ಆಪ್ ಸಂಸದ ರಾಘವ್ ಚಡ್ಡಾ ಬಿಜೆಪಿ ಸೇರಿದ್ದಕ್ಕೆ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯನ್ನು 'ನಾಚಿಕೆಗೇಡಿ' ಮತ್ತು 'ಬಕಾಸುರ' ರಾಕ್ಷಸನಿಗೆ ಹೋಲಿಸಿರುವ ಅವರು, ಪಕ್ಷಾಂತರಿಗಳು 'ಗೂಂಡಾಗಳ ಪಕ್ಷ' ಸೇರಿದ್ದಾರೆ ರಾಘವ್ ಚಡ್ಡಾ ವಿರುದ್ಧವೂ ಕಿಡಿ ಕಾರಿದ್ದಾರೆ.

ಶಿವಸೇನಾ (ಯುಬಿಟಿ) ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರು ಶನಿವಾರ, ಆಮ್ ಆದ್ಮಿ ಪಕ್ಷದಿಂದ ಬಿಜೆಪಿಗೆ ಹಾರಿದ ರಾಘವ್ ಚಡ್ಡಾ ಮತ್ತು ಇತರ ಇಬ್ಬರು ಸಂಸದರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಬಿಜೆಪಿ ಬಕಾಸುರ ಪಕ್ಷ: ರಾವತ್ ಕಿಡಿ

ಬಿಜೆಪಿಯನ್ನು 'ನಾಚಿಕೆಗೇಡಿ' ಪಕ್ಷ ಎಂದು ಕರೆದಿರುವ ಅವರು, ಎಂದಿಗೂ ಹಸಿವು ನೀಗದ ಪೌರಾಣಿಕ ರಾಕ್ಷಸ 'ಬಕಾಸುರ'ನಿಗೆ ಹೋಲಿಸಿದ್ದಾರೆ. ಪಕ್ಷಾಂತರಿಗಳು 'ಗೂಂಡಾಗಳ ಮತ್ತು ಭ್ರಷ್ಟರ ಪಕ್ಷ' ಸೇರಿದ್ದಾರೆ. ತಾವು ನರಕಕ್ಕೆ ಕಾಲಿಟ್ಟಿದ್ದೇವೆ ಎಂಬ ಸತ್ಯ ಅವರಿಗೆ ಶೀಘ್ರದಲ್ಲೇ ಅರಿವಾಗಲಿದೆ ಎಂದು ರಾವತ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾವತ್, ಬಿಜೆಪಿ ಯಾವ ರೀತಿಯ ರಾಜಕೀಯ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ರಾಜಕೀಯವನ್ನು ಒಂದೇ ಪದದಲ್ಲಿ ಹೇಳಬೇಕೆಂದರೆ, ಅದು 'ನಾಚಿಕೆಗೇಡಿತನ'. ಅವರಿಗೆ ಯಾವುದೇ ನಾಚಿಕೆ ಇಲ್ಲ. ನಿನ್ನೆಯವರೆಗೂ ನಮ್ಮ ಸ್ನೇಹಿತರಾಗಿದ್ದ ರಾಘವ್ ಚಡ್ಡಾ ಅವರಂತಹ ನಾಯಕರು, ಬಿಜೆಪಿ ಒಂದು ಗೂಂಡಾಗಳ, ಪುಂಡರ ಮತ್ತು ಭ್ರಷ್ಟರ ಪಕ್ಷ ಎಂದು ಬಹಿರಂಗವಾಗಿ ಹೇಳುತ್ತಿದ್ದರು. ಈಗ ಅವರೆಲ್ಲರೂ ಅದೇ ಗೂಂಡಾಗಳ ಮತ್ತು ಭ್ರಷ್ಟರ ಪಕ್ಷವನ್ನು ಸೇರಿಕೊಂಡಿದ್ದಾರೆ. ಮಹಾಭಾರತದಲ್ಲಿ ಬಕಾಸುರ ಎಂಬ ರಾಕ್ಷಸನಿದ್ದಾನೆ. ಅವನ ಹಸಿವು ಎಂದಿಗೂ ನೀಗುವುದಿಲ್ಲ, ಹೊಟ್ಟೆ ತುಂಬುವುದೇ ಇಲ್ಲ ಅದೇ ರೀತಿ ಬಿಜೆಪಿ ಕೂಡ ಬಕಾಸುನಿದ್ದಂತೆ ಎಂದು ಹೇಳಿದರು.

