Asianet Suvarna News Asianet Suvarna News

ಕರ್ನಾಟಕದಲ್ಲಿ ಕಾಂಗ್ರೆಸ್‌ ಐಸಿಯೂನಲ್ಲಿದೆ: ಜಗದೀಶ್‌ ಶೆಟ್ಟರ್‌ ಲೇವಡಿ

ದೇಶದಲ್ಲಿ ಕಾಂಗ್ರೆಸ್‌ ಪಕ್ಷವನ್ನು ದುರ್ಬೀನು ಹಾಕಿ ಹುಡುಕಬೇಕಾದ ಸ್ಥಿತಿ ನಿರ್ಮಾಣಗೊಂಡಿದ್ದರೂ, ಆ ಪಕ್ಷದ ನಾಯಕರು ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ಮುತ್ಸದ್ಧಿ ಜಗದೀಶ್‌ ಶೆಟ್ಟರ್‌ ಲೇವಡಿ ಮಾಡಿದ್ದಾರೆ. 

BJP Leader Jagadish Shettar Slams On Congress At Kalaburagi gvd
Author
First Published Mar 6, 2023, 11:01 PM IST

ಕಲಬುರಗಿ (ಮಾ.06): ದೇಶದಲ್ಲಿ ಕಾಂಗ್ರೆಸ್‌ ಪಕ್ಷವನ್ನು ದುರ್ಬೀನು ಹಾಕಿ ಹುಡುಕಬೇಕಾದ ಸ್ಥಿತಿ ನಿರ್ಮಾಣಗೊಂಡಿದ್ದರೂ, ಆ ಪಕ್ಷದ ನಾಯಕರು ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ಮುತ್ಸದ್ಧಿ ಜಗದೀಶ್‌ ಶೆಟ್ಟರ್‌ ಲೇವಡಿ ಮಾಡಿದ್ದಾರೆ. ಭಾರತೀಯ ಜನತಾ ಪಕ್ಷದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿರುವ ಅವರು ಐವಾನ್‌-ಎ-ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎನ್ನುವ ಕಾಂಗ್ರೆಸ್‌ ನಾಯಕರ ಭ್ರಮೆ ಭ್ರಮೆಯಾಗಿಯೇ ಉಳಿಯಲಿದೆ ಎಂದರಲ್ಲದೆ, ದೇಶದಲ್ಲಿ ಕಾಂಗ್ರೆಸ್‌ ಸ್ಥಿತಿ ಏನಾಗಿದೆ ಎಂಬುದು ಈಗಾಗಲೇ ದೇಶದ ಜನರಿಗೆ ಗೊತ್ತಾಗಿದೆ ಎಂದರು.

ಡಿಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯನವರ ಒಳ ಜಗಳವೇ ಕಾಂಗಎಸ್‌ ರಾಜ್ಯದಲ್ಲಿ ಮುಳುಗಲು ಪ್ರಮುಖ ಕಾರಣವಾಗಲಿದೆ. ಗುಂಪುಗಾರಿಕೆ ಸಾಕಷ್ಟಿದ್ದರೂ ಇವರಿನ್ನೂ ಸಿಎಂ ಕನಸು ಕಾಣುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಐಸಿಯೂನಲ್ಲಿದೆ. 2023ರ ಚುನಾವಣೆಯಲ್ಲಿ ಜನ ಕರ್ನಾಟಕದಿಂದಲೂ ಕಾಂಗ್ರೆಸ್‌ ಪಕ್ಷವನ್ನು ಹೊಡೆದೋಡಿಸಲಿದ್ದಾರೆಂದರು. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ ಪಕ್ಷಕ್ಕೆ ಇಲ್ಲ ಎಂದ ಅವರು, ಹಾಗಿದ್ದರೆ ಅರ್ಕಾವತಿ ಬಡಾವಣೆ ಡಿನೋಟಿಫೈ ಬಗ್ಗೆ ಕೆಂಪಣ್ಣ ಆಯೋಗದ ವರದಿಯನ್ನು ಸಿದ್ದರಾಮಯ್ಯ ಅವರು ತಾವೇ ಮುಖ್ಯಮಂತ್ರಿ ಆಗಿದ್ದರೂ ಸದನದಲ್ಲಿ ಏಕೆ ಮಂಡನೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನಿಂದ ಮುಸ್ಲಿಂ ಮಹಿಳೆಯರ ಶೋಷಣೆ: ಸಂಸದ ಮುನಿಸ್ವಾಮಿ ಆರೋಪ

ಸಿದ್ದರಾಮಯ್ಯ ಅವರ ಭ್ರಷ್ಟಾಚಾರಕ್ಕೆ ಅರ್ಕಾವತಿ ಪ್ರಕರಣ ಒಂದೇ ಸಾಕು. ಆ ಪ್ರಕರಣದಲ್ಲಿ ಸಾವಿರಾರು ಕೋಟಿ ಅವ್ಯವಹಾರವಾಗಿದೆ. ತಮ್ಮದೇ ಸರಕಾರ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು. ಶಾಸಕ ಮಾಡ್ಯಾಳ ವಿರೂಪಾಕ್ಷಪ್ಪ ಅವರ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತ ತನಿಖೆ ನಡೆಸುತ್ತಿದೆ ಎಂದ ಮೇಲೆ ಆ ಕುರಿತು ಮಾತನಾಡುವುದು ಸರಿಯಲ್ಲ. ಆದರೆ, ಲೋಕಾಯುಕ್ತ ಸಂಸ್ಥೆಯನ್ನು ರಾಜ್ಯದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ತಂದದ್ದು ಬಿಜೆಪಿಯೇ ಹೊರತು ಕಾಂಗ್ರೆಸ್‌ ಅಲ್ಲ. 

ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಎಸಿಬಿ ಅಸ್ತಿತ್ವಕ್ಕೆ ತಂದಿದ್ದರು. ಈಗ ಮತ್ತೊಮ್ಮೆ ಲೋಕಾಯುಕ್ತಕ್ಕೆ ನಾವು ಅಧಿಕಾರ ನೀಡಿದ್ದೇವೆ ಎಂದು ಸಮಜಾಯಿಷಿ ನೀಡಿದರು. ಶಾಸಕ ಮಾಡ್ಯಾಳ ಪುತ್ರನ ಪ್ರಕರಣದಿಂದ ರಾಜ್ಯದಲ್ಲಿ ಬಿಜೆಪಿಗೆ ಚುನಾವಣೆಯಲ್ಲಿ ಯಾವುದೇ ಹಿನ್ನಡೆ ಆಗುವುದಿಲ್ಲ. ಲೋಕಾಯುಕ್ತ ಸಂಸ್ಥೆ ತನ್ನ ಪಾಡಿಗೆ ತಾನು ತನಿಖೆ ನಡೆಸಲಿದೆ. ಇದರಲ್ಲಿ ಸರಕಾರದ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ ಎಂದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್‌ ನಿರ್ಧರಿಸುತ್ತದೆ. ಅಂಥದ್ದೊಂದು ಶಿಸ್ತು ಪಕ್ಷದಲ್ಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಸ್ತಾಪಿತ ಕಲಬುರಗಿ ರೈಲ್ವೆ ವಿಭಾಗ ರದ್ದುಪಡಿಸಿದ ಕೇಂದ್ರ ಸರಕಾರದ ಕ್ರಮ ಕುರಿತು ಕೇಳಲಾದ ಸಮಜಾಯಿಷಿಗೆ ಅವರು, ಸ್ವತಂತ್ರ ರೈಲ್ವೆ ವಿಭಾಗಗಳು ಆರಂಭಗೊಳ್ಳಬೇಕು ಎಂಬುದಕ್ಕೆ ತಮ್ಮ ಸಹಮತವಿದೆ ಎಂದು ಸ್ಪಷ್ಟಪಡಿಸಿದರು. ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ವಿಧಾನ ಪರಿಷತ್‌ ಸದಸ್ಯರಾದ ಸುನಿಲ್‌ ವಲ್ಯಾಪುರೆ, ಬಿ.ಜಿ.ಪಾಟೀಲ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಮರನಾಥ ಪಾಟೀಲ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್‌, ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬಿಜೆಪಿ ಸರ್ಕಾರ ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ರಾಜ್ಯ ದಿವಾಳಿ: ರಣದೀಪ್‌ ಸಿಂಗ್‌ ವಾಗ್ದಾಳಿ

ಕಲ್ಯಾಣದ ಪ್ರಗತಿ; ಶ್ವೇತಪತ್ರ ಹೊರಡಿಸಿ: ನಂಜುಂಡಪ್ಪ ವರದಿ ಅನುಷ್ಠಾನದ ಬಳಿಕ ಈವರೆಗೆ ಕಲ್ಯಾಣ ಕರ್ನಾಟಕ ಸೇರಿದಂತೆ ಇಡೀ ಉತ್ತರ ಕರ್ನಾಟಕದ ಹಿಂದುಳಿದ ತಾಲೂಕುಗಳಿಗೆ ಮಾಡಿರುವ ಖರ್ಚು-ವೆಚ್ಚದ ಕುರಿತು ಶ್ವೇತಪತ್ರ ಹೊರಡಿಸಬೇಕೆಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ರಾಜ್ಯ ಸರಕಾರಕ್ಕೆ ಸಲಹೆ ನೀಡಿದರು. ಇತ್ತೀಚೆಗೆ ಈ ಕುರಿತು ಖುದ್ದಾಗಿ ಅಧಿವೇಶನದಲ್ಲಿ ತಾವು ಪ್ರಸ್ತಾಪಿಸಿದ್ದಾಗಿ ಹೇಳಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಬಂದ ಅನುದಾನದಲ್ಲಿ ಯಾವುದಕ್ಕೆ ಎಷ್ಟುಖರ್ಚಾಗಿದೆ ಎಂಬುದು ಸಹ ಶ್ವೇತಪತ್ರ ಹೊರಡಿಸುವುದರಿಂದ ಜನರಿಗೆ ಎಲ್ಲವೂ ಗೊತ್ತಾಗಲಿದೆ ಎಂದರು. ನಂಜುಂಡಪ್ಪ ವರದಿಯ ನಂತರ ಸಾಕಷ್ಟುಅವಧಿಯಾಗಿದೆ. ಈ ಹಂತದಲ್ಲಿ ಅನುದಾನವೂ ಸಾಕಷ್ಟು ಬಿಡುಗಡೆಯಾಗಿದೆ. ಹೀಗಾಗಿ ಅನುದಾನದಿಂದ ಏನೆಲ್ಲಾ ಯ್ತು. ಯಾವ ಪ್ರದೇಶದಲ್ಲಿ ಪ್ರಗತಿಯಾಗಿದೆ, ಅದರ ವಾಸ್ತವ ಚಿಕ್ಷಣ ಅರಿಯಬೇಕು ಎಂದಾದರೆ ಅಭಿವೃದ್ಧಿಯ ಮೌಲ್ಯಮಾಪನ ಆಗಲೇಬೇಕು ಎಂದರು.

Follow Us:
Download App:
  • android
  • ios