ್ಘಾಟನೆಗೆ ಬರುವ ಪ್ರಧಾನಿ ಮೋದಿ(Narendra Modi)ಯವರು ಅವರ ಅಹವಾಲು ಮಾತ್ರ ಹೇಳುವುದಲ್ಲ. ಜನರ ಅಳಲನ್ನು ಆಲಿಸಬೇಕಿದೆ. ಕಾರ್ಖಾನೆ ಬಗ್ಗೆ ಹೇಳಬೇಕಿದೆ. ಕಾರ್ಖಾನೆ ಉಳಿಸುವ ಬದಲಾಗಿ ರಾರ‍ಯಪಿಡ್‌ ಆ್ಯಕ್ಷನ್‌ ಪೋರ್ಸ್‌ ಆರಂಭಿಸಲಾಗಿದೆ. ಇದರ ಅಗತ್ಯ ಇಲ್ಲಿಗೆ ಇತ್ತೆ? ಇಲ್ಲೇನು ಸಮುದ್ರ ಇದೆಯಾ ಎಂದು ಪ್ರಶ್ನಿಸಿದರು.

ಮೋದಿ ಮುಂದೆ ನಿಮ್ಮ ಧಮ್ಮು, ತಾಕತ್ತು ತೋರಿಸಿ:

ಮೈಸೂರು ಒಡೆಯರ ಕಾಲ(The period of Mysore rulers)ದಲ್ಲಿ ಆರಂಭಿಸಿ ಜನರಿಗೆ ಉದ್ಯೋಗ ನೀಡಿದ ಕಾರ್ಖಾನೆಯನ್ನು ಮುಚ್ಚುವ ಮೂಲಕ ನಾಡಿನ ಅಸ್ಮಿತೆಯನ್ನೇ ಬುಡಮೇಲು ಮಾಡುವುದು ಸರಿಯಲ್ಲ. ಬೇರೆ ವಿಷಯಕ್ಕೆ ತಲೆ, ಕೈ ಕತ್ತರಿಸಿ ಎನ್ನುವ ಇಲ್ಲಿನ ಶಾಸಕ ಈಶ್ವರಪ್ಪ(KS Eshwarappa)ನವರಿಗೆ ಕಾರ್ಖಾನೆ ಪರವಾಗಿ ಹಾಗೂ ಮೋದಿ ವಿರುದ್ಧ ಮಾತನಾಡುವ ಧೈರ್ಯವಿಲ್ಲ. ಇದವರಿಗೆ ಮಾತ್ರವಲ್ಲ ಬಿಜೆಪಿಯ ಯಾವ ನಾಯಕರಿಗೂ ಮೋದಿ ಮುಂದೆ ಮಾತನಾಡುವ ದಮ್ಮು, ತಾಕತ್ತು ಇಲ್ಲ. ಹೀಗಾಗಿ ಯಡಿಯೂರಪ್ಪ(BS Yadiyurappa)ನವರು ಜಿಂದಾಲ್‌ಗೆ ವಿಐಎಸ್‌ಎಲ್‌ ಕಾರ್ಖಾನೆ ಕೊಡಿಸಿ ತಮ್ಮ ಪಾಲು ಪಡೆಯಲು ಹವಣಿಸುತ್ತಿದ್ದಾರೆ ಎಂದು ಹೇಳಿದರು.

ನಾನು ಕಾಂಗ್ರೆಸ್‌ ಸೇರುವ ಪ್ರಶ್ನೆಯೇ ಇಲ್ಲ:

ನಾನು ಕಾಂಗ್ರೆಸ್‌ ಸೇರುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್‌ ನನ್ನ ತವರು ಮನೆ. ನಾನಿರುವುದು ಅಲ್ಲಿಯೇ. ವಿಧಾನ ಪರಿಷತ್‌ಗೆ ಯಾವ ಪಕ್ಷದಿಂದಲೂ ನನ್ನನ್ನು ನೇಮಕ ಮಾಡಿಲ್ಲ. ಬದಲಾಗಿ ಸಾಹಿತ್ಯ ಕೃತಿಗಳನ್ನು ಬರೆದಿರುವುದರಿಂದ ಸಾಹಿತ್ಯ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರಕ್ಕೆ ಕೋಲಾರಕ್ಕೂ ಹೋಗುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂವಾದಲ್ಲಿ ಪ್ರೆಸ್‌ಟ್ರಸ್ಟ್‌ ಅಧ್ಯಕ್ಷ ಎನ್‌.ಮಂಜುನಾಥ್‌, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್‌ ಯಡಗೆರೆ, ಪ್ರಧಾನ ಕಾರ್ಯದರ್ಶಿ ಸಂತೋಷ್‌ ಕಾಚಿನಕಟ್ಟೆ, ಪ್ರೆಸ್‌ಟ್ರಸ್ಟ್‌ ಕಾರ್ಯದರ್ಶಿ ನಾಗರಾಜ್‌ ನೇರಿಗೆ ಇದ್ದರು.

