Asianet Suvarna News Asianet Suvarna News

ಬೆಂಗಳೂರಿನಲ್ಲಿ ಕಾಂಗ್ರೆಸ್‌, ಬಿಜೆಪಿ, ಆಪ್‌ನಿಂದ ಒಟ್ಟು 21 ನಾಮಪತ್ರ: ಭಾರಿ ಮೆರವಣಿಗೆ

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ನಾಮಪತ್ರ ಸಲ್ಲಿಕೆಗೆ ಇನ್ನು ಎರಡು ದಿನ ಮಾತ್ರ ಬಾಕಿ ಇದ್ದು, ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದಾರೆ. 

A total of 21 nomination papers from Congress BJP and AAP in Bengaluru gvd
Author
First Published Apr 19, 2023, 6:20 AM IST | Last Updated Apr 19, 2023, 6:20 AM IST

ಬೆಂಗಳೂರು (ಏ.19): ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ನಾಮಪತ್ರ ಸಲ್ಲಿಕೆಗೆ ಇನ್ನು ಎರಡು ದಿನ ಮಾತ್ರ ಬಾಕಿ ಇದ್ದು, ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದಾರೆ. ರಾಜಧಾನಿಯಲ್ಲಿ ಮಂಗಳವಾರ ಕಾಂಗ್ರೆಸ್‌ 12, ಬಿಜೆಪಿಯ 7 ಹಾಗೂ ಆಮ್‌ ಆದ್ಮಿ ಪಾರ್ಟಿಯ ಮೂವರು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಕಾಂಗ್ರೆಸ್‌ ಪಕ್ಷದಿಂದ ಸಹಸ್ರ ಕೋಟಿ ರುಪಾಯಿ ಒಡೆಯ ಪ್ರಿಯಕೃಷ್ಣ ಗೋವಿಂದರಾಜನಗರ, ಮಾಜಿ ಸಚಿವರಾದ ಎಂ.ಕೃಷ್ಣಪ್ಪ ವಿಜಯ ನಗರ, ಸರ್ವಜ್ಞ ನಗರದಿಂದ ಕೆ.ಜೆ.ಜಾರ್ಜ್‌ ಮತ್ತು ಅವರ ಪುತ್ರ ರಾಣಾ ಜಾರ್ಜ್‌, ಬ್ಯಾಟರಾಯನಪುರ ಕೃಷ್ಣ ಬೈರೇಗೌಡ, ಬಿಟಿಎಂ ಲೇಔಟ್‌ ರಾಮಲಿಂಗಾರೆಡ್ಡಿ, ಚಾಮರಾಜಪೇಟೆಯಿಂದ ಜಮೀರ್‌ ಅಹಮದ್‌ಖಾನ್‌, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆರ್‌.ವಿ.ದೇವರಾಜ್‌, ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಕೆ.ರಮೇಶ್‌, ಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಉಮಾಪತಿ ಶ್ರೀನಿವಾಸ ಗೌಡ, ಮಲ್ಲೇಶ್ವರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅನೂಪ್‌ ಅಯ್ಯಂಗಾರ್‌ ಮಂಗಳವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ರಾಹುಲ್‌ ಗಾಂಧಿ ಸಭೆಗೆ ಗೈರಾಗಿದ್ದಕ್ಕೆ ವಿಶೇಷ ಅರ್ಥ ಬೇಡ: ಡಾ.ಜಿ.ಪರಮೇಶ್ವರ್‌

ಕಾಂಗ್ರೆಸ್‌ ಹೆಸರಿನಲ್ಲಿ ನಾಮಪತ್ರ ಸಲ್ಲಿಕೆ ಮಾಡಿರುವ ಹನ್ನೆರಡು ಮಂದಿ ಪೈಕಿ 11 ಮಂದಿ ಪಕ್ಷದ ಅಧಿಕೃತ ಬಿ-ಫಾರಂ ಸಲ್ಲಿಕೆ ಮಾಡಿದ್ದಾರೆ. ಇನ್ನು ಕೆ.ಜೆ.ಜಾರ್ಜ್‌ ಪುತ್ರ ರಾಣಾ ಜಾಜ್‌ರ್‍ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರೂ, ಬಿ-ಫಾರಂ ಸಲ್ಲಿಸಿಲ್ಲ. ಹೀಗಾಗಿ ಪಕ್ಷದ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿದರೂ ಅಧಿಕೃತ ಅಭ್ಯರ್ಥಿ ಎಂದು ಹೇಳಲಾಗದು ಎಂದು ತಿಳಿದುಬಂದಿದೆ. ಆಮ್‌ ಆದ್ಮಿ ಪಾರ್ಟಿಯಿಂದ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅಶೋಕ್‌ ಮೃತ್ಯುಂಜಯ, ಯಶವಂತಪುರ ಕ್ಷೇತ್ರಕ್ಕೆ ಶಶಿಧರ್‌ ಸಿ.ಆರಾಧ್ಯ, ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಸೀತಾರಾಮ್‌ ಗುಂಡಪ್ಪ ಉಮೇದುವಾರಿಕೆ ಸಲ್ಲಿಸಿದರು.

