ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರದಲ್ಲಿ ವಿಜಯೇಂದ್ರರನ್ನು ಮತ್ತೆ ಆಯ್ಕೆ ಮಾಡಿದರೆ ಹೊಸ ಪಕ್ಷ ಕಟ್ಟುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಸಿದ್ದಾರೆ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ 30 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೊಪ್ಪಳ (ಜು.23): ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡೋದು ಪಾರ್ಟಿಗೆ ಬಿಟ್ಟಿದ್ದು. ಆದರೆ, ವಿಜಯೇಂದ್ರನನ್ನು ಮತ್ತೆ ತೆಲೆ‌ ಮೇಲೆ ಕೂರಿಸಿಕೊಂಡರೆ ಹೊಸ ಪಕ್ಷ ಕಟ್ಟೋದು ಗ್ಯಾರಂಟಿ. ಆಗ, ಬಿಜೆಪಿ ಬದಲು ನಮ್ಮ ನಮ್ಮ ಪಕ್ಷ ಬಹುಮತ ಬರೋದು ಗ್ಯಾರಂಟಿ, ಹಾಗೆಯೇ ಕರ್ನಾಟಕ ಉದ್ಧಾರ ಆಗೋದು ಗ್ಯಾರಂಟಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮನ್ನು ಉಚ್ಛಾಟನೆ ಮಾಡಿದ ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ.

ಕೊಪ್ಪಳದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿಜಯೇಂದ್ರ ಬದಲವಾವಣೆ ಮಾಡೋದು ಆ ಪಾರ್ಟಿಗೆ ಬಿಟ್ಟದ್ದು. ನಾವು ಅಯೋಗ್ಯ, ಭ್ರಷ್ಟ ಇದ್ದಾನೆ ಎಂದು ಹೇಳಿದ್ದೇವೆ. ಅವನೇ ಬೇಕು ಅಂದರೆ ನಾವು ಏನು ಮಾಡೋಕೆ ಆಗುತ್ತೆ? ಇಡೀ ಕರ್ನಾಟದಲ್ಲಿ ಅವನ ನಾಯಕತ್ವ ಯಾರೂ ಒಪ್ಪಿಕೊಳ್ಳಿತ್ತಿಲ್ಲ. ಇಡೀ ದೇಶದಲ್ಲಿ ಎಲ್ಲ ಕಡೆ ಚುನಾವಣೆ ಆಗಿವೆ. ದಕ್ಷಿಣ ಭಾರತದಲ್ಲಿ ನೆಲೆ ಇರುವ ರಾಜ್ಯ ಕರ್ನಾಟಕ. ಇಲ್ಲಿ ರಾಜ್ಯಾಧ್ಯಕ್ಷನನ್ನು ಆಯ್ಕೆ ಮಾಡಲು ಗೊಂದಲ ಯಾಕೆ? ಎಲ್ಲರೂ ವಿಜಯೇಂದ್ರ ನನ್ನು ಬೇಡ ಎನ್ನುತ್ತಿದ್ದಾರೆ ಎಂದು ಆರೋಪ ಮಾಡಿದರು.

ವಿಜಯೇಂದ್ರನ ನೇತೃತ್ವದಲ್ಲಿ ಬಿಜೆಪಿ ಚುನಾವಣೆಗೆ ಹೋದರೆ 30 ಸೀಟ್ ಕೂಡ ಬರೋದಿಲ್ಲ. ಅವನ ತಂದೆಗೆ ಮಗ ಎಂತವನಿದ್ದರೂ ಪ್ರೀತಿ ಇರುತ್ತದೆ. ರಾಜ್ಯದ ಜನ ತಿರಸ್ಕಾರ ಮಾಡಿದ್ದಾರೆ. ಮೋದಿ ಅವರೇ ವಂಶ ಪಾರಂಪರ್ಯ, ಭ್ರಷ್ಟಾಚಾರ ನಡೆಯೋದಿಲ್ಲ ಎಂದು ಹೇಳಿದ್ದಾರೆ. ಆ ಪ್ರಕಾರ ನಡೆದುಕೊಳ್ಳಬೇಕು ಎಂದು ಹೇಳುತ್ತೇವೆ. ಇಲ್ಲವೆಂದರೆ ಪಕ್ಷದಲ್ಲಿ ಎಲ್ಲವೂ ನಡೆಯುತ್ತದೆ ಎಂದು ಡಿಕ್ಲೇರ್ ಮಾಡಲಿ. ಎಲ್ಲ ಬಿಜೆಪಿ ಟಿಕೆಟ್‌ಗಳು ಶಾಸಕರು, ಸಚಿವರು, ಸಂಸದರ ಮಕ್ಕಳಿಗೆ ಕೋಡುತ್ತೇವೆ ಎಂದು ಡಿಕ್ಲೇರ್ ಮಾಡಲಿ ಎಂದು ಬಿಜೆಪಿ ಹೈಕಮಾಂಡ್‌ಗೆ ಸವಾಲು ಹಾಕಿದರು.