ಬಿಜೆಪಿ ಈಗ ಬಕಾಸುರರ ಪಕ್ಷವಾಗಿ ಮಾರ್ಪಟ್ಟಿದೆ. ಅವರು ಸಿಕ್ಕಿದ್ದನ್ನೆಲ್ಲಾ ತಿಂದು ತೇಗುತ್ತಾರೆ. ರಾಘವ್ ಚಡ್ಡಾ ಅವರಂತಹ ಏಳು ಮಂದಿ ಆ ನರಕದಂತಹ ಪಕ್ಷಕ್ಕೆ ಸೇರಿದ್ದಾರೆ. ಅದರ ಬಗ್ಗೆ ನಮಗೆ ಯಾವುದೇ ವಿಷಾದವಿಲ್ಲ. ನರಕ ಹೇಗಿರುತ್ತದೆ ಎಂಬುದು ಅವರಿಗೆ ಶೀಘ್ರದಲ್ಲೇ ತಿಳಿಯಲಿದೆ... ಇದರಿಂದ ವಿರೋಧ ಪಕ್ಷ ಎಂದಿಗೂ ದುರ್ಬಲವಾಗುವುದಿಲ್ಲ. ಪಕ್ಷ ತೊರೆದ ಈ ಆರು-ಏಳು ಮಂದಿ ಜನಸಾಮಾನ್ಯರ ನಾಯಕರಲ್ಲ. ಅವರು ಹೆಚ್ಚೆಂದರೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ಪೇಜ್ 3 ನಾಯಕರು ಅಷ್ಟೇ ಎಂದು ರಾವತ್ ಕಿಡಿಕಾರಿದ್ದಾರೆ.

ಆಪ್‌ಗೆ ದೊಡ್ಡ ಶಾಕ್: ಬಿಜೆಪಿ ಸೇರಿದ ಮೂವರು ಸಂಸದರು

ಈ ಹಿಂದೆ ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಉಪನಾಯಕರಾಗಿ ಕಾರ್ಯನಿರ್ವಹಿಸಿ, ನಂತರ ಆ ಸ್ಥಾನದಿಂದ ತೆಗೆದುಹಾಕಲಾಗಿದ್ದ ರಾಘವ್ ಚಡ್ಡಾ ಸೇರಿದಂತೆ ಮೂವರು ರಾಜ್ಯಸಭಾ ಸಂಸದರು ಶುಕ್ರವಾರ ಬಿಜೆಪಿಗೆ ಸೇರ್ಪಡೆಗೊಂಡರು. ಇದು ಆಪ್‌ಗೆ ದೊಡ್ಡ ಹಿನ್ನಡೆಯಾಗಿದೆ.

ಶುಕ್ರವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಚಡ್ಡಾ, ಪಕ್ಷದ ರಾಜ್ಯಸಭಾ ಸದಸ್ಯರಲ್ಲಿ ಮೂರನೇ ಎರಡರಷ್ಟು ಸಂಸದರು ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದ್ದಾರೆ ಎಂದು ಘೋಷಿಸುವ ಮೂಲಕ, ಹಲವು ವಾರಗಳಿಂದ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳಿಗೆ ತೆರೆ ಎಳೆದರು. ರಾಘವ್ ಚಡ್ಡಾ, ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಈ ಮೂವರು ಸಂಸದರು ಪಕ್ಷದಲ್ಲಿ ವಿಭಜನೆಯನ್ನು ಘೋಷಿಸಿ, ನಂತರ ಬಿಜೆಪಿ ಮುಖ್ಯಸ್ಥ ನಿತಿನ್ ನಬಿನ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಪಕ್ಷಾಂತರಿಗಳಿಗೆ ಬಿಜೆಪಿ ಭರ್ಜರಿ ಸ್ವಾಗತ

ಈ ಬೆಳವಣಿಗೆಗೆ ಆಪ್ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾದರೆ, ಬಿಜೆಪಿ ಮಾತ್ರ ಪಕ್ಷಾಂತರಿಗಳನ್ನು ತೆರೆದ ಮನಸ್ಸಿನಿಂದ ಸ್ವಾಗತಿಸಿದೆ. ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಈ ಬೆಳವಣಿಗೆಯನ್ನು 'ಸ್ವಾಭಾವಿಕ' ಎಂದು ಬಣ್ಣಿಸಿ, ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಲು ಇದನ್ನೇ ಅಸ್ತ್ರವಾಗಿಸಿಕೊಂಡರು.

ಎಕ್ಸ್‌ನಲ್ಲಿ ಶುಭ ಕೋರಿದ ನಿತಿನ್ ನಬಿನ್

ಇದಲ್ಲದೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾಜ್ಯಸಭಾ ಸಂಸದರನ್ನು ಪಕ್ಷಕ್ಕೆ ಸ್ವಾಗತಿಸಿದರು. ಶುಕ್ರವಾರ 'X' (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ನಬಿನ್, ಎಲ್ಲಾ ಏಳು ಸಂಸದರಿಗೆ ಶುಭ ಹಾರೈಸಿದರು ಮತ್ತು "2047 ರ ವೇಳೆಗೆ ವಿಕ್ಷಿತ್ ಭಾರತ್" ಗುರಿಯನ್ನು ಸಾಧಿಸಲು ಒಟ್ಟಾಗಿ ಕೆಲಸ ಮಾಡುವಂತೆ ಪ್ರೋತ್ಸಾಹಿಸಿದರು. (ANI)

(ಈ ಸುದ್ದಿಯ ಶೀರ್ಷಿಕೆ ಹೊರತುಪಡಿಸಿ, ಉಳಿದ ಭಾಗವನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್‌ನಿಂದ ಪ್ರಕಟಿಸಲಾಗಿದೆ.)