Asianet Suvarna News Asianet Suvarna News

ಆಟೋ ನಿಲ್ದಾಣ ನಿರ್ಮಾಣ ವಿವಾದ : ಬಿಜೆಪಿ ಬಣಗಳ ನಡುವೆ ಬಡಿದಾಟ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದಲ್ಲಿ  ತಲೆದೂರಿರುವ ಭಿನ್ನಮತ ನಿಲ್ಲುವ ಲಕ್ಷಣಗಳು ಗೋಚರವಾಗುತ್ತಿಲ್ಲ. ಬಿಜೆಪಿ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತ ಇದೀಗ ಕೈ ಕೈ   ಮಿಲಾಯಿಸುವ ಹಂತಕ್ಕೆ ಬಂದಿದೆ.

Auto station construction dispute Clash between BJP workers
Author
First Published Mar 27, 2023, 8:51 PM IST

ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ‌ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು (ಮಾ.27) : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದಲ್ಲಿ  ತಲೆದೂರಿರುವ ಭಿನ್ನಮತ ನಿಲ್ಲುವ ಲಕ್ಷಣಗಳು ಗೋಚರವಾಗುತ್ತಿಲ್ಲ. ಬಿಜೆಪಿ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತ ಇದೀಗ ಕೈ ಕೈ   ಮಿಲಾಯಿಸುವ ಹಂತಕ್ಕೆ ಬಂದಿದೆ.

ಬಿಜೆಪಿ ಪಕ್ಷದ ಎರಡು ಬಣಗಳ ನಡುವೆ ಬಡಿದಾಟ 

ಮೂಡಿಗೆರೆ(Mudigere)ಪಟ್ಟಣ ಇಂದು ದೊಡ್ಡ ವಿವಾದಕ್ಕೆ ಸಾಕ್ಷಿಯಾಯಿತು. ಪಟ್ಟಣದಲ್ಲಿ ಆಟೋ ನಿಲ್ದಾಣವೊಂದರ ನಿರ್ಮಾಣ ವಿಚಾರವಾಗಿ ಉಂಟಾಗಿದ್ದ ವಿವಾದ ಕೊನೆಗೆ ಕೈ ಕೈ ಮಿಲಾಯಿಸುವ ಹಂತಕ್ಕೆ ಮುಟ್ಟಿತು.

ಬಂಡಾಯದ ಬಿಸಿ,ಮೂರು ಪಕ್ಷಗಳಿಗೆ ತಲೆನೋವಾದ ಮೂಡಿಗೆರೆ ಕ್ಷೇತ್ರ

 

ಮೂಡಿಗೆರೆ ಪೊಲೀಸ್ ಠಾಣೆ(Mudegere police statiion) ಸಮೀಪ ಹಳೇ ತಾಲ್ಲೂಕು ಕಛೇರಿ ಎದುರು ಆಟೋ ನಿಲ್ದಾಣ ನಿರ್ಮಾಣ ವಿಚಾರವಾಗಿ ನಿನ್ನೆಯಿಂದ ಮೂಡಿಗೆರೆಯಲ್ಲಿ ವಿವಾದದ ಹೊಗೆಯಾಡುತ್ತಿತ್ತು. ಅದು ಇವತ್ತು ಸ್ಪೋಟಗೊಂಡು ಬಿಜೆಪಿ ಪಕ್ಷದ ಪಟ್ಟಣ ಪಂಚಾಯಿತಿ ಸದಸ್ಯರು, ಬಿ.ಜೆ.ಪಿ. ಕಾರ್ಯಕರ್ತರು ಪರಸ್ಪರ ತಮ್ಮಲ್ಲೇ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದರು‌.ಮೂಡಿಗೆರೆ ಪೊಲೀಸ್ ಠಾಣೆಯ ಆವರಣದಲ್ಲಿಯೇ ಬಿ.ಜೆ.ಪಿ. ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಗಲಭೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಪ್ರಾಣೇಶ್ ವರ್ಸಸ್ ಕುಮಾರಸ್ವಾಮಿ ಬಣದ ನಡುವೆ ಕಿರಿಕ್ 

