ರಾಮನಗರಕ್ಕೆ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಿ ಫಿಕ್ಸ್, ತಾಯಿಯಿಂದಲೇ ಪಟ್ಟಾಭೀಷೇಕ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಮನಗರಕ್ಕೆ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಿರುವುದು ಪಕ್ಕಾ ಆಗಿದೆ. ತಾಯಿ ಅನಿತಾ ಕುಮಾರಸ್ವಾಮಿ ಅವರೇ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ರಾಮನಗರ (ಡಿ.17): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಮನಗರಕ್ಕೆ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಿರುವುದು ಪಕ್ಕಾ ಆಗಿದೆ. ತಾಯಿ ಅನಿತಾ ಕುಮಾರಸ್ವಾಮಿ ಅವರೇ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ನಗರದ ಹಳೆ ಬಸ್ ನಿಲ್ದಾಣದ ಸಭೆಯಲ್ಲಿ ಅನಿತಾ ಕುಮಾರಸ್ವಾಮಿ ಘೋಷಣೆ ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ನೀವೆಲ್ಲಾ ಸೇರಿ ಅವರಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ನಿಖಿಲ್ ಸ್ಪರ್ಧೆ ಬಗ್ಗೆ ಸಾಕಷ್ಟು ಗೊಂದಲ ಇತ್ತು. ಈ ಎಲ್ಲಾ ಗೊಂದಲಕ್ಕೆ ಕೊನೆಗೂ ತಾಯಿ ಅನಿತಾ ಕುಮಾರಸ್ವಾಮಿ ತೆರೆ ಎಳೆದಿದ್ದಾರೆ. ನಿಖಿಲ್ ಕ್ಯಾಂಡಿಡೇಟ್ ಅನ್ನುತ್ತಿದ್ದಂತೆ ಕಾರ್ಯಕರ್ತರಲ್ಲಿ ಹರ್ಷೋದ್ಘಾರ ಮುಗಿಲುಮುಟ್ಟಿದೆ. ನನ್ನ ಬಗ್ಗೆ ಕೆಲವು ಅಪಪ್ರಚಾರಗಳನ್ನು ಮಾಡುತ್ತಿದ್ದರು. ಹಾಗಾಗಿ ಇವತ್ತೇ ಫೈನಲ್ ಮಾಡಬೇಕೆಂದು ಇಲ್ಲಿ ಬಂದು ಹೇಳಿದ್ದೇನೆ. ನಾನು ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ. ನಾನು ದೇವರ ಮುಂದೆ ನಿಂತಾಗ ಕೂಡ ನನ್ನ ಗಂಡ ನನ್ನ ಮಗನಿಗೆ ಒಳ್ಳೇದಾಗ್ಲಿ ಅಂತಾನೆ ಕೇಳೋದು ಎಂದು ಇದೇ ವೇಳೆ ಅನಿತಾ ಕುಮಾರಸ್ವಾಮಿ ಭಾವುಕರಾಗಿ ಕಣ್ಣೀರು ಇಟ್ಟರು.
ಎಚ್ಡಿಕೆ ಮೇಲಿನ ವಿಶ್ವಾಸಕ್ಕೆ ರಥಯಾತ್ರೆಯೇ ಸಾಕ್ಷಿ: ನಿಖಿಲ್ ಕುಮಾರಸ್ವಾಮಿ
ಮಾಜಿ ಸಿಎಂ ಹೆಚ್ ಡಿಕೆ ಹೇಳಿಕೆ: ನಾನು ಈ ಮೊದಲೇ ಹೇಳಿದಂತೆ ನಿಖಿಲ್ ಸ್ಪರ್ಧೆ ಮಾಡಿಸಲು ಇಷ್ಟ ಇರಲಿಲ್ಲ. ಕಳೆದ ಬಾರಿ ಮಂಡ್ಯದಿಂದ ಸ್ಪರ್ಧೆ ಮಾಡಬೇಕಾದರೆ ನಾನು ಹೇಳಿದ್ದೆ. ಮಂಡ್ಯದಲ್ಲಿ ಕೆಲವು ಕುತಂತ್ರಗಳಿಂದ ಸೋಲಿಸಲಾಯಿತು. ರೈತ ಸಂಘ, ಕೆಲವು ಸಂಘಟನೆಗಳು, ಸ್ಥಳೀಯರ ಕುತಂತ್ರದಿಂದ ಸೋಲಿಸಲಾಯಿತು. ನಿಖಿಲ್ ಎಲ್ಲಿ ಸ್ಪರ್ಧೆ ಮಾಡಬೇಕೆಂದು ಕಾರ್ಯಕರ್ತರಿಗೆ ಬಿಟ್ಟಿದ್ದೆ. ನಿಮ್ಮನ್ನ ನಂಬಿ ನಾನು ನಿಖಿಲ್ ನನ್ನು ಸ್ಪರ್ಧೆ ಮಾಡಿಸುತ್ತಿದ್ದೇನೆ. ಮುಂದೆ ಕೂಡ ಇಲ್ಲಿ ಕೂಡ ಕುತಂತ್ರ ಮಾಡಬಹುದು. ನನಗೆ ನಂಬಿಕೆ ಇದೆ. ಬೇರೆ ಕುತಂತ್ರಕ್ಕೆ ಇಲ್ಲಿನ ಜನರು ಮನ್ನಣೆ ಹಾಕೋದಿಲ್ಲ. ನಿಖಿಲ್ ಕುಮಾರಸ್ವಾಮಿಯನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ಅವನ ಜೀವನ ರೂಪಿಸುವ ಕೆಲಸ ನಿಮ್ಮದು. ನಿಮ್ಮ ಮನೆಯ ಮಗನಾಗಿ ಅವನನ್ನು ನೀವು ಕೈ ಹಿಡಿಯಬೇಕು. ಇಷ್ಟು ವರ್ಷಗಳ ಕಾಲ ನನಗೆ ಅಭಿಮಾನ ತೋರಿಸಿದಂತೆ. ನಿಖಿಲ್ ಮೇಲೂ ಕೂಡ ನಿಮ್ಮ ಅಭಿಮಾನ ತೋರಿಸಬೇಕು. ಅವನ ದುಡಿಮೆ, ಶ್ರಮ, ನಂಬಿಕೆ ಮೇಲೆ ನೀವು ಅವನನ್ನು ಪ್ರೀತಿಸಬೇಕು. ರಾಜಕೀಯ ದಬ್ಬಾಳಿಕೆಯಿಂದ ರಾಮನಗರ ಜನರನ್ನು ಮಣಿಸಲು ಸಾಧ್ಯವಿಲ್ಲ. ಇಲ್ಲಿನ ಜನ ಪ್ರೀತಿ ವಿಶ್ವಾಸದಿಂದ ಮಾತ್ರ ಸಾಧ್ಯ. ನನಗೂ ಕೂಡ ಗೊತ್ತಿರಲಿಲ್ಲ ಅನಿತಾ ಕುಮಾರಸ್ವಾಮಿ ಈ ನಿರ್ಧಾರ ತೆಗೆದುಕೊಳ್ಳುತ್ತಾರೆ ಅಂತಾ ಎಂದು ಮಾಜಿ ಸಿಎಂ ಹೆಚ್ ಡಿಕೆ ಹೇಳಿಕೆ ನೀಡಿದ್ದಾರೆ.
Assembly election: ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕೆ? ಎಚ್ಡಿಕೆ ಸುಳಿವು
ಸುಳಿವು ಕೊಟ್ಟಿದ್ದ ಹೆಚ್ಡಿಕೆ: ಈ ಬಗ್ಗೆ ಸ್ವತಃ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸುಳಿವು ನೀಡಿದ್ದಾರೆ. ಈಗಾಗಲೇ ನಿಖಿಲ್ ಅವರು ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿದ್ದಾರೆ. ಅವರ ಹೆಸರನ್ನು ಘೋಷಣೆ ಮಾಡಲು ನನಗೆ ಯಾವುದೇ ಅಂಜಿಕೆಯಿಲ್ಲ. ನಿಖಿಲ್ನನ್ನು ದಡ ಸೇರಿಸುವುದು ಹೇಗೆ ಎಂಬ ಚಿಂತನೆಯಿಲ್ಲ. ನನಗೆ ರಾಜಕೀಯವಾಗಿ ಜನ್ಮ ಕೊಟ್ಟಿರುವ ಜನರೇ ತೀರ್ಮಾನಿಸುತ್ತಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಅರು ರಾಮನಗರದಿಂದ ನಿಖಿಲ್ ಸ್ಪರ್ಧೆಯ ಬಗ್ಗೆ ಸುಳಿವನ್ನು ಬಿಟ್ಟು ಕೊಟ್ಟಿದ್ದಾರೆ. ರಾಜ್ಯದಲ್ಲಿ ನನ್ನ ಪಕ್ಷ 123 ಕ್ಷೇತ್ರದಲ್ಲಿ ಜಯಗಳಿಸಿ ಸ್ವತಂತ್ರವಾಗಿ ಆಡಳಿತಕ್ಕೆ ಬರಬೇಕು ಎನ್ನುವುದು ನನ್ನ ಗುರಿಯಾಗಿದೆ. ನಿಖಿಲ್ ಅಭ್ಯರ್ಥಿ ಆಗುವದರ ಬಗ್ಗೆ ನಮಗೆ ಅಂಜಿಕೆಯಿಲ್ಲ. ಸೂಕ್ತ ಸಂದರ್ಭದಲ್ಲಿ ನಿಖಿಲ್ ಅವರನ್ನು ಎಂಎಲ್ಎ ಮಾಡುವುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.