ಒಡೆದ ಮನಸ್ಸುಗಳು ಒಂದಾಗಬೇಕೆಂದು ಶ್ರೀರಾಮುಲು ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಒಡೆದ ಮನಸ್ಸುಗಳು ಒಂದಾಗಬೇಕೆಂದರೆ ಒಳ್ಳೇಯ ನಾಯಕತ್ವ ಬಂದರೆ ಒಂದಾಗುತ್ತೇವೆ. ಅವನನ್ನು ಬಿಟ್ಟು ಯಾರಾದರೂ ಆಗಲಿ, ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ. ನಾವೆಲ್ಲ ಒಂದೇ ಇದ್ದೇವೆ, ಮಾತನಾಡುತ್ತಾ ಇದ್ದೇವೆ. ನಮ್ಮಲ್ಲಿ ತೀವ್ರ ಭಿನ್ನಮತ ಇಲ್ಲ. ಗೋಕಾಕ್‌ಗೆ ಹೋಗಿದ್ದೇವು, ಅಲ್ಲಿಗೆ ಎಲ್ಲರೂ ಬಂದಿದ್ದರು. ನಾವು ಪಕ್ಷದ ಹಿತದೃಷ್ಟಿಯಿಂದ ವಿಚಾರ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಒಬ್ಬ ಪ್ರಾಮಾಣಿಕ ನಾಯಕತ್ವ ಬೇಕಾಗಿದೆ. ಭಂಡಾಚಾರದ ನಾಯಕತ್ವ ಬೇಕಾಗಿಲ್ಲ. ನಾನು ರೈತನ ಮಗ ಎನ್ನುತ್ತಾರೆ. ನಾವು ಎಮ್ಮಿಯ ಮಕ್ಕಳಾ? ನಾವು ಕೂಡ ರೈತನ ಮಕ್ಕಳು. ಹೊಲದಲ್ಲಿ ಗಳೆ ಒಡೆದವರಲ್ಲ ರೈತನ ಮಕ್ಕಳು ಅಂತಾರೆ. ನನ್ನ ಕೈಯಲ್ಲಿ ಅಧಿಕಾರ ಕೊಡಲಿ, ಇವ ಏನು ಮಾಡಿದ್ದಾನೆ ಇವರಪ್ಪನಂಗೆ ಮಾಡುತ್ತೇನೆ ಎಂದು ಹೇಳಿದರು.

ವಿಜಯೇಂದ್ರ ರಾಜ್ಯಾಧ್ಯಕ್ಷನಾಗಿ ಮುಂದುವರೆಯಲಿ ಎಂದು ಶ್ರೀರಾಮುಲು ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಶ್ರೀರಾಮುಲು ಹೇಳುತ್ತಲೆ ಜೈ ಎನ್ನಲು ನಮಗೇನು ಹುಚ್ಚು ಹಿಡಿದಿದೇಯಾ? ವಿಜಯೇಂದ್ರನಿಂದ ರಾಮುಲುಗೆ ಅನ್ಯಾಯ ಆಗಿದ್ದನ್ನು ನೋಡಿದರೆ ಹೊಂದಾಣಿಕೆ ಆಗಬಾರದಿತ್ತು. ಶ್ರೀರಾಮುಲು ಆರೋಗ್ಯ ಮತ್ತು ಸಾರಿಗೆ ಮಂತ್ರಿ ಆಗಿದ್ದಾಗ ವಿಜಯೇಂದ್ರ ಅವರ ಪಿಎಗಳ ಮೇಲೆ ದೂರು ನೀಡಿದ್ದರು. ರಾಮುಲು ಅವರ ಭವಿಷ್ಯ ಹಾಳು ಮಾಡಿದ ವ್ಯಕ್ತಿ ವಿಜಯೇಂದ್ರ. ಮತ್ತೇ ಆತನಿಗೆ ಜೈ ಅಂತಾರೆ ಎಂದರೆ ವಿಷಾಧನೀಯ ಸಂಗತಿ. ಇದೀಗ ಬಿಜೆಪಿ ಹೈಕಮಾಂಡ್ ನಮ್ಮ ರಾಜ್ಯಕ್ಕೆ ರಾಜ್ಯಾಧ್ಯಕ್ಷರ ಆಯ್ಕೆ ಮಾಡುತ್ತಿಲ್ಲ. ಆಯ್ಕೆ ಮಾಡುವರೆಗೂ ಕಾಯುತ್ತೇನೆ. ನಾವು ಬಿಜೆಪಿಲ್ಲಿಯೇ ಇದ್ದೀವಿ. ನಾನು ಬಿಜೆಪಿ ಬಿಟ್ಟು ಹೋಗಿಲ್ಲ ಎಂದರು.

ಯಡಿಯೂರಪ್ಪನೇ 3 ಬಾರಿ ಹೊರಹಾಕಿದ್ದಾರೆ. ತನ್ನ ಭವಿಷ್ಯ, ತನ್ನ ಮಗನ ಭವಿಷ್ಯಕ್ಕಾಗಿ ನಮ್ಮನ್ನು ಹೊರಹಾಕಿದ್ದಾರೆ. ಯಡಿಯೂರಪ್ಪ ಸತ್ತ ಮೇಲೆ ತನ್ನ ಮಗ ಇರಬೇಕು, ಆತ ಸತ್ತ ಮೇಲೆ ಮೊಮ್ಮಗ ಇರಬೇಕು. ಉಳಿದವರು ಅವರ ಮನೆಯಲ್ಲಿ ಕಸ ಹೊಡೆಯಬೇಕು. ನಮಗೇನು ಕೆಲಸ ಇಲ್ವಾ? ಅಪ್ಪಾಜಿ ಎನ್ನುವ ಕೆಲವು ಅಯೋಗ್ಯರು ರಾಜಕಾರಣದಲ್ಲಿ ಇದ್ದಾರೆ. ಬಿಜೆಪಿ ಹಾಳು ಮಾಡಿದವರು, ಈ ಅಪ್ಪಾಜಿ ಕಂಪನಿಯವರು ಎಂದು ಟೀಕೆ ಮಾಡಿದರು.