ಮೂಡಿಗೆರೆ ಪಟ್ಟಣದ ಹಳೇತಾಲ್ಲೂಕು ಕಛೇರಿ ಎದುರು ಹಾಲಿ ಆಟೋ ನಿಲ್ಲಿಸುತ್ತಿರುವ ಜಾಗದಲ್ಲಿ ಆಟೋ ನಿಲ್ದಾಣ ನಿರ್ಮಿಸಲು ವಿಧಾನಪರಿಷತ್ ಸದಸ್ಯರಾದ ಎಂ.ಕೆ. ಪ್ರಾಣೇಶ್(MK Pranesh) ಅವರು 4.5 ಲಕ್ಷ ಅನುದಾನ ನೀಡಿದ್ದರು.ಇಲ್ಲಿ ಆಟೋ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ಪಟ್ಟಣ ಪಂಚಾಯಿತಿ ಬಿ.ಜೆ.ಪಿ. ಸದಸ್ಯರ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. 

ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಜಿ.ಬಿ.ಧರ್ಮಪಾಲ್ ಅವರು ಪಟ್ಟಣ ಪಂಚಾಯಿತಿಯಲ್ಲಿ ಆಟೋ ನಿಲ್ದಾಣ ನಿರ್ಮಾಣಕ್ಕೆ ನಿರ್ಣಯವಾಗಿಲ್ಲ ಎಂದು ಇಲ್ಲಿ ಆಟೋ ನಿಲ್ದಾಣ ನಿರ್ಮಾಣಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಪ.ಪಂ. ಮಾಜಿ ಅಧ್ಯಕ್ಷರಾದ ಪಿ.ಜಿ.ಅನುಕುಮಾರ್ ಅವರು ಆಟೋ ನಿಲ್ದಾಣ ನಿರ್ಮಾಣಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. 

ನಿನ್ನೆಯಿಂದ ನಡೆಯುತ್ತಿದ್ದ ಈ ವಿವಾದ ಇಂದು ತಾರಕ್ಕಕ್ಕೇರಿ ಪರಸ್ಪರ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಇಂದು JCB ಯಂತ್ರವನ್ನು ತಂದು ಶೆಡ್ ತೆರವುಗೊಳಿಸಲು ಮುಂದಾದಾಗ ಎರಡು ಬಣಗಳ ನಡುವೆ ಗಲಾಟೆ ಪ್ರಾರಂಭವಾಗಿ ಕೈ.ಕೈ. ಮಿಲಾಯಿಸುವ ಹಂತಕ್ಕೆ ತಲುಪಿದರು.ಕಳೆದ ಕೆಲವು ದಿನಗಳಿಂದ ಮೂಡಿಗೆರೆಯಲ್ಲಿ ಬಿ.ಜೆ.ಪಿ. ಪಕ್ಷದೊಳಗೆ ಬಣ ರಾಜಕೀಯ ಸ್ಪೋಟಗೊಂಡಿದ್ದು ಅದರ ಮುಂದುವರಿದ ಭಾಗವಾಗಿ ಇವತ್ತು ಎರಡು ಬಣಗಳ ಕಾರ್ಯಕರ್ತರು ಪರಸ್ಪರ ಬಡಿದಾಡಿಕೊಳ್ಳುವ ಹಂತಕ್ಕೆ ತಲುಪಿದೆ.

ಮೂಡಿಗೆರೆ ಶಾಸಕ ಕುಮಾರಸ್ವಾಮಿ ಎಡವಟ್ಟು, ಒಂದೇ ಊರಿಗೆ ಎರಡೆರಡು ಸೇತುವೆ ಭಾಗ್ಯ!

ಎರಡು ಬಣಗಳ ನಡುವೆ ನಡೆಯುತ್ತಿರುವ ಕಲಹ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇಂದು ನಡೆದ ಬಿಜೆಪಿ‌ ಪಕ್ಷದ ಒಳಗಿನ ಗಲಾಟೆ ನೆಗೆಪಾಟಲಿಗೂ ಕಾರಣವಾಗಿದೆ.ಪೊಲೀಸ್ ಠಾಣೆಯ ಆವರಣದಲ್ಲಿಯೇ ನಡೆದಿರುವ ಗಲಾಟೆಯಿಂದ ಮೂಡಿಗೆರೆ ಪಟ್ಟಣದಲ್ಲಿ ಬಿಗುವಿನ ವಾತಾವರಣ ಸೃಷ್ಟಿಆಗಿತ್ತು.ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

Follow Us:
Download App:
  • android
  • ios