ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಬಿಜೆಪಿಯ ಹಿರಿಯ ನಾಯಕರಾದ ವಿ.ಸೋಮಣ್ಣ ಹಾಗೂ ಆರ್‌.ಅಶೋಕ್‌ಗೆ ಕಾಂಗ್ರೆಸ್‌ ಕಲಿಗಳಾದ ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ವಿರುದ್ಧ ಸ್ಪರ್ಧೆ ಮಾಡುವ ಜವಾಬ್ದಾರಿ ನೀಡಲಾಗಿದೆ. 

ಬೆಂಗಳೂರು (ಏ.11): ರಾಜ್ಯ ವಿಧಾನಸಭೆ ಚುನಾವಣೆಗೆ ಯಾವ ಪಕ್ಷವೂ ನೀಡದಷ್ಟು ಹೈಪ್‌ಅನ್ನು ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ ಒಟ್ಟು 189 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಚ್ಚರಿ ಎನ್ನುವಂತೆ ಬಿಜೆಪಿ ಇಬ್ಬರು ಹಿರಿಯ ನಾಯಕರಾದ ವಿ. ಸೋಮಣ್ಣ ಹಾಗೂ ಆರ್‌.ಅಶೋಕ್‌ ಅವರಿಗೆ ಕಾಂಗ್ರೆಸ್‌ ಕಲಿಗಳ ವಿರುದ್ಧ ಹೋರಾಡುವ ಜವಾಬ್ದಾರಿ ನೀಡಲಾಗಿದೆ. ಅಚ್ಚರಿ ಎನ್ನುವಂತೆ ವಿ. ಸೋಮಣ್ಣ ಅವರಿಗೆ ಬೆಂಗಳೂರಿನ ಯಾವುದೇ ಕ್ಷೇತ್ರದಲ್ಲಿ ಟಿಕೆಟ್‌ ನೀಡಲಾಗಿಲ್ಲ. ಈಗಾಗಲೇ ಅವರು ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದ ಚಾಮರಾಜನಗರದೊಂದಿಗೆ ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಕ್ಷೇತ್ರವಾಗಿರುವ ವರುಣಾದಲ್ಲಿಯೂ ಸ್ಪರ್ಧೆ ಮಾಡುವಂತೆ ಸೂಚಿಸಲಾಗಿದೆ. ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರ ವಿರುದ್ಧ ಸ್ಪರ್ಧೆ ಮಾಡುವಂತೆ ಸಚಿವ ಆರ್‌.ಅಶೋಕ್‌ ಅವರಿಗೆ ಸೂಚಿಸಲಾಗಿದೆ. ಅದರೊಂದಿಗೆ ಅವರು ಪದ್ಮನಾಭನಗರ ಕ್ಷೇತ್ರದಲ್ಲಿಯೂ ಸ್ಪರ್ಧೆ ಮಾಡಲಿದ್ದಾರೆ. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌, ಅಣ್ಣಾಮಲೈ , ಉಸ್ತುವಾರಿ ಅರುಣ್‌ ಸಿಂಗ್‌, ನಳೀನ್‌ ಕುಮಾರ್‌ ಕಟೀಲ್‌ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಮನ್ಸುಖ್‌ ಮಾಂಡವಿಯಾ ಹಾಜರಿದ್ದ ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಅಭ್ಯರ್ಥಿಗಳ ಲಿಸ್ಟ್‌ ಅನ್ನು ಘೋಷಣೆ ಮಾಡಲಾಗಿದೆ.

Add Asianetnews Kannada as a Preferred SourcegooglePreferred

Breaking: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, 189 ಮಂದಿಗೆ ಟಿಕೆಟ್ ಘೋಷಣೆ, 52 ಹೊಸ ಮುಖ!

ಕಳೆದ ಬಾರಿ ಸಿದ್ಧರಾಮಯ್ಯ ಅವರ ವಿರುದ್ಧ ಬಿ.ಶ್ರೀರಾಮುಲು ಅವರನ್ನು ಬಾದಾಮಿಯಲ್ಲಿ ಕಣಕ್ಕಿಳಿಸಿತ್ತು. ಆದರೆ, ಬಾದಾಮಿಯಲ್ಲಿ ಸಿದ್ಧರಾಮಯ್ಯ ಅಲ್ಪ ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಈ ಬಾರಿ ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಅವರಿಗೆ ಅಡ್ಡಗಾಲು ಹಾಕುವ ಉದ್ದೇಶದಿಂದ ಎರಡೂ ಕ್ಷೇತ್ರಗಳಲ್ಲಿ ತನ್ನ ಪ್ರಬಲ ನಾಯಕರಿಗೆ ಟಿಕೆಟ್‌ ನೀಡಿದೆ.

ಆಕ್ರೋಶಗೊಂಡ ಕಾರ್ಯಕರ್ತರಿಗೆ ರಾಜೀನಾಮೆ ಹಿಂದಿನ ಅಸಲಿ ಸತ್ಯ ವಿವರಿಸಿದ ಈಶ್ವರಪ್ಪ!

ವಿ.ಸೋಮಣ್ಣ ಸುದೀರ್ಘ ವರ್ಷಗಳಿಂದ ಸ್ಪರ್ಧೆ ಮಾಡುತ್ತಿದ್ದ ಕ್ಷೇತ್ರವಾದ ಗೋವಿಂದರಾಜನಗರ ಕ್ಷೇತ್ರಕ್ಕೆ ಇನ್ನೂ ಟಿಕೆಟ್‌ ಘೋಷಣೆ ಮಾಡಲಾಗಿಲ್ಲ. ಅದರೊಂದಿಗೆ ಬೆಂಗಳೂರಿನ ಹೆಬ್ಬಾಳ ಹಾಗೂ ಮಹಾದೇವಪುರ ಕ್ಷೇತ್ರದ ಟಿಕೆಟ್‌ ಕೂಡ ಘೋಷಣೆ ಮಾಡಿಲ್ಲ. ಹೆಬ್ಬಾಳದಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ನಾರಾಯಣಸ್ವಾಮಿ ನಡುವೆ ಪೈಪೋಟಿ ಇದ್ದರೆ, ಮಹಾದೇವಪುರ ಅರವಿಂದ್‌ ಲಿಂಬಾವಳಿ ಸ್ಪರ್ಧೆ ಮಾಡುತ್ತಿದ್ದ ಕ್ಷೇತ್ರವಾಗಿದೆ.