ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತೆಗೆ ಒತ್ತು ನೀಡಲು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ವ್ಯಾಪ್ತಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ತರುವ 2023ರ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

ವಿಧಾನಸಭೆ (ಜು.06): ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತೆಗೆ ಒತ್ತು ನೀಡಲು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ವ್ಯಾಪ್ತಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ತರುವ 2023ರ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪರವಾಗಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ವಿಧೇಯಕ ಮಂಡನೆ ಮಾಡಿದರು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆ ಅಪಘಾತ, ಸಾವು-ನೋವು ನಿಯಂತ್ರಿಸುವುದು. ತನ್ಮೂಲಕ ಅಪಘಾತಗಳಿಂದ ಉಂಟಾಗುವ ಸಾಮಾಜಿಕ ಹಾಗೂ ಆರ್ಥಿಕ ಅಭದ್ರತೆ ನಿವಾರಿಸುವ ದೃಷ್ಟಿಯಿಂದ ರಸ್ತೆ ಸುರಕ್ಷತಾ ಪ್ರಾಧಿಕಾರದ ಅಡಿಗೆ ತರುವುದು ವಿಧೇಯಕದ ಉದ್ದೇಶ.

Add Asianetnews Kannada as a Preferred SourcegooglePreferred

2017ರಲ್ಲಿ ಜಾರಿಗೆ ಬಂದ ಪ್ರಾಧಿಕಾರದ ಅಡಿ ಪ್ರಸ್ತುತ ಪೊಲೀಸ್‌ ಇಲಾಖೆ, ಸಾರಿಗೆ ಇಲಾಖೆ, ಶಿಕ್ಷಣ, ಆರೋಗ್ಯ, ಲೋಕೋಪಯೋಗಿ, ಪಂಚಾಯತ್‌ ರಾಜ್‌, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬರುತ್ತದೆ. ಇಷ್ಟೂಇಲಾಖೆಗಳು ಸಮನ್ವಯ ಸಾಧಿಸುವ ಮೂಲಕ ರಸ್ತೆಗಳನ್ನು ವಾಹನ ಸವಾರರಿಗೆ ಸುರಕ್ಷಿತ ಎಂಬಂತೆ ಮಾಡುತ್ತವೆ. ಇದರ ಅಡಿಗೆ ಇದೀಗ ಬಿಬಿಎಂಪಿಯೂ ಸೇರ್ಪಡೆಯಾಗಿರುವುದರಿಂದ ರಸ್ತೆ ಸುರಕ್ಷತೆ ಬಗ್ಗೆ ಚರ್ಚಿಸಲು ಬಿಬಿಎಂಪಿಗೆ ವೇದಿಕೆ ಸಿಕ್ಕಂತಾಗುತ್ತದೆ. ತನ್ಮೂಲಕ ಬೆಂಗಳೂರು ವ್ಯಾಪ್ತಿಯಲ್ಲಿ ಅಪಘಾತ, ಸಾವು-ನೋವು ನಿಯಂತ್ರಿಸುವ ಉದ್ದೇಶದಿಂದ ವಿಧೇಯಕ ಮಂಡಿಸಿರುವುದಾಗಿ ತಿಳಿದುಬಂದಿದೆ.

ಸಂಸದ ತೇಜಸ್ವಿ ಸೂರ್ಯ ಹೆಸರಲ್ಲಿ ಅನಾಮಧೇಯ ಕರೆ: ವಜ್ರ, ಹಣಕ್ಕೆ ಬೇಡಿಕೆ

ಸಿಎಂ ಕಾನೂನು ಸಲಹೆಗಾರರ ಕಚೇರಿಗೆ ವಿಧೇಯಕ: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರ ಕಚೇರಿ ಸೃಜನೆಗೆ ‘ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) ಅಧಿನಿಯಮ-1956ಕ್ಕೆ ತಿದ್ದುಪಡಿ ವಿಧೇಯಕವನ್ನು ಮಂಡನೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರಾಗಿ ವಿರಾಜಪೇಟೆ ಶಾಸಕ ಎ.ಎಸ್‌.ಪೊನ್ನಣ್ಣ ಅವರನ್ನು ನೇಮಕ ಮಾಡಲಾಗಿತ್ತು. ಸಂಪುಟ ದರ್ಜೆ ಸಚಿವ ಸ್ಥಾನಮಾನದೊಂದಿಗೆ ಎಲ್ಲಾ ಸೌಲಭ್ಯ ನೀಡಿ ಆದೇಶಿಸಲಾಗಿತ್ತು. ಅವರಿಗೆ ವಿಧಾನಸೌಧ ಅಥವಾ ವಿಕಾಸಸೌಧದಲ್ಲಿ ಕಚೇರಿಗೆ ಕರ್ನಾಟಕ ವಿಧಾನಮಂಡಲ ಅಧಿನಿಯಮದಲ್ಲಿ ಅವಕಾಶವಿರಲಿಲ್ಲ. ಹೀಗಾಗಿ ವಿಧೇಯಕ ಮಂಡಿಸಲಾಗಿದೆ.

