ಅಜ್ಜಿಯ ಹಾದಿಯಲ್ಲೇ ರಾಹುಲ್‌ ಗಾಂಧಿ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಅವರಿಗೆ ಅಪಾರವಾದ ನಷ್ಟ ಉಂಟು ಮಾಡಲಿದೆ. ಕಾಂಗ್ರೆಸ್‌ ಪಕ್ಷ ವಿನಾಶದ ಅಂಚಿನಲ್ಲಿದೆ ಎಂದು ಗುಡುಗಿದ ನಡ್ಡಾ. 

ಮೊಳಕಾಲ್ಮುರು/ಚಳ್ಳಕೆರೆ(ಮಾ.18): ವಿಶ್ವದ ಆರ್ಥಿಕ ಬಲಿಷ್ಠ ರಾಷ್ಟ್ರಗಳಲ್ಲಿ ಐದನೇ ಸ್ಥಾನದಲ್ಲಿರುವ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿದೇಶಿ ನೆಲದಲ್ಲಿ ಅವಮಾನಿಸಿರುವ ರಾಹುಲ್‌ ಗಾಂಧಿಗೆ ತಕ್ಕ ಪಾಠ ಕಲಿಸಬೇಕಾದರೆ ಕರ್ನಾಟಕ ಕಾಂಗ್ರೆಸ್‌ ಮುಕ್ತ ರಾಜ್ಯವಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

Add Asianetnews Kannada as a Preferred SourcegooglePreferred

ಮೊಳಕಾಲ್ಮುರಿನಲ್ಲಿ ಶುಕ್ರವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ರಾಹುಲ್‌ ಅವರು ಇಂಗ್ಲೆಂಡ್‌ನಲ್ಲಿ ಮಾತನಾಡಿ, ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದ್ದು ಅಮೆರಿಕ ಮತ್ತು ಯೂರೋಪ್‌ ರಾಷ್ಟ್ರಗಳು ಸಹಾಯಕ್ಕೆ ಬರಬೇಕೆಂದು ಕರೆ ಕೊಟ್ಟಿದ್ದಾರೆ. 1975ರಲ್ಲಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿ ದೇಶಭಕ್ತರನ್ನು ಜೈಲಿಗೆ ಕಳುಹಿಸಿ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅವಮಾನವೆಸಗಿದ್ದರು. ಅಜ್ಜಿಯ ಹಾದಿಯಲ್ಲೇ ರಾಹುಲ್‌ ಗಾಂಧಿ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಅವರಿಗೆ ಅಪಾರವಾದ ನಷ್ಟ ಉಂಟು ಮಾಡಲಿದೆ. ಕಾಂಗ್ರೆಸ್‌ ಪಕ್ಷ ವಿನಾಶದ ಅಂಚಿನಲ್ಲಿದೆ ಎಂದು ಗುಡುಗಿದರು.

ರಾಹುಲ್‌ ಗಾಂಧಿ ಸಂಸತ್‌ ಸದಸ್ಯತ್ವ ರದ್ದತಿಗೆ ಬಿಜೆಪಿ ಬಿಗಿಪಟ್ಟು ; ಕ್ಷಮೆ ಕೇಳೋವರೆಗೂ ಮಾತಾಡಲು ಬಿಡಲ್ಲ ಎಂದ ಕೇಸರಿ ಪಕ್ಷ

ನವಭಾರತದ ವಿಕಾಸವನ್ನು ನವ ಕರ್ನಾಟಕದಿಂದಲೇ ಆರಂಭಿಸಬೇಕಿದೆ. ರಾಜ್ಯದಲ್ಲಿ ಈಗಾಗಲೇ ಮೋದಿಯವರು ಹಲವಾರು ಯೋಜನೆಗಳಿಗೆ ಚಾಲನೆ ನೀಡಿದ್ದು, ರಾಜ್ಯ ಅಭಿವೃದ್ಧಿಯತ್ತ ಮುನ್ನಡೆದಿದೆ. ಯುವಕರಿಗೆ ಉದ್ಯೋಗ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಇತ್ತೀಚೆಗೆ ತುಮಕೂರಿನಲ್ಲಿ ನೂತನ ಹೆಲಿಕಾಪ್ಟರ್‌ ಘಟಕವನ್ನು ಆರಂಭಿಸಲಾಗಿದೆ. ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ಮುಂತಾದ ಕಾರ್ಯಕ್ರಮಗಳು ಬಿಜೆಪಿಯ ಜನಪರ ಕಾಳಜಿಯನ್ನು ಎತ್ತಿ ತೋರಿಸುತ್ತವೆ ಎಂದರು.

ಬೃಹತ್‌ ರೋಡ್‌ ಶೋ:

ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ನಡ್ಡಾ ಅವರು ಶುಕ್ರವಾರ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಹಾಗೂ ಮೊಳಕಾಲ್ಮುರುಗಳಲ್ಲಿ ಬೃಹತ್‌ ರೋಡ್‌ ನಡೆಸಿದರು. ಮಧ್ಯಾಹ್ನ 4 ಗಂಟೆಯ ವೇಳೆಗೆ ಚಳ್ಳಕೆರೆಗೆ ಆಗಮಿಸಿದ ನಡ್ಡಾ, ಜೋಡೆತ್ತಿನ ಗಾಡಿಗೆ ಪೂಜೆ ಸಲ್ಲಿಸಿ, ತೆಂಗಿನ ಕಾಯಿ ಒಡೆದು ಪಾವಗಡ ರಸ್ತೆಯ ಈಶ್ವರ ದೇವಸ್ಥಾನದಿಂದ ರೋಡ್‌ ಶೋ ನಡೆಸಿದರು. ಬಳಿಕ, ಸಂಜೆ 6 ಗಂಟೆಯ ವೇಳೆಗೆ, ಮೊಳಕಾಲ್ಮುರಿಗೆ ಆಗಮಿಸಿ, ಮಂಡಲ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ ನೈಸರ್ಗಿಕ ಅಡುಗೆ ಎಣ್ಣೆ ಗಾಣದ ಕಾರ್ಖಾನೆಗೆ ತೆರಳಿ ಚಹಾ ಸೇವಿಸಿ, ಕಟೀಲ್‌, ಅಶೋಕ್‌, ಸಚಿವ ಬಿ.ಶ್ರೀರಾಮುಲು ಜೊತೆ ಮಾತುಕತೆ ನಡೆಸಿದರು. ಬಳಿಕ, ನಗರದ ನುಂಕಪ್ಪನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರೋಡ್‌ ಶೋ ನಡೆಸಿದರು.

ರೋಡ್‌ ಶೋ ವೇಳೆ, ಉಭಯ ನಗರಗಳಲ್ಲಿ ಕಾರ್ಯಕರ್ತರು ಜೆಸಿಬಿ ಮೂಲಕ ಬೃಹತ್‌ ಹೂವಿನ ಹಾರ ಹಾಕಿ, ಸ್ವಾಗತ ಕೋರಿದರು. ಮಹಿಳೆಯರು ಪೂರ್ಣಕುಂಭ ಮೇಳದೊಂದಿಗೆ ಯಾತ್ರೆಗೆ ಮೆರಗು ತಂದರು. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಕಂದಾಯ ಸಚಿವ ಆರ್‌.ಅಶೋಕ್‌ ಹಾಗೂ ಇತರ ನಾಯಕರು ಸಾಥ್‌ ನೀಡಿದರು.