ಕೋವಿಡ್‌ ಸಂದರ್ಭದಲ್ಲಿ ಎಲ್ಲಾ ಸಮುದಾಯಗಳಿಗೂ ಅನುಕೂಲ ಮಾಡಿದವರು ಸುಧಾಕರ್‌, ವೈದ್ಯಕೀಯ ಕಾಲೇಜು ತಂದು ಜಿಲ್ಲೆಯ ಜನತೆಯ ಆರೋಗ್ಯ ಕಾಪಾಡುವ ದೂರದೃಷ್ಟಿ ಹೊಂದಿದ್ದಾರೆ ಎಂದ ಮೂರ್ತಿ

ಚಿಕ್ಕಬಳ್ಳಾಪುರ(ಮೇ.06): ಇದುವರೆಗೂ ಗುರ್ತಿಸದೇ ಇರುವ ಯಾದವ ಸಮುದಾಯವನ್ನು ಗುರ್ತಿಸುವ ಜೊತೆಗೆ ಶ್ರೀಕೃಷ್ಣ ಭವನ ನಿರ್ಮಾಣಕ್ಕಾಗಿ 16 ಗುಂಟೆ ಭೂಮಿ ಮಂಜೂರು ಮಾಡಿಸಿರುವ ಸಚಿವ ಡಾ.ಕೆ. ಸುಧಾಕರ್‌ ಅವರನ್ನು ಬೆಂಬಲಿಸಲು ಯಾದವ ಸಮುದಾಯ ತೀರ್ಮಾನಿಸಿದೆ ಎಂದು ಯಾದವ ಸಮುದಾಯದ ತಾಲೂಕು ಅಧ್ಯಕ್ಷ ಮೂರ್ತಿ ತಿಳಿಸಿದರು.

ನಗರದ ಸಚಿವ ಸುಧಾಕರ್‌ ಅವರ ಗೃಹ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿ ಎಲ್ಲಾ ಸಮುದಾಯಗಳಿಗೂ ಅನುಕೂಲ ಮಾಡಿದವರು ಸುಧಾಕರ್‌, ವೈದ್ಯಕೀಯ ಕಾಲೇಜು ತಂದು ಜಿಲ್ಲೆಯ ಜನತೆಯ ಆರೋಗ್ಯ ಕಾಪಾಡುವ ದೂರದೃಷ್ಟಿ ಹೊಂದಿದ್ದಾರೆ ಎಂದರು.

ಚಿಕ್ಕಬಳ್ಳಾಪುರದಲ್ಲಿ ಕಮಲ ಅರಳಿಸಲು ಸುಧಾಕರ್‌ ಪಣ: ಕಾಂಗ್ರೆಸ್‌, ಜೆಡಿಎಸ್‌ ಕ್ಷೇತ್ರಗಳಲ್ಲಿ ಗೆಲ್ಲಲು ಬಿಜೆಪಿ ತಂತ್ರ

ನುಡಿದಂತೆ ನಡೆದ ಸುಧಾಕರ್‌

ನುಡಿದಂತೆ ನಡೆದ ಏಕೈಕ ವ್ಯಕ್ತಿ ಸುಧಾಕರ್‌. ಕಳೆದ 75 ವರ್ಷದಿಂದ ಯಾದವ ಸಮುದಾಯಕ್ಕೆ ಯಾರೂ ಜಮೀನು ನೀಡಿದ ಉದಾಹರಣೆ ಇಲ್ಲ. ಆದರೆ ನಾವು ಜಮೀನು ನೀಡುವಂತೆ ಮನವಿ ಮಾಡಿದ ಕಾರಣ, ಶ್ರೀಕೃಷ್ಣ ಜನ್ಮಾಷ್ಟಮಿಗೆ ಭೂಮಿ ನೀಡುವುದಾಗಿ ಭರವಸೆ ನೀಡಿದ್ದರು, ಕೊಟ್ಟಮಾತಿನಂತೆ ನಗರ ಹೊರವಲಯದ ಚಿತ್ರಾವತಿ ಸಮೀಪ 16 ಗುಂಟೆ ಜಮೀನು ಮಂಜೂರು ಮಾಡಿದ್ದಾರೆ ಎಂದು ಹೇಳಿದರು.

ಯಾದವ ಸಮುದಾಯದ ಮುಖಂಡ ಮುರಳಿ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ಸುಂಕ ಕಟ್ಟದಂತೆ ಕಳೆದ 9 ವರ್ಷದಿಂದ ಅವರೇ ಸುಂಕ ಪಾವತಿಸುತ್ತಿದ್ದಾರೆ. ಅಲ್ಲದೆ ಯಾದವ ಸಮುದಾಯದ ವ್ಯಕ್ತಿಗೆ ನಗರದ 12ನೇ ವಾರ್ಡಿನಿಂದ ಬಿಜೆಪಿ ಟಿಕೆಟ್‌ ನೀಡಿ ನಗರಸಭೆಗೆ ಸ್ಪ​ರ್ಧಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಯವರವಂತೆ ಚಿಕ್ಕಬಳ್ಳಾಪುರಕ್ಕೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಮಾಜಿ ಸದಸ್ಯ ಬನ್ನಿಕುಪ್ಪೆ ಶ್ರೀನಿವಾಸ್‌, ಮಂಜುನಾಥ್‌, ಪ್ರಕಾಶ್‌ ಯಾದವ್‌, ಮುರಳಿ ಯಾದವ್‌, ಸುರೇಶ್‌ ಯಾದವ್‌, ಭರತ್‌, ರಮೇಶ್‌, ಗೋವಿಂದ,ಬಿಜೆಪಿಯ ಅನುಆನಂದ್‌, ಕೃಷ್ಣಾರೆಡ್ಡಿ, ದೇವಸ್ಥಾನದ ಹೊಸಳ್ಳಿ ರಾಮಣ್ಣ ಸೇರಿದಂತೆ ಮತ್ತಿತರರು ಇದ್ದರು.