ಶಿವಕುಮಾರ್‌ ವಿರುದ್ಧ ಕನಕಪುರದಲ್ಲಿ ಕೇಸ್‌ ಹಾಕಿದ್ದಾರೆ. ಮೊದಲು ಆ ಕೇಸಿಗೆ ಹಾಜರಾಗಲು ಹೇಳಿ. ಡಿ.ಕೆ.ಶಿವಕುಮಾರ್‌ ಅವರ ಬಗ್ಗೆ ಹೊಗಳಿಕೆ, ತೆಗಳಿಕೆ ನಿಮ್ಮ ಕೆಲಸವಲ್ಲ. ವಕ್ಫ್‌, ವಿಜಯೇಂದ್ರ ಬಗ್ಗೆ ಏನೋ ಮಾಡಲು ಹೊರಟಿದ್ದೀರಲ್ಲ ಅದನ್ನು ನೆಮ್ಮದಿಯಿಂದ ಮಾಡಿ ಎಂದು ಕಿಡಿಕಾರಿದ ಶಾಸಕ ಎಸ್‌.ಟಿ.ಸೋಮಶೇಖರ್‌ 

ಬೆಂಗಳೂರು(ಜ.10): ‘ಯತ್ನಾಳ್‌ಗೆ ಉಗೀರಿ. ಡಿ.ಕೆ.ಶಿವಕುಮಾರ್‌ ಬಗ್ಗೆ ಮಾತನಾಡಲು ಹೇಳಿದ್ದು ಯಾರು? ಅವರಿಗೂ ಶಿವಕುಮಾರ್‌ಗೂ ಏನ್‌ ಸಂಬಂಧ? ಅವರದ್ದೇ ನೂರೆಂಟು ಇದೆ. ಮೊದಲು ಅದನ್ನು ನೋಡಿಕೊಳ್ಳಬೇಕು’ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಬಿಜೆಪಿ ಬಂಡಾಯ ಶಾಸಕ ಎಸ್‌.ಟಿ.ಸೋಮಶೇಖರ್‌ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ ಶಿವಕುಮಾರ್‌ ಅಧಿಕಾರಕ್ಕಾಗಿ ಟೆಂಪಲ್‌ ರನ್‌ ಮಾಡುತ್ತಿದ್ದಾರೆ. ಅವರು ಏನೇ ಮಾಡಿದರೂ ಮುಖ್ಯಮಂತ್ರಿ ಆಗುವುದಿಲ್ಲ ಎಂಬ ಯತ್ನಾಳ್‌ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಎಲೆಕ್ಷನ್ ಟೈಂನಲ್ಲೇ ಹೇಳ್ಬೇಕಿತ್ತಾ?' ಸಚಿವ ಜಮೀರ್ 'ಕರಿಯ' ಹೇಳಿಕೆಗೆ ಎಸ್‌ಟಿ ಸೋಮಶೇಖರ್ ಅಸಮಾಧಾನ

ಶಿವಕುಮಾರ್‌ ವಿರುದ್ಧ ಕನಕಪುರದಲ್ಲಿ ಕೇಸ್‌ ಹಾಕಿದ್ದಾರೆ. ಮೊದಲು ಆ ಕೇಸಿಗೆ ಹಾಜರಾಗಲು ಹೇಳಿ. ಡಿ.ಕೆ.ಶಿವಕುಮಾರ್‌ ಅವರ ಬಗ್ಗೆ ಹೊಗಳಿಕೆ, ತೆಗಳಿಕೆ ನಿಮ್ಮ ಕೆಲಸವಲ್ಲ. ವಕ್ಫ್‌, ವಿಜಯೇಂದ್ರ ಬಗ್ಗೆ ಏನೋ ಮಾಡಲು ಹೊರಟಿದ್ದೀರಲ್ಲ ಅದನ್ನು ನೆಮ್ಮದಿಯಿಂದ ಮಾಡಿ ಎಂದು ಕಿಡಿಕಾರಿದರು.

ಶಿವಕುಮಾರ್‌ ದೇವಾಲಯಕ್ಕಾದರೂ ಹೋಗುತ್ತಾರೆ, ಜ್ಯೋತಿಷಿ ಬಳಿಯಾದರೂ ಹೋಗುತ್ತಾರೆ. ಅವರು 30 ವರ್ಷದಿಂದಲೂ ದೇಶದ ಎಲ್ಲಾ ದೇವಾಲಯಗಳಿಗೂ ಸಕುಟುಂಬ ಸಮೇತ ಹೋಗಿದ್ದಾರೆ. ಅವರ ಬಗ್ಗೆ ಪದೇ ಪದೆ ಮಾತನಾಡಲು ನೀವು ಯಾರು ಎಂದು ಪ್ರಶ್ನಿಸಿದರು.

ಎಸ್.ಟಿ.ಸೋಮಶೇಖರ್, ಹೆಬ್ಬಾರ್‌ ಅನರ್ಹತೆಗೆ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ನಿರ್ಧಾರ

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರನ್ನು ಪಕ್ಷದಿಂದ ಅಮಾನತು ಮತ್ತು ಅನರ್ಹಗೊಳಿಸುವ ಸಂಬಂಧ ಪಕ್ಷದ ವರಿಷ್ಠರಿಗೆ ಮನವಿ ಮಾಡಲು ಡಿ.7 ರಂದು ಸಭೆ ಸೇರಿದ್ದ ಬಿಜೆಪಿ ಕೋರ್ ಕಮಿಟಿ ಸಭೆ ನಿರ್ಧರಿಸಿತ್ತು. 

