Asianet Suvarna News Asianet Suvarna News

ಮುಂದಿನ ಚುನಾವಣೆಗೆ ಇಂದು ಬಿಜೆಪಿ ರಣತಂತ್ರ

  • ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಇಂದು ಬಿಜೆಪಿ ಕಾರ್ಯಕಾರಣಿ
  • ಮುಂಬರುವ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಗೆಲ್ಲುವ ಕುರಿತು ರಣತಂತ್ರ
BJP  Master plan for Next assembly Election snr
Author
Bengaluru, First Published Sep 19, 2021, 7:59 AM IST

ದಾವಣಗೆರೆ (ಸೆ.19):  ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಇಂದು ನಡೆಯಲಿರುವ ಕಾರ್ಯಕಾರಣಿಯಲ್ಲಿ ಮುಂಬರುವ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಗೆಲ್ಲುವ ಕುರಿತು ರಣತಂತ್ರ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಬಗ್ಗೆ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಬಲವರ್ಧನೆ ಹಾಗೂ ಮುಂಬರುವ ಚುನಾವಣೆ ದೃಷ್ಟಿಯಿಂದ ದಾವಣಗೆರೆಯಲ್ಲಿ ನಡೆಯುವ ರಾಜ್ಯ ಕಾರ್ಯಕಾರಿಣಿ ಮಹತ್ವದ್ದಾಗಿದ್ದು ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ವಿಧಾನಸಭೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲೂ ಬಿಜೆಪಿಯನ್ನು ಗೆಲ್ಲಿಸುವ ಕುರಿತು ಚರ್ಚಿಸಿ ರಣತಂತ್ರ ರೂಪಿಸಲಾಗುವುದು. ಪಕ್ಷದ ಬಲವರ್ಧನೆ ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ಬೂತ್‌ ಮಟ್ಟದಿಂದ ರಾಜ್ಯಮಟ್ಟದವರೆಗೆ ಪಕ್ಷವನ್ನು ಸದೃಢ ಗೊಳಿಸುವ ಸಭೆಯೂ ಮಹತ್ವದ್ದಾಗಿದೆ ಎಂದು ತಿಳಿಸಿದರು. ಉಳಿದ ಚರ್ಚೆಗಳ ವಿವರವನ್ನು ಮುಖ್ಯಮಂತ್ರಿಗಳು ಬಹಿರಂಗಪಡಿಸಿಲ್ಲ.

ಡ್ಯಾಮೇಜ್ ಕಂಟ್ರೋಲ್‌ಗೆ ಬಿಜೆಪಿ ಪ್ಲಾನ್, ಕೆಡವಿದ ದೇಗುಲಕ್ಕೆ ಪರಿಹಾರದ ತೇಪೆ!

ದಾವಣಗೆರೆ ಹೊರ ವಲಯದ ಅಪೂರ್ವ ರೆಸಾರ್ಟ್‌ನಲ್ಲಿ ಶನಿವಾರ ಸಂಜೆಯಿಂದ ರಾತ್ರಿವರೆಗೆ ಭಾನುವಾರದ ಕಾರ್ಯಕಾರಿಣಿಯಲ್ಲಿ ಚರ್ಚೆಯಾಗಬೇಕಾದ ವಿಷಯಗಳು, ಮಹತ್ವದ ವಿಚಾರಗಳ ಬಗ್ಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚರ್ಚೆಯಾಗಿದ್ದು ಪಟ್ಟಿಸಿದ್ಧಪಡಿಸಿಕೊಳ್ಳಲಾಗಿದೆ.

ಮೂಲಗಳ ಪ್ರಕಾರ ಪಕ್ಷದ ಕಾರ್ಯಯೋಜನೆ, ಪಕ್ಷದೊಳಗಿನ ಅತೃಪ್ತರನ್ನು ತಿದ್ದಿ ತೀಡುವ ಕೆಲಸ, ವಿಪಕ್ಷಗಳ ಟೀಕೆ, ಟಿಪ್ಪಣಿಗಳಿಗೆ ಸಮರ್ಥವಾಗಿ ಉತ್ತರ ನೀಡುವ ಬಗ್ಗೆ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಾರಥ್ಯದ ರಾಜ್ಯ ಪ್ರವಾಸದ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸಿಎಂ ಜೊತೆ ಮುಕ್ತ ಮಾತುಕತೆಗೆ ಅವಕಾಶ:

