ನಿರಾಣಿ ನಮ್ಮ ಮನೆಗೆ ಟಿಕೆಟ್‌ ಕೇಳಿಕೊಂಡು ಬರುತ್ತಿದ್ದ. ಅವರು ಈ ಹಿಂದೆ ಹಿಂದು ದೇವತೆಗಳ ಬಗ್ಗೆ ಆಡಿಯೋ ಬಿಟ್ಟಿದ್ದರು. ಅಂತಹವರು ನಮಗೀಗ ಹಿಂದು ಸ್ವಾಮೀಜಿಗಳ ಕುರಿತು ಮಾತನಾಡಬೇಡಿ ಅಂತಿದ್ದಾರೆ ಎಂದ ಯತ್ನಾಳ್‌

ಸುವರ್ಣಸೌಧ(ಡಿ.22):  ‘ನಾನು ಪಕ್ಷ ಕಟ್ಟುವಾಗ ನಿರಾಣಿ ಎಲ್ಲಿದ್ದ, ಅವನು ನನ್ನ ಮುಂದೆ ಬಚ್ಚಾ. ಇಂತಹವರು ಮುಖ್ಯಮಂತ್ರಿಯಾದರೇ ವಿಧಾನಸೌಧಕ್ಕೆ ಅವಮಾನ. ವಿಧಾನಸೌಧಕ್ಕೆ ಮರಾರ‍ಯದೆ ಉಳಿಯುವುದಿಲ್ಲ’. ಹೀಗೆಂದು ಬೃಹತ್‌ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕೆಂಡ ಕಾರಿದ್ದಾರೆ. ಸ್ವಾಮೀಜಿಗಳ ವಿರುದ್ಧ ಯತ್ನಾಳ್‌ ಮಾತನಾಡಬಾರದು ಎಂಬ ನಿರಾಣಿ ಹೇಳಿಕೆಗೆ ಪ್ರತಿಯಾಗಿ ಕಿಡಿ ಕಾರಿದ ಯತ್ನಾಳ, ನಿರಾಣಿ ನಮ್ಮ ಮನೆಗೆ ಟಿಕೆಟ್‌ ಕೇಳಿಕೊಂಡು ಬರುತ್ತಿದ್ದ. ಅವರು ಈ ಹಿಂದೆ ಹಿಂದು ದೇವತೆಗಳ ಬಗ್ಗೆ ಆಡಿಯೋ ಬಿಟ್ಟಿದ್ದರು. ಅಂತಹವರು ನಮಗೀಗ ಹಿಂದು ಸ್ವಾಮೀಜಿಗಳ ಕುರಿತು ಮಾತನಾಡಬೇಡಿ ಅಂತಿದ್ದಾರೆ ಎಂದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವ ನಂಬಿಕೆ ಇದೆ. ಈಗಲೂ ಸರ್ಕಾರದ ಮೇಲೆ ವಿಶ್ವಾಸವಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಐತಿಹಾಸಿಕ ನಿರ್ಧಾರ ಮಾಡಲಿದ್ದಾರೆ ಎಂಬ ನಂಬಿಕೆಯಿದೆ ಎಂದರು.

ಪಂಚಮಸಾಲಿಗೆ ಮೀಸಲಾತಿ ಸಿಎಂ ಕೊಟ್ಟೇ ಕೊಡುತ್ತಾರೆ: ಯತ್ನಾಳ

ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸಬೇಕೆಂದು ಆಗ್ರಹಿಸಿ ಶಕ್ತಿಪ್ರದರ್ಶನಕ್ಕೆ ಸಿದ್ಧತೆ ನಡೆಸಲಾಗಿದೆ. ಸುಮಾರು 25 ಲಕ್ಷ ಜನರು ಬರುವ ನಿರೀಕ್ಷೆ ಇದ್ದು, ಈ ಸಮಾರಂಭಕ್ಕೆ ಯಾರಿಗೂ ಆಹ್ವಾನ ಕೊಡುತ್ತಿಲ್ಲ. ಮುರುಗೇಶ್‌ ನಿರಾಣಿ ಅವರನ್ನು ವೇದಿಕೆ ಮೇಲೂ ಕರೆಯೋದಿಲ್ಲ. ಕೆಳಗೆ ಖರ್ಚಿ ಹಾಕುತ್ತೇವೆ ಅಷ್ಟೆಎಂದರು. ಅಲ್ಲದೆ, ಮೀಸಲಾತಿಯ ಸಂಪೂರ್ಣ ಕ್ರೆಡಿಟ್‌ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸಲ್ಲುತ್ತದೆ ಎಂದರು.

ಜಿಲ್ಲೆಗೊಂದು ವಿವಿ ಬೇಡ:

ಜಿಲ್ಲೆಗೊಂದು ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡುವ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್‌, ಇದು ಸರಿಯಲ್ಲ. ಜಿಲ್ಲೆಗೊಂದು ವಿವಿ ತೆರಯಲು ನನ್ನ ವಿರೋಧವಿದೆ. ಹೆಚ್ಚು ವಿಶ್ವವಿದ್ಯಾನಿಲಯಗಳನ್ನು ಏಕೆ ಸ್ಥಾಪನೆ ಮಾಡುತ್ತಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ. ಉಪ ಕುಲಪತಿ ಮಾಡಿ, ಹಣ ತೆಗೆದುಕೊಳ್ಳುವುದು, ಕಟ್ಟಡ ನಿರ್ಮಾಣ, ಕಂಪ್ಯೂಟರ್‌ ಖರೀದಿಯಲ್ಲಿ ತೊಡಗುತ್ತಿದ್ದಾರೆ. ಈ ಅಕ್ರಮದಲ್ಲಿ ಹಣ ಎಲ್ಲರಿಗೂ ಹೋಗುತ್ತಿದೆ. ಈಗಿರುವಂತಹ ವಿಶ್ವವಿದ್ಯಾನಿಲಯಗಳನ್ನು ಅಭಿವೃದ್ಧಿಪಡಿಸುವುದನ್ನು ಬಿಟ್ಟು ಜಿಲ್ಲೆಗೊಂದು ವಿಶ್ವವಿದ್ಯಾನಿಲಯ ಮಾಡುವುದರಿಂದ ಗುಣಮಟ್ಟದ ಶಿಕ್ಷಣ ಸಿಗಲು ಸಾಧ್ಯವಿಲ್ಲ ಎಂದು ಸಲಹೆ ನೀಡಿದರು.

ಡಿ. 22ರಂದು ವಿಜಯೋತ್ಸವ ಆಚರಿಸುವುದು ಖಚಿತ: ಯತ್ನಾಳ

ಹಲಾಲ್‌ ನಮ್ಮ ಸಂಸ್ಕೃತಿಯಲ್ಲ:

ಭಾರತದಲ್ಲಿ ಹಲಾಲ್‌ ರದ್ದಾಗಬೇಕು. ಅದು ನಮ್ಮ ದೇಶದ ಸಂಸ್ಕೃತಿ ಅಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ಹೆಜ್ಜೆ ಹಿಂದಿಟ್ಟು ಮುಂದೆ ಜಿಗಿಯುತ್ತಾರೆ. ಅವರು ಒಂದು ಹೆಜ್ಜೆ ಹಿಂದಿಟ್ಟಿದ್ದಾರೆ ಅಂದರೆ, ನಿರ್ಣಯ ಆದಂತೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರ್‌ಸ್ವಾಮಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅವರಿಬ್ಬರು ರಾಷ್ಟ್ರೀಯ ನಾಯಕರು. ಅವರಿಬ್ಬರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.