ಕೋರ್‌ ಕಮಿಟಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, 'ಬಿಜೆಪಿ ಚಿಹ್ನೆಯಡಿ ಗೆದ್ದ ಶಾಸಕರಾದ ಎಸ್.ಟಿ.ಸೋಮಶೇಖರ್‌ ಮತ್ತು ಶಿವರಾಮ ಹೆಬ್ಬಾರ್‌ ಅವರು ಕಳೆದ ಹಲವು ತಿಂಗಳಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಜೊತೆ ಅಧಿಕೃತವಾಗಿ ಗುರುತಿಸಿಕೊಂಡಿದ್ದಾರೆ. ಈ ಇಬ್ಬರು ಶಾಸಕರ ವಿಚಾರವನ್ನು ಬಹಳ ಹಿಂದೆಯೂ ಚರ್ಚಿಸಲಾಗಿತ್ತು. ಇದೆಲ್ಲದಕ್ಕೂ ಇತಿಶ್ರೀ ಹಾಕಲು ಹಾಗೂ ಬಿಗಿ ಕ್ರಮ ಕೈಗೊಳ್ಳಲು ಕೋರ್‌ ಕಮಿಟಿ ಸರ್ವಾನುಮತದಿಂದ ಕೋರಿದೆ. ಈ ವಿಚಾರವನ್ನು ರಾಷ್ಟ್ರೀಯ ಅಧ್ಯಕ್ಷರ ಮತ್ತು ರಾಷ್ಟ್ರೀಯ ನಾಯಕರ ಗಮನಕ್ಕೆ ತಂದು ಇತ್ಯರ್ಥಗೊಳಿಸಲು ತೀರ್ಮಾನಿಸಲಾಗಿದೆ' ಎಂದು ಹೇಳಿದ್ದರು. 

ಹಲವು ತಿಂಗಳಿಂದ ಪಕ್ಷದ ಕೆಲ ಮುಖಂಡರ ಅಶಿಸ್ತಿನ ನಡವಳಿಕೆಗೆ ಕಡಿವಾಣ ಹಾಕಲು ಹಾಗೂ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲು ಕೋರ್‌ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಅಂತೆಯೆ ಕೋರ್ ಕಮಿಟಿ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ವಿಸ್ತಾರವಾಗಿ ಚರ್ಚಿಸಲಾಗಿದೆ ಎಂದು ಹೇಳಿದ್ದರು. 

ಶೋಭಾ- ಸೋಮಶೇಖ‌ರ್ ಮಧ್ಯೆ ತಾಕತ್ತಿನ ವಾಕ್ಸಮರ!

ಸಭೆಯಲ್ಲಿ ಇತ್ತೀಚಿನ ಉಪಚುನಾವಣೆ ಸೋಲಿನ ಪರಾಮರ್ಶೆ ಮಾಡಲಾಗಿದೆ. ಶಿಗ್ಗಾಂವಿ ಮತ್ತು ಸಂಡೂರಿನ ಸೋಲಿಗೆ ಕಾರಣ ತಿಳಿಯಲು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮತ್ತು ಮಾಜಿ ಸಚಿವ ಎನ್,ಮಹೇಶ್ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಈ ತಂಡ ಎರಡೂ ಕ್ಷೇತ್ರಗಳಿಗೆ ತೆರಳಿ ಸೋಲಿನ ಬಗ್ಗೆ ಮಾಹಿತಿ ಕಲೆಹಾಕಲಿದೆ ಎಂದು ತಿಳಿಸಿದ್ದರು. 

ಶಾಸಕ ಬಸನಗೌಡ ಯತ್ನಾಳ್ ಅವರು ಈಗಾಗಲೇ ಕೇಂದ್ರದ ಶಿಸ್ತು ಸಮಿತಿ ಎದುರು ಹಾಜರಾಗಿ ಬಂದಿದ್ದಾರೆ. ಈಗ ಬಾಲ್ ವರಿಷ್ಠರ ಅಂಗಳದಲ್ಲಿದೆ. ಯಾರೂ ಶಿಸ್ತು ಮೀರುವಂತಿಲ್ಲ. ಈ ಹಿಂದಿನ ಘಟನೆಗಳಿಂದ ಪಕ್ಷದ ಕಾರ್ಯಕರ್ತರಿಗೆ ಬೇಸರವಾಗಿದೆ. ಪಕದ ಬೆಳವಣಿಗೆ ದೃಷ್ಟಿಯಿಂದಲೂ ಇದು ಒಳ್ಳೆಯದಲ್ಲ. ಯಾರೇ ಆದರೂ ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸ ಬೇಕು. ಹಾದಿ-ಬೀದಿಯಲ್ಲಿ ಮಾತನಾಡುವವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವ ಸಂಬಂಧ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ವಿಜಯೇಂದ್ರ ಉತ್ತರಿಸಿದ್ದರು.