ಕಾಂಗ್ರೆಸ್‌ ಕಾರ್ಯಕ್ರಮಗಳಿಗೆ ಬಿಜೆಪಿ ಲೇಬಲ್‌

ಬಿಜೆಪಿ ಅಧಿಕಾರಕ್ಕೆ ಬಂದು ಯಾವ ಹೊಸ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಬದಲಿಗೆ ಕಾಂಗ್ರೆಸ್‌ ಸರ್ಕಾರ ರೂಪಿಸಿರುವ ಹಳೆ ಕಾರ್ಯಕ್ರಮಗಳಿಗೆ ಪ್ರಧಾನಿಮಂತ್ರಿ ಹೆಸರಿನ ಲೇಬಲ್‌ ಹಾಕುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಅಕ್ಷರ, ಆರೋಗ್ಯ, ಅನ್ನ ನೀಡುವುದು ಅಭಿವೃದ್ಧಿಯಾಗಿತ್ತು. ಆದರೆ, ಬಿಜೆಪಿ ಸರ್ಕಾರದಲ್ಲಿ ಈ ಮೂರು ಅಂಶಗಳು ಕಣ್ಮರೆಯಾಗಿವೆ. ಹಿಂದಿನ ಮುಖ್ಯಮಂತ್ರಿಗಳು ಒಂದೊಂದು ಯೋಜನೆಗಳನ್ನು ಆರಂಭಿಸುವ ಮೂಲಕ ಮಹತ್ವದ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಆದರೆ, ಈಗಿನ ಮುಖ್ಯಮಂತ್ರಿಗಳು ಏನನ್ನೂ ಮಾಡಿಲ್ಲ. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಬಡತನ ನಿವಾರಣೆಯ ಕಾರ್ಯಕ್ರಮ ಜಾರಿಯಾಗುತ್ತಿಲ್ಲ. ಇಡೀ ರಾಜ್ಯ ಲ್ಯಾಂಡ್‌ ಮಾಫಿಯಾದಲ್ಲಿ ಮುಳುಗಿಹೋಗಿದೆ. ಬಿಜೆಪಿಯವರು ಮಠಾಧೀಶರಿಗೆ ಟಿಕೆಟ್‌ ಕೊಡುತ್ತೇವೆ ಬನ್ನಿ ಎಂದು ಕರೆಯುವ ಸ್ಥಿತಿಗೆ ರಾಜಕೀಯ ಬಂದು ನಿಂತಿದೆ ಎಂದು ಎಚ್‌.ವಿಶ್ವನಾಥ್‌ ಅಸಮಾಧಾನ ವ್ಯಕ್ತಪಡಿಸಿದರು.

Shivamogga: 27ಕ್ಕೆ ಏರ್‌​ಪೋರ್ಟ್ ಉದ್ಘಾ​ಟ​ನೆ: 1 ಲಕ್ಷ ಆಸನಗಳ ವ್ಯವಸ್ಥೆ- ಡಿಸಿ

ನಾನು, ನಮ್ಮ ಮಗ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಈಗ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದರೆ .50 ಕೋಟಿ ದುಡ್ಡು ಬೇಕು. ಅಷ್ಟೋಂದು ದುಡ್ಡು ನನ್ನ ಬಳಿ ಇಲ್ಲ. ಹೀಗಾಗಿ ಈ ಬಾರಿ ಚುನಾವಣೆಯಿಂದ ನಾನು ಹಾಗೂ ನನ್ನ ಮಗ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ

- ಎಚ್‌.ವಿಶ್ವನಾಥ್‌, ಮಾಜಿ ಸಚಿ​ವ