ಮೊದಲ ಬಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೆ ಅಪೇಕ್ಷಿತರು ರಾಜ್ಯ ಕಾರ್ಯಕಾರಿಣಿಯಲ್ಲಿ ಮುಕ್ತ ಮಾತುಕತೆ ನಡೆಸಲು ಅವಕಾಶ ಕಲ್ಪಿಸಿರುವುದು ಈ ಸಲದ ಕಾರ್ಯಕಾರಿಣಿ ವಿಶೇಷವಾಗಿದೆ. ಕಾರ್ಯಕಾರಿಣಿಯಲ್ಲಿ ಎರಡು ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಪಕ್ಷ ಮುಂದಾಗಿದೆ. ಹಿಂದಿನ ಕಾರ್ಯಕಾರಿಣಿಯಲ್ಲಿ ಕೈಗೊಂಡ ನಿರ್ಣಯಗಳ ಜಾರಿ ಬಗ್ಗೆ ಚರ್ಚಿಸಲಿದ್ದು, ಪಕ್ಷದಿಂದ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಚರ್ಚೆಯಾಗಲಿದೆ. ಸಭೆಯ ಮಧ್ಯಾಹ್ನ ಮುಂದಿನ ಕಾರ್ಯಕ್ರಮ, ಯೋಜನೆಗಳ ಬಗ್ಗೆ ಸುದೀರ್ಘ ಚರ್ಚೆಯಾಗಲಿದೆ ಎಂದು ಹೇಳಲಾಗಿದೆ. ಅಲ್ಲದೇ, ನಮೋ ಆ್ಯಪ್‌ನ್ನು ಪಕ್ಷದ ಸೇವೆ ಹಾಗೂ ಸಮರ್ಪಣೆ ಕಾರ್ಯದಲ್ಲಿ ಬಳಸಿಕೊಳ್ಳುವ ಬಗ್ಗೆಯೂ ನಾಯಕರು ಮಾಹಿತಿ ಹಂಚಿಕೊಳ್ಳುವ ಕೆಲಸ ಆಗಲಿದೆ.

ಚರ್ಚೆಯಾಗಲಿರುವ ವಿಷಯಗಳಿವು 

*ರಾಜ್ಯದಲ್ಲಿ ಬೂತ್‌ ಮಟ್ಟದಿಂದ ಬಿಜೆಪಿ ಸಂಘಟಿಸುವ ಬಗ್ಗೆ ಒತ್ತು

*ಮುಂದಿನ ಚುನಾವಣೆಗಳಿಗೆ ರಣತಂತ್ರ ಹೆಣೆಯುವ ಬಗ್ಗೆ ಚರ್ಚೆ

*ಪಕ್ಷ ಸಂಘಟನೆಗಾಗಿ ಮಾಜಿ ಸಿಎಂ ಬಿಎಸ್‌ವೈ ಪ್ರವಾಸದ ಕುರಿತು

*ತಾಪಂ, ಜಿಪಂ, ವಿಧಾನಸಭೆ, ಎಂಎಲ್ಸಿ ಚುನಾವಣೆಗಳತ್ತ ಗಮನ

*ರಾಜ್ಯದ ಅಭಿವೃದ್ಧಿ ಬಗ್ಗೆ ಅಪೇಕ್ಷಿತರಿಂದ ಸಿಎಂ ಜೊತೆ ಪ್ರಶ್ನೋತ್ತರ

*ಕೇಂದ್ರ-ರಾಜ್ಯದ ಯೋಜನೆ, ಕಾರ್ಯಕ್ರಮ ಜನರಿಗೆ ತಲುಪಿಸಲು ಒತ್ತು

*ಆಗಾಗ ಏಳುವ ಸಚಿವ, ಶಾಸಕರ ಅಪಸ್ವರ, ಧ್ವನಿಗಳಿಗೆ ಬ್ರೇಕ್‌

*ವಿಪಕ್ಷಗಳ ಟೀಕೆ, ಟಿಪ್ಪಣಿಗಳಿಗೆ ಸಮರ್ಥವಾಗಿ ಉತ್ತರ ನೀಡುವ ಬಗ್ಗೆ

Follow Us:
Download App:
  • android
  • ios