Asianet Suvarna News Asianet Suvarna News

ಸೋಲಿಗೆ 3 ಕಾರಣ ಹುಡುಕಿದ ಬಿಜೆಪಿ: ಮತಪ್ರಮಾಣ ಕುಸಿದಿಲ್ಲವೆಂದ ಸಿ.ಟಿ.ರವಿ

ಒಳ ಮೀಸಲಾತಿಯ ಒಳಪೆಟ್ಟು, ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಭರವಸೆಗಳನ್ನು ನಂಬಿ ಜನರು ಮತ ಚಲಾಯಿಸಿದ್ದು ಮತ್ತು ಪಕ್ಷದ ಕುರಿತ ನಕಾರಾತ್ಮಕ ಪ್ರಚಾರ. ಈ ಮೂರು ಅಂಶಗಳು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾಯಿತು ಎಂಬ ಅಭಿಪ್ರಾಯ ನೂತನ ಶಾಸಕರ ಪರಾಮರ್ಶೆ ಸಭೆಯಲ್ಲಿ ವ್ಯಕ್ತವಾಗಿದೆ.
 

BJP found 3 reasons for defeat in assembly elections gvd
Author
First Published Jun 9, 2023, 5:44 AM IST

ಬೆಂಗಳೂರು (ಜೂ.09): ಒಳ ಮೀಸಲಾತಿಯ ಒಳಪೆಟ್ಟು, ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಭರವಸೆಗಳನ್ನು ನಂಬಿ ಜನರು ಮತ ಚಲಾಯಿಸಿದ್ದು ಮತ್ತು ಪಕ್ಷದ ಕುರಿತ ನಕಾರಾತ್ಮಕ ಪ್ರಚಾರ. ಈ ಮೂರು ಅಂಶಗಳು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾಯಿತು ಎಂಬ ಅಭಿಪ್ರಾಯ ನೂತನ ಶಾಸಕರ ಪರಾಮರ್ಶೆ ಸಭೆಯಲ್ಲಿ ವ್ಯಕ್ತವಾಗಿದೆ. ಗುರುವಾರ ಪಕ್ಷದ ಕಚೇರಿಯಲ್ಲಿ ಹಿರಿಯ ನಾಯಕರ ಸಮ್ಮುಖದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಈ ವಿಷಯ ತಿಳಿಸಿದ್ದಾರೆ.

ರಾಜ್ಯದಲ್ಲಿ 1985ರ ಚುನಾವಣೆ ಹೊರತುಪಡಿಸಿ ಬಳಿಕ ಆಡಳಿತ ಪಕ್ಷ ಮತ್ತೆ ಅಧಿಕಾರಕ್ಕೆ ಬಂದ ಉದಾಹರಣೆ ಇಲ್ಲ. ಬಿಜೆಪಿ ಎದೆಗುಂದುವ ಪಕ್ಷವಲ್ಲ. 1984ರ ಲೋಕಸಭಾ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನ ಗೆದ್ದಿತ್ತು. ಅದರೆ ಎದೆಗುಂದದೆ ಪಕ್ಷ ಸಂಘಟನೆ ಮಾಡಲಾಯಿತು. ಈ ಚುನಾವಣೆಯಲ್ಲಿಯೂ ನಮ್ಮ ಪಕ್ಷದ ಮತ ಪ್ರಮಾಣ ಕಡಿಮೆ ಆಗಿಲ್ಲ. ಸ್ಥಾನಗಳ ಸಂಖ್ಯೆ ಕಡಮೆಯಾಗಿದೆ ಎಂದರು.

