Karnataka Politics: ಕರ್ನಾಟಕದಲ್ಲಿ ಪೂರ್ಣ ಬಹುಮತದ ಸರ್ಕಾರಕ್ಕೆ ಬಿಜೆಪಿ ಗುರಿ
* ಬೆಳಗಾವಿ, ಮೈಸೂರು, ಮಂಗಳೂರಲ್ಲಿ ಬಿಜೆಪಿ ವಿಭಾಗೀಯ ಮಟ್ಟದ ಸಭೆ ಮುಕ್ತಾಯ
* ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು, ಪಕ್ಷದ ಶಕ್ತಿ ಸದ್ಬಳಕೆಗೆ ನಾಯಕರ ಸಲಹೆ
* ಕಾಂಗ್ರೆಸ್ನಲ್ಲಿ ಪರಿವಾರದ ಕಲ್ಪನೆ ಇಲ್ಲ, ಸಿದ್ದು ನರಹಂತಕ ಹುಲಿ
ಬೆಳಗಾವಿ/ಮೈಸೂರು/ಮಂಗಳೂರು(ಏ.14): ಮುಂಬರುವ ವಿಧಾನಸಭಾ ಚುನಾವಣೆಯನ್ನು(Karnataka Assembly Election) ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದ ಬೆಳಗಾವಿ, ಮಂಗಳೂರು ಮತ್ತು ಮೈಸೂರಲ್ಲಿ ನಡೆದ ಬಿಜೆಪಿ(BJP) ವಿಭಾಗೀಯ ಮಟ್ಟದ ಎರಡು ದಿನಗಳ ಸಭೆ ಬುಧವಾರ ಸಮಾರೋಪಗೊಂಡಿತು.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್(Arun Singh), ಮುಖ್ಯಮಂತ್ರಿ ಬೊಮ್ಮಾಯಿ(Basavaraj Bommai) ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(Nanli Kumar Kateel) ನೇತೃತ್ವದ ಮೂರು ಪ್ರತ್ಯೇಕ ತಂಡದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚುನಾವಣೆಗೆ ಪಕ್ಷದ ಸಿದ್ಧತೆಯನ್ನು ಪರಿಶೀಲಿಸಲಾಯಿತು. 150 ಸ್ಥಾನದ ಗುರಿ ಸಾಧನೆಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು. ಭಿನ್ನಮತ ಬದಿಗಿಟ್ಟು, ಒಗ್ಗಟ್ಟಿನಿಂದ ಕೆಲಸ ಮಾಡಿ, ಫಲಾನುಭವಿಗಳ ಸಮಾವೇಶ ಏರ್ಪಡಿಸಿ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿ ಎಂಬಿತ್ಯಾದಿ ಸಲಹೆಗಳನ್ನು ಜಿಲ್ಲಾ ಮುಖಂಡರಿಗೆ ನೀಡಲಾಯಿತು.
ಭಾರತೀಯರೆಂದು ಸಾಬೀತಿಗೆ ಹಿಂದಿ ಕಲೀಬೇಕಿಲ್ಲ: ಅಣ್ಣಾಮಲೈ
ಬೆಳಗಾವಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(BS Yediyurappa) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದೊಳಗಿನ ಭಿನ್ನಮತವೇ ಪ್ರಮುಖವಾಗಿ ಚರ್ಚೆಗೆ ಬಂತು. ಮುಂದಿನ ಚುನಾ ವಣೆಯನ್ನು ಗಮನದಲ್ಲಿಟ್ಟುಕೊಂಡು ಮುಖಂಡರು ಭಿನ್ನಮತ ಮರೆತು ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂಬ ಸಂದೇಶವನ್ನು ರವಾನಿಸಲಾಯಿತು.
ಮೈಸೂರಲ್ಲಿ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಜಗದೀಶ್ ಶೆಟ್ಟರ್, ಸಚಿವರಾದ ಕೆ.ಎಸ್.ಈಶ್ವರಪ್ಪ, ಎಸ್.ಟಿ.ಸೋಮಶೇಖರ್, ವಿ.ಸೋಮಣ್ಣ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಸ್ಥಳೀಯ ಮುಖಂಡರಿಗೆ ಬಿಜೆಪಿ ಶಕ್ತಿ ಸದ್ಬಳಕೆ ಕುರಿತು ಸಲಹೆ ನೀಡಲಾಯಿತು. 2023ರಲ್ಲಿ ರಾಜ್ಯದಲ್ಲಿ ಮತ್ತು 2024ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು, ಮೈಸೂರು ಭಾಗದಲ್ಲಿ ಪಕ್ಷಕ್ಕೆ ಪ್ರಾಬಲ್ಯವಿಲ್ಲ ಎಂಬ ಭಾವನೆ ಅಳಿಸಿಹಾಕಬೇಕು ಎಂದು ತಿಳಿಸಲಾಯಿತು.
