Karnataka Election 2023: ಬಂಗಾರಪೇಟೆ ಬಿಜೆಪಿ ಅಭ್ಯರ್ಥಿ ಮತದಾನಕ್ಕೂ ಮೊದಲೇ ನಾಪತ್ತೆ..!
ಎಂ.ನಾರಾಯಣಸ್ವಾಮಿ ದಿಢೀರನೆ ತಟಸ್ಥವಾಗಿ ಚುನಾವಣೆ ಕಣದಿಂದ ಹಿಂದೆ ಸರಿದು ಪಕ್ಷದ ಮಾನಮರ್ಯಾದೆ ಹಾಳು ಮಾಡಿದ್ದಾರೆಂದು ಆರೋಪಿಸಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಎಂ. ನಾರಾಯಣಸ್ವಾಮಿ ಭಾವಚಿತ್ರಕ್ಕೆ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದರು.
ಬಂಗಾರಪೇಟೆ(ಮೇ.11): ವಿಧಾನಸಭೆ ಚುನಾವಣೆಗೆ ವಿಳಂಬವಾಗಿ ಎಂಟ್ರಿಕೊಟ್ಟು ಚುನಾವಣೆಯ ಮತದಾನಕ್ಕೂ ಮೊದಲೇ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಕಣದಿಂದ ಹಿಂದೆ ಸರಿದು ಕ್ಷೇತ್ರದಿಂದ ನಾಪತ್ತೆಯಾಗಿರುವುದು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಿದೆ. ಸಾಮಾಜಿಕ ಜಾಲತಾಣಗಳಲಿ ಬಿಜೆಪಿ ಅಭ್ಯರ್ಥಿಯ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಅರ್ಪಿಸಿದ ಘಟನೆ ನಡೆದಿದೆ.
ಕ್ಷೇತ್ರದಲ್ಲಿ ಬಿಜೆಪಿಯಲ್ಲಿನ ಟಿಕೆಟ್ ಗೊಂದಲದಿಂದ ಅಭ್ಯರ್ಥಿಯನ್ನು ಹೈಕಮಾಂಡ್ ಘೋಷಣೆ ಮಾಡದೆ ಕೊನೆಗಳಿಗೆಯಲ್ಲಿ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಹೆಸರನ್ನು ಘೋಷಣೆ ಮಾಡಿತು. ಈ ವೇಳೆಗಾಗಲೆ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಎರಡು ಸುತ್ತಿನ ಪ್ರಚಾರ ಮಾಡಿದ್ದರು. ಚುನಾವಣೆ ಪ್ರಕ್ರಿಯೆಗೆ ವಿಳಂಬವಾಗಿ ಬಂದ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಅಷ್ಟೇ ವೇಗವಾಗಿ ಕ್ಷೇತ್ರ ಸಂಚರಿಸಿ ಬಿಜೆಪಿ ಹವಾ ನಿರ್ಮಾಣ ಮಾಡಿದ್ದರು.
ಜೆಡಿಎಸ್ ಅಧಿಕಾರಕ್ಕೆ ತರುವುದು ನನ್ನ ಕನಸು: ಎಚ್.ಡಿ.ದೇವೇಗೌಡ
ನನ್ನ ಬಳಿ ಹಣ ಇಲ್ಲ: ನಾರಾಯಣಸ್ವಾಮಿ
ಇನೇನು ಕ್ಷೇತ್ರದಲ್ಲಿ ಬಿಜೆಪಿ ಭಾವುಟ ಹಾರಿಸುವುದು ಖಚಿತವೆಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಸಂಭ್ರಮಪಡವಂತಾಗಿತ್ತು. ಹೀಗಿರುವಾಗ ಚುನಾವಣೆಗೆ ಮುನ್ನಾ ದಿನ ಮಂಗಳವಾರ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ನನ್ನ ಬಳಿ ಚುನಾವಣೆಗೆ ವೆಚ್ಚ ಮಾಡಲು ಹಣದ ಮುಗ್ಗಟ್ಟಿನ ಸಮಸ್ಯೆ ಇದೆ ಎಂದು ಹೇಳಿ ಕೈಚೆಲ್ಲಿ ಕೂತಿದ್ದರಿಂದ ಕಾರ್ಯಕರ್ತರು, ಮುಖಂಡರು ಆತಂಕ್ಕೊಳಗಾದರು. ಮಂಗಳವಾರ ತಡ ರಾತ್ರಿಯವರೆಗೂ ಸಮಾಲೋಚನೆ ಮಾಡಿದರೂ ಯಾವುದೇ ಫಲ ನೀಡಲಿಲ್ಲ. ಬಳಿಕ ಅಭ್ಯರ್ಥಿ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪಲಾಯನ ಮಾಡಿದರು.