ಎತ್ತರದ ಕಟ್ಟಡ ನಿರ್ಮಾಣಕ್ಕೆ ಅಗ್ನಿಶಾಮಕ ಎನ್‌ಒಸಿ ಕಡ್ಡಾಯ: 21 ಮೀಟರ್‌ ಅಥವಾ ಅದಕ್ಕಿಂತ ಎತ್ತರದ ಕಟ್ಟಡಗಳ ನಿರ್ಮಾಣಕ್ಕೆ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನಿರಾಕ್ಷೇಪಣ ಪತ್ರ (ಎನ್‌ಓಸಿ) ಕಡ್ಡಾಯಗೊಳಿಸುವ ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಗೃಹ ಸಚಿವರ ಪರವಾಗಿ ಪ್ರಿಯಾಂಕ್‌ ಖರ್ಗೆ ಮಂಡಿಸಿದರು. ನಿರ್ಮಾಣಕ್ಕೆ ಮೊದಲೇ ಅಗ್ನಿಶಾಮಕ ದಳದಿಂದ ನಿರಾಪೇಕ್ಷಣಾ ಪತ್ರ ಪಡೆಯುವುದಕ್ಕೆ ಉಪಬಂಧವನ್ನು ಕಲ್ಪಿಸಲು ಅಗ್ನಿಶಾಮಕ ದಳ ಅಧಿನಿಯಮ-1964 ಕ್ಕೆ ಮತ್ತಷ್ಟುತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ. ಇದರಡಿ ಬಿಬಿಎಂಪಿಯಿಂದ ನಕ್ಷೆ ಮಂಜೂರಾತಿ ಪಡೆಯುವ ಮೊದಲೇ ಅಗ್ನಿಶಾಮಕ ಇಲಾಖೆಯಿಂದ ಎನ್‌ಓಸಿ ಪಡೆಯಬೇಕು. ಕಟ್ಟಡ ನಿರ್ಮಾಣ ಪೂರ್ಣಗೊಂಡ ಬಳಿಕ ಸಿಸಿ (ಕ್ಲಿಯರೆನ್ಸ್‌ ಸರ್ಟಿಫಿಕೇಟ್‌) ನೀಡಬೇಕು. ಜತೆಗೆ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿಗಳು (ಫೈರ್‌ ಆಫೀಸರ್‌) ಪ್ರತಿ ಎರಡು ವರ್ಷಗಳಿಗೊಮ್ಮೆ ಪರಿಶೀಲನೆ ನಡೆಸಬೇಕು ಎಂಬ ನಿಯಮಗಳನ್ನು ವಿಧಿಸಲು ನಿರ್ಧರಿಸಲಾಗಿದೆ.

ಕೆಎಸ್‌ಆರ್‌ಟಿಸಿ ಬಸ್ ಚಾಲಕ ವಿಷ ಸೇವನೆ ಪ್ರಕರಣ: ಜಗದೀಶ್ ಸ್ಥಿತಿ ಚಿಂತಾಜನಕ, ಸಾರಿಗೆ ಸಿಬ್ಬಂದಿಗಳ ಆಕ್ರೋಶ

ವಿಧೇಯಕದ ಉದ್ದೇಶವೇನು?
*ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದಿಂ ವಾಹನ ಮತ್ತು ರಸ್ತೆ ಎಂಜಿನಿಯರಿಂಗ್‌, ಸೂಚನಾ ಫಲಕಗಳ ಅಳವಡಿಕೆ
*ಗುಣಮಟ್ಟದ ಪಾದಚಾರಿ ಮಾರ್ಗ
*ಅಪರಾಧ ಉಲ್ಲಂಘನೆ ವಿರುದ್ಧ ಜಾಗೃತಿ
*ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮತ್ತು ಶಿಕ್ಷಣ
* ರಸ್ತೆ ಅಪಘಾತ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆ ಲಭ್ಯತೆ
* ವೈಜ್ಞಾನಿಕ ತಳಹದಿಯಲ್ಲಿ ನಿರ್ವಹಣೆ