ರಾಮ​ನಗರ, ಬನ್ನೇ​ರು​ಘ​ಟ್ಟ​ದಲ್ಲಿ ಆನೆ ಕಾರ್ಯಪಡೆ ರಚನೆ: ಸಚಿವ ಈಶ್ವರ ಖಂಡ್ರೆ

ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರಿಗೆ ವಿಶ್ವಾಸ ತುಂಬುವ ಕೆಲಸ ಆಗಿದೆ. ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಲು ನಿರ್ಧರಿಸಲಾಗಿದೆ. ಸರ್ಕಾರದ ಒಳ್ಳೆಯ ಕಾರ್ಯಕ್ಕೆ ಸಹಕಾರ ನೀಡಲಾಗುವುದು. ಜನವಿರೋಧಿ ಕಾರ್ಯ ಮುಂದುವರಿಸಿದಾಗ ಮತ್ತು ಹಿಡನ್‌ ಅಜೆಂಡಾ ಜೊತೆ ರಾಜ್ಯಕ್ಕೆ ಘಾತುಕ ನಿರ್ಣಯ ಕೈಗೊಂಡರೆ ಹೋರಾಟ ನಡೆಸಲೂ ನಿರ್ಧರಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಮೊದಲಾದವರು ಪಾಲ್ಗೊಂಡಿದ್ದರು ಎಂದು ರವಿ ವಿವರಿಸಿದರು.

ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿ, ಸಭೆಯಲ್ಲಿ ಗೆದ್ದ ಶಾಸಕರಿಗೆ ಅಭಿನಂದನೆ ಸಲ್ಲಿಸಲಾಯಿತು. ಜತೆಗೆ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಒಂಭತ್ತು ವರ್ಷ ತುಂಬಿದ ಹಿನ್ನೆಲೆ ಆ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಬಗ್ಗೆ ಚರ್ಚೆ ಆಯಿತು. ಪಕ್ಷ ಸಂಘಟನೆ, ಕಾಂಗ್ರೆಸ್‌ ವಿರುದ್ಧ ಹೋರಾಟ ಬಗ್ಗೆ ಕೂಡ ಸಮಾಲೋಚನೆ ನಡೆಯಿತು ಎಂದು ಮಾಹಿತಿ ನೀಡಿದರು.

ಸೋಲಿಗೆ ಕಾರಣಗಳು
1. ಒಳಮೀಸಲು ಘೋಷಣೆಯಿಂದ ಬಿಜೆಪಿಗೆ ಒಳಪೆಟ್ಟು
2. ಕಾಂಗ್ರೆಸ್‌ ಘೋಷಣೆ ಮಾಡಿದ 5 ಗ್ಯಾರಂಟಿ ಸ್ಕೀಂಗಳು
3. ಬಿಜೆಪಿ ಸರ್ಕಾರದ ಬಗೆಗಿನ ನಕಾರಾತ್ಮಕ ಪ್ರಚಾರ

ಕಾಡು ಪ್ರಾಣಿಗಳ ದಾಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಿ: ಎಚ್‌.ಡಿ.ಕುಮಾರಸ್ವಾಮಿ

1985ರ ಚುನಾವಣೆ ಹೊರತುಪಡಿಸಿ ರಾಜ್ಯದಲ್ಲಿ ಆಡಳಿತ ಪಕ್ಷ ಮತ್ತೆ ಅಧಿಕಾರಕ್ಕೆ ಬಂದ ಉದಾಹರಣೆ ಇಲ್ಲ. ಬಿಜೆಪಿ ಎದೆಗುಂದುವ ಪಕ್ಷವಲ್ಲ. 1984ರ ಲೋಕಸಭಾ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನ ಗೆದ್ದಿತ್ತು. ಅದರೆ ಎದೆಗುಂದದೆ ಪಕ್ಷ ಸಂಘಟನೆ ಮಾಡಲಾಯಿತು. ಈ ಚುನಾವಣೆಯಲ್ಲಿಯೂ ನಮ್ಮ ಪಕ್ಷದ ಮತ ಪ್ರಮಾಣ ಕಡಿಮೆ ಆಗಿಲ್ಲ. ಸ್ಥಾನಗಳ ಸಂಖ್ಯೆ ಕಡಮೆಯಾಗಿದೆ.
- ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Follow Us:
Download App:
  • android
  • ios