'ದೇಶಕ್ಕೆ ಮೋದಿ, ಚಿಕ್ಕಬಳ್ಳಾಪುರಕ್ಕೆ ಸುಧಾಕರ್'
ಬದಲಾದ ಕಾರ್ಯಕರ್ತರ ನಿಷ್ಠೆ
ಅಭ್ಯರ್ಥಿಯ ವರ್ತನೆಯಿಂದ ಆವೇಶ ಭರಿತ ಮುಖಂಡರು,ಕಾರ್ಯಕರ್ತರು ಇಷ್ಟುದಿನ ಎಲ್ಲರ ದ್ವೇಷ ಕಟ್ಟಿಕೊಂಡು ಗ್ರಾಮಗಲ್ಲಿ ಪಕ್ಷ ಬೆಳೆಸಿದ್ದಕ್ಕೆ ಸರಿಯಾದ ಬಹುಮಾನ ಕೊಟ್ಟಿದ್ದಾರೆಂದು ಬೆಳಗಾಗುವಷ್ಟರಲ್ಲಿ ತಮ್ಮ ನಿಷ್ಟೆಯನ್ನು ಬಿಜೆಪಿಯಿಂದ ಜೆಡಿಎಸ್ಗೆ ಬದಲಿಸಿದರು. ವರ್ಷಾನುಗಟ್ಟಲೆ ಕಾಂಗ್ರೆಸ್ ಅನ್ನು ವಿರೋಧಿಸಿ ಬಿಜೆಪಿ ಕಟ್ಟಿದ್ದ ತಳ ಮಟ್ಟದ ಕಾರ್ಯಕರ್ತರು ರಾತ್ರೋರಾತ್ರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಏಕೈಕ ಉದ್ದೇಶದಿಂದ ಬಿಜೆಪಿ ಭಾವುಟ ಇಳಿಸಿ ಜೆಡಿಎಸ್ ಅಭ್ಯರ್ಥಿ ಬೆಂಬಲಕ್ಕೆ ನಿಂತರು. ಕೆಲ ನಿಷ್ಠಾವಂತ ಬಿಜೆಪಿ ಮುಖಂಡರು ಮನೆ ಬಿಟ್ಟು ಹೊರ ಬರಲೇ ಇಲ್ಲ. ಇನ್ನು ಕೆಲವರು ವಿಧಿಯಿಲ್ಲದೆ ನೇರವಾಗಿ ಸುಮಾರು 259 ಬೂತ್ಗಳಲ್ಲಿ ಬಿಜೆಪಿ ಟೇಬಲ್ಗಳೇ ಇರಲಿಲ್ಲ.
ನಾರಾಯಣಸ್ವಾಮಿಗೆ ಶ್ರದ್ಧಾಂಜಲಿ
ಎಂ.ನಾರಾಯಣಸ್ವಾಮಿ ದಿಢೀರನೆ ತಟಸ್ಥವಾಗಿ ಚುನಾವಣೆ ಕಣದಿಂದ ಹಿಂದೆ ಸರಿದು ಪಕ್ಷದ ಮಾನಮರ್ಯಾದೆ ಹಾಳು ಮಾಡಿದ್ದಾರೆಂದು ಆರೋಪಿಸಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಎಂ. ನಾರಾಯಣಸ್ವಾಮಿ ಭಾವಚಿತ್ರಕ್ಕೆ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ದಿಢೀರ್ ನಾಪತ್ತೆ ಯಾರಿಗೆ ವರವಾಗಲಿದೆ ಎಂಬುದನ್ನು ಅರಿಯಲು ಶನಿವಾರದವರೆಗೂ ಕಾಯಬೇಕು.