ರಾಘವ್ ಚಡ್ಡಾ ಜೊತೆ ಪಕ್ಷ ತೊರೆದ ಇಬ್ಬರು ಸಂಸದರು ಬಿಜೆಪಿಗೆ, ಆಪ್ ಪಾರ್ಟಿ ಖಾಲಿ ಖಾಲಿ, ಈ ಬೆಳವಣಿಗೆ ಬೆನ್ನಲ್ಲೇ ರಾಜಕೀಯ ತಲ್ಲಣ ಸೃಷ್ಟಿಯಾಗಿದೆ. ಮೊದಲೆ ಕಳೆಗುಂದಿದ್ದ ಆಪ್ ಇದೀಗ ನಾಯಕರಿಲ್ಲದೆ ಬರಿಗಾಗುತ್ತಿದೆ. 

ನವದೆಹಲಿ (ಏ.24) ಆಮ್ ಆದ್ಮಿ ಪಾರ್ಟಿಯಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಆರವಿಂದ್ ಕೇಜ್ರಿವಾಲ್‌ಗಿಂತ ಹೆಚ್ಚು ಪ್ರಚಾರ ಪಡೆಯುವ ನಾಯಕರ ಧ್ವನಿಯನ್ನು ಅಡಗಿಸಲಾಗುತ್ತದೆ ಅನ್ನೋ ಗಂಭೀರ ಆರೋಪಗಳ ನಡುವೆ ಕೆಲ ಮಹತ್ವಜ ಬೆಳವಣಿಗೆಗಳು ನಡೆದಿದೆ. ಈಗಾಗಲೇ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಧ್ವನಿ ಅಡಗಿಸಿದ ಆಮ್ ಆದ್ಮಿ ಪಾರ್ಟಿಗೆ ಇದೀಗ ಸಂಕಷ್ಟ ಹೆಚ್ಚಾಗಿದೆ. ರಾಘವ್ ಚಡ್ಡಾ ಜೊತೆ ಮತ್ತಿಬ್ಬರು ರಾಜ್ಯಸಭಾ ಸದಸ್ಯರು ಆಮ್ ಆದ್ಮಿ ಪಕ್ಷ ತೊರೆದು, ಬಿಜೆಪಿ ಸೇರಿಕೊಂಡಿದ್ದಾರೆ. ಸಂಸದರಾದ ಅಶೋಕ್ ಮಿತ್ತಲ್ ಹಾಗೂ ಸಂದೀಪ್ ಪಾಠಕ್ ಆಪ್‌ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿಕೊಂಡಿದ್ದಾರೆ.

ಮೂವರು ಗುಡ್‌ಬೈನಿಂದ ಆಪ್ ಗಡಗಡ

ರಾಘವ್ ಚಡ್ಡಾ ಹೊರಗೆ ಕಳುಹಿಸಿ ಹೊಸ ತಂತ್ರ ಹೆಣೆಯಲು ಮುಂದಾಗಿದ್ದ ಆಮ್ ಆದ್ಮಿ ಪಾರ್ಟಿಗೆ ಇದೀಗ ತಿರುಗುಬಾಣವಾಗಿದೆ. ರಾಘವ್ ಚಡ್ಡಾ ತಾವು ಹೊರಗೆ ಹೋಗುವಾಗ ಮತ್ತಿಬ್ಬರನ್ನು ಕರೆದುಕೊಂಡು ಹೋಗಿದ್ದಾರೆ. ಅಶೋಕ್ ಮಿತ್ತಲ್ ಹಾಗೂ ಸಂದೀಪ್ ಪಾಠಕ್ ಆಪ್ ತೊರೆದಿರುವುದು ಅರವಿಂದ್ ಕೇಜ್ರಿವಾಲ್ ನಿದ್ದೆಗೆಡಿಸಿದೆ.

2/3 ಸಂಸದರು ನಮ್ಮ ಜೊತೆಗಿದ್ದಾರೆ

ಮೂವರು ಬಿಜೆಪಿ ಸೇರಿದ್ದು ಮಾತ್ರವಲ್ಲ ಇದೀಗ 2 ರಿಂದ 3 ಸಂಸದರು ತಮ್ಮ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ರಾಘವ್ ಚಡ್ಡಾ ಬಾಂಬ್ ಸಿಡಿಸಿದ್ದಾರೆ. ನಾವು ರಾಜ್ಯಸಭೆ ಸಭಾಪತಿ ಮಾಹಿತಿ ನೀಡಿದ್ದೇವೆ. ಸಂವಿಧಾನದ ಅಡಿಯಲ್ಲಿ ನಾವು ಬಿಜೆಪಿಯೊಂದಿಗೆ ವಿಲೀನಗೊಳ್ಳುತ್ತಿದ್ದೇವೆ ಎಂದು ರಾಘವ್ ಚಡ್ಡಾ ಹೇಳಿದ್ದಾರೆ. ಈ ಮೂಲಕ ಆಮ್ ಆದ್ಮಿ ಪಾರ್ಟಿಗಹೆ ಶಾಕ್ ಮೇಲೆ ಶಾಕ್ ಕೊಟ್ಟಿದ್ದಾರೆ. ಇದೇ ವೇಳೆ ಆಮ್ ಆದ್ಮಿ ಪಾರ್ಟಿಯ ರಾಜೇಂದ್ರ ಗುಪ್ತಾ, ವಿಕ್ರಮ್ ಸಹನಿ ಕೂಡಾ ನಮ್ಮ ಜೊತೆಗಿದ್ದಾರೆ ಎಂದು ಚಡ್ಡಾ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಆಪ್ ನ 10 ಸದಸ್ಯರಿದ್ದಾರೆ. ಈ ಪೈಕಿ ಒಬ್ಬರ ಹಿಂದೆ ಒಬ್ಬರು ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ.

ಆಪ್ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವ ಹರ್ಭಜನ್ ಸಿಂಗ್, ಸ್ವಾತಿ

ಆಮ್ ಆದ್ಮಿ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸಂಸರಾದರ ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಮಹಿಳಾ ಹೋರಾಟಗಾರ್ತಿ ಸ್ವಾತಿ ಮಲಿವಾಲ್ ಇಬ್ಬರೂ ಆಪ್ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಅರವಿಂದ್ ಕೇಜ್ರಿವಾಲ್ ಮನೆಯಲ್ಲಿ ಸ್ವಾತಿ ಮಲಿವಾಲ್ ಮೇಲೆ ಹಲ್ಲೆಯಾಗಿದೆ ಅನ್ನೋ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದಾದ ಬಳಿಕ ಸ್ವಾತಿ ಮಲಿವಾಲ್ ಆಪ್‌ನಿಂದ ದೂರ ಉಳಿದಿದ್ದಾರೆ. ಇತ್ತ ಹರ್ಭಜನ್ ಸಿಂಗ್ ಆಪ್ ಮಾತ್ರವಲ್ಲ ಯಾರ ಕೈಗೂ ಸಿಗದೆ ದೂರವಿದ್ದಾರೆ. ಹೀಗಾಗಿ ಆಪ್ ಪರ ಇರುವ ಸಂಸದರ ಸಂಖ್ಯೆ ಬೆರಳೆಣಿಕೆಯಾಗಿದೆ.