ಅಭಿವೃದ್ಧಿ ಜತೆಗೆ ಹಿಂದುತ್ವ:
ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಸಭೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಪಕ್ಷ ಸಂಘಟನೆಗೆ ಸಂಬಂಧಿಸಿ ಹಲವು ಸಲಹೆಗಳನ್ನು ನೀಡಿದರು. ಅಭಿವೃದ್ಧಿ ಜತೆ ಹಿಂದುತ್ವ(Hindutva) ಕರಾವಳಿ ಬಿಜೆಪಿ ಜತೆಗಿದ್ದು, ಇದರ ಆಧಾರದಲ್ಲೇ ಮುಂದಿನ ಅಸೆಂಬ್ಲಿ ಚುನಾವಣೆಗೆ ಸಜ್ಜಾಗಬೇಕು ಎಂದು ತಿಳಿಸಿದರು.
ಮತದಾರರನ್ನು ಬಿಜೆಪಿ ಕಡೆಗೆ ಸೆಳೆಯಲು ಫಲಾನುಭವಿಗಳ ಸಮಾವೇಶ ಏರ್ಪಡಿಸಬೇಕು, ಪ್ರತಿ ಮನೆಯಲ್ಲೂ ಒಬ್ಬೊಬ್ಬರು ಕೇಂದ್ರ ಅಥವಾ ರಾಜ್ಯ ಸರ್ಕಾರದ ಫಲಾನುಭವಿ ಇದ್ದಾರೆ. ಅವರನ್ನು ಸಂಪರ್ಕಿಸಿ, ಬಿಜೆಪಿಗೆ ಸೆಳೆಯುವ ಕೆಲಸ ತಕ್ಷಣದಿಂದ ಶುರುವಾಗಬೇಕು. ಈ ಬಾರಿ ಬಹುಮತಕ್ಕೆ ಕೊರತೆಯಾಗದಂತೆ ಸರ್ಕಾರ ರಚನೆಯಾಗುವಂತಾಗಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್ನಲ್ಲಿ ಪರಿವಾರದ ಕಲ್ಪನೆ ಇಲ್ಲ, ಸಿದ್ದು ನರಹಂತಕ ಹುಲಿ-ಕಟೀಲ್
ಮೈಸೂರು: ರಾಜ್ಯದಲ್ಲಿ ನರಹಂತಕ ಹುಲಿ ಇದ್ದರೆ ಅದು ಸಿದ್ದರಾಮಯ್ಯ. ಕಾಂಗ್ರೆಸ್ನಲ್ಲಿ(Congress) ಪರಿವಾರದ ಕಲ್ಪನೆ ಇಲ್ಲ, ಬರೀ ಕುಟುಂಬದ ಚಿಂತನೆ ಅಡಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.
'40% ಕಮಿಷನ್ ಕೈ ಸೃಷ್ಟಿಸಿದ ಟೂಲ್ಕಿಟ್: ಕಾಂಗ್ರೆಸ್ ‘ಬೇನಾಮಿ ಅಧ್ಯಕ್ಷೆ’ಯ ಮಹಾ ಕೈವಾಡವೇ?'
ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ಮೈಸೂರು ವಿಭಾಗ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ನದು ಆಡಳಿತ ಮಹಿಷಾಸುರನ ಆಡಳಿತ. ರಾಜು, ಕುಟ್ಟಪ್ಪ, ಶರತ್ ಹತ್ಯೆಯಾದಾಗ ಸಿದ್ದರಾಮಯ್ಯ ಯಾರ ಮನೆಗೂ ಹೋಗಲಿಲ್ಲ. 24 ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು. ಆದರೂ ಯಾರಿಗೂ ಪರಿಹಾರ ನೀಡಲಿಲ್ಲ. ಸೋನಿಯಾ, ರಾಹುಲ್, ವಾದ್ರಾ, ಡಿ.ಕೆ. ಶಿವಕುಮಾರ್ ಜಾಮೀನಿನಲ್ಲಿದ್ದಾರೆ. ಅವರೇನು ಸ್ವಾತಂತ್ರ್ಯ ಹೋರಾಟಗಾರರು ಅಂತ ಜಾಮೀನು ಪಡೆದುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲೀಗ ಪರಿವರ್ತನೆ ಯುಗ ಆರಂಭವಾಗಿದೆ. ಕಾಂಗ್ರೆಸ್ ಮನೆ ಖಾಲಿ ಆಗುತ್ತಿದ್ದು, ಬಿಜೆಪಿ ಮನೆ ತುಂಬುತ್ತಿದೆ. ಚಾಮುಂಡೇಶ್ವರಿ ದೇವಿ ಆಶೀರ್ವಾದ, ವರುಣನ ವರದೊಂದಿಗೆ ಮೈಸೂರು ನಗರದಿಂದ ನಾವು ಸಭೆ ಮತ್ತು ಸಂಘಟನೆ ಆರಂಭಿಸಿದ್ದೇವೆ. 150ಕ್ಕೂ ಹೆಚ್ಚು ಸ್ಥಾನಗಳಿಸುವುದು ಮೈಸೂರು ನಗರದಿಂದ ಆರಂಭವಾಗಲಿದೆ ಎಂದರು.