ಕೂಡಲಸಂಗಮ ಸ್ವಾಮೀಜಿಗೆ ವಿಷಪ್ರಾಷಣದ ಶಂಕೆ ವ್ಯಕ್ತಪಡಿಸಿದ್ದ ಅರವಿಂದ್ ಬೆಲ್ಲದ್ ವಿರುದ್ಧ ವಿಜಯಾನಂದ ಕಾಶಪ್ಪನವರು ವಾಗ್ದಾಳಿ ನಡೆಸಿದ್ದಾರೆ. ಬೆಲ್ಲದ್ ಡಿಎನ್‌ಎ ಪರೀಕ್ಷೆ ಮಾಡಿಸಲಿ ಎಂದು ಸವಾಲು ಹಾಕಿದ್ದಾರೆ. ಇದೊಂದು ರಾಜಕೀಯ ಒತ್ತಡದ ವಿವಾದ ಎಂದು ಕಾಶಪ್ಪನವರು ಆರೋಪಿಸಿದ್ದಾರೆ.

ದಾವಣಗೆರೆ (ಜು.21): ಕೂಡಲಸಂಗಮ ಸ್ವಾಮೀಜಿಗೆ ವಿಷಪ್ರಾಷನ ಶಂಕೆ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಅರವಿಂದ ಬೆಲ್ಲದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ವಿಜಯಾನಂದ ಕಾಶಪ್ಪನವರು, ಈ ಆರೋಪಗಳನ್ನು 'ಡ್ರಾಮಾ' ಎಂದು ಕರೆದಿದ್ದಾರೆ.

ಇಂದು ದಾವಣಗೆರೆಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿದ ಕಾಶಪ್ಪನವರು, 'ಅರವಿಂದ ಬೆಲ್ಲದ ಲಿಂಗಾಯತನೇ ಆಗಿದ್ದರೆ ಡಿಎನ್‌ಎ ಟೆಸ್ಟ್ ಮಾಡಿಸಲಿ. ಸುಮ್ಮನೆ ಗೂಬೆ ಕೂರಿಸೋದಲ್ಲ. ಯತ್ನಾಳನಂತಹ ಲೋಫರ್‌ಗಳು ವಿಭೂತಿ ಹಚ್ಚಿದ್ದನ್ನು ಪ್ರಶ್ನೆ ಮಾಡ್ತಾರೆ. ಇವರೆಲ್ಲಾ ಈಗ ಪಂಚಮಸಾಲಿ ಸಮಾಜದವರಂತೆ ಬಂದಿದ್ದಾರೆ' ಎಂದು ಕಿಡಿಕಾರಿದರು.

ತನು-ಮನ-ಧನದಿಂದ ಕೂಡಲಸಂಗಮ ಪೀಠಕ್ಕೆ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದ ಕಾಶೆಪ್ಪನವರ್, ಈ ಲೋಫರ್‌ಗಳು ಏನ್ ಹೇಳ್ತಾರೆ? ಬಿಜೆಪಿಯವರು ಬಿಟ್ಟು ಯಾರೂ ಅಲ್ಲಿ(ಸ್ವಾಮೀಜಿ ಬಳಿ) ಹೋಗಿಲ್ಲ. ಜೆಡಿಎಸ್ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಕೂಡ ಬಿಜೆಪಿ ಮೈತ್ರಿ ಪಕ್ಷದವರು ಎಂದರು. ಸ್ವಾಮೀಜಿಯ ಹೆಲ್ತ್‌ ರಿಪೋರ್ಟ್ ವೈದ್ಯರೊಂದಿಗೆ ಮಾತನಾಡಿ ಪಡೆದಿದ್ದೇನೆ. ಇವರ ಸುಳ್ಳು ಆರೋಪಗಳಿಗೆ ನಾನು ಜಗ್ಗೋದಿಲ್ಲ, ಬಗ್ಗೋದಿಲ್ಲ, ಕುಗ್ಗೋದಿಲ್ಲ ಎಂದು ಏಕವಚನದಲ್ಲಿ ಅರವಿಂದ ಬೆಲ್ಲದ, ಸಿಸಿ ಪಾಟೀಲ್, ಮತ್ತು ಯತ್ನಾಳರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು.

ಅರವಿಂದ್ ಬೆಲ್ಲದ್ ವಿಪಕ್ಷ ನಾಯಕರಿದ್ದಾರೆ. ಅವರೇ ತನಿಖೆ ಮಾಡಿಸಲಿ, ಸತ್ಯ ಬಯಲಾಗಲಿ ಎಂದು ಸವಾಲು ಹಾಕಿದ ಕಾಶಪ್ಪನವರು, ಈ ವಿವಾದಕ್ಕೆ ರಾಜಕೀಯ ಒತ್ತಡವೇ ಕಾರಣ ಎಂದರು.