ಗಾಂಧಿನಗರ ಕ್ಷೇತ್ರ: ಎ.ಆರ್‌.ಸಪ್ತಗಿರಿಗೌಡ ಅವರು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಗಾಂಧಿನಗರದಲ್ಲಿ ಬಹತ್‌ ಮೆರವಣಿಗೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಬಿಜೆಪಿ ಪರ ಘೋಷಣೆ ಕೂಗಿದರು. ಬಳಿಕ ಸಪ್ತಗಿರಿಗೌಡ ನಾಮಪತ್ರ ಸಲ್ಲಿಕೆ ವೇಳೆ ಸಚಿವ ಮುನಿರತ್ನ, ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಹಾಗೂ ಪಕ್ಷದ ಮುಖಂಡರು ಸಾಥ್‌ ನೀಡಿದರು.

ವಿಜಯನಗರ ಕ್ಷೇತ್ರ: ಎಚ್‌.ರವೀಂದ್ರ ಅವರು ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ಇದಕ್ಕೂ ಮುನ್ನ ಕ್ಷೇತ್ರದ ವಿವಿಧ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಭಾರೀ ಸಂಖ್ಯೆಯ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಹಂಪಿನಗರದ ಚುನಾವಣಾಧಿಕಾರಿ ಕಚೇರಿಗೆ ವರೆಗೆ ಸಾಗಿ ಬಳಿಕ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ತುಮಕೂರು ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ.ಅರುಣ್‌ ಸೋಮಣ್ಣ ಸಾಥ್‌ ನೀಡಿದರು.

ರಾಜಾಜಿನಗರ ಕ್ಷೇತ್ರ: ಶಾಸಕ ಎಸ್‌.ಸುರೇಶ್‌ ಕುಮಾರ್‌ ಅವರು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ಇದಕ್ಕೂ ಮುನ್ನ ರಾಜಾಜಿನಗರದ ರಾಮಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಪಾರ ಸಂಖ್ಯೆಯ ಕಾರ್ಯಕರ್ತರು ಹಾಗೂ ಮುಖಡರೊಂದಿಗೆ ರಾಮಮಂದಿರದಿಂದ ಆರ್‌ಟಿಒ ಕಚೇರಿ ವರೆಗೆ ಪಾದಯಾತ್ರೆ ನಡೆಸಿ ನಂತರ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಜಯನಗರ ಕ್ಷೇತ್ರ: ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಅವರು ಮಂಗಳವಾರ ಉಮೇದುವಾರಿಕೆ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಗೆಲುವಿಗೆ ಪ್ರಾರ್ಥಿಸಿದರು. ಬಳಿಕ ಜಯನಗರದ ಬಿಡಿಎ ಕಾಂಪ್ಲೆP್ಸ… ನಲ್ಲಿರುವ ಬಿಬಿಎಂಪಿ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಲಿಸಿದರು. ಈ ವೇಳೆ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿಸೂರ್ಯ, ಪಕ್ಷದ ಮುಖಂಡರು, ಕಾರ್ಯಕರ್ತರು ಸಾಥ್‌ ನೀಡಿದರು.

ಮಹದೇವಪುರ ಕ್ಷೇತ್ರ: ಮಹದೇವಪುರ ವಿಧಾನ ಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಶಾಸಕ ಅರವಿಂದ ಲಿಂಬಾವಳಿ ಅವರ ಧರ್ಮಪತ್ನಿ ಮಂಜುಳಾ ಲಿಂಬಾವಳಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ತಮ್ಮ ಬೆಂಬಲಿಗರು ಹಾಗೂ ಮುಖಂಡರೊಂದಿಗೆ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕೆ.ಆರ್‍.ಪುರದ ದೂರವಾಣಿನಗರದ ಐಟಿ ಗೇಚ್‌ ವರೆಗೆ ಮೆರವಣಿಗೆಯಲ್ಲಿ ಸಾಗಿ ಉಮೇದುವಾರಿಕೆ ಸಲ್ಲಿಸಿದರು. ಇದಕ್ಕೂ ಮುನ್ನ ಮಂಜುಳಾ ಅರವಿಂದ ಲಿಂಬಾವಳಿ ದಂಪತಿ ಬೆಳಗ್ಗೆ ಟೆಂಪಲ್‌ ರನ್‌ ನಡೆಸಿದರು. ಕಾಡುಗೋಡಿ ಸುಬ್ರಹ್ಮಣ್ಯ ದೇವಸ್ಥಾನ, ಬೆಳ್ತೂರು ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಸಚಿವ ಅಶೋಕ್‌ ವಿರುದ್ಧ ಕಾಂಗ್ರೆಸ್‌ನಿಂದ ಪ್ರತಿಸ್ಪರ್ಧಿ ಯಾರು?: ಕುತೂಹಲ

ಈ ವೇಳೆ ಮಾತನಾಡಿದ, ಶಾಸಕ ಅರವಿಂದ ಲಿಂಬಾವಳಿ, ನಾನು ಕಳೆದ 19 ವರ್ಷದಿಂದ ಬಿಜೆಪಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ. 4 ವರ್ಷ ವಿಧಾನ ಪರಿಷತ್ ಸದಸ್ಯನಾಗಿ 15 ವರ್ಷ ವಿಧಾನಸಭೆ ಸದಸ್ಯ ಹಾಗೂ ಮಂತ್ರಿಯಾಗಿಯೂ ಕಾರ್ಯನಿರ್ವಹಿಸಲು ಪಕ್ಷ ಅವಕಾಶ ಕೊಟ್ಟಿದೆ. ಬೃಹತ್‌ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಈ ಕ್ಷೇತ್ರದಲ್ಲಿ ಒಬ್ಬ ಮಹಿಳೆ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ನಾಯಕರು ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಸೂಚಿಸಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.

ಕೆ.ಆರ್‌.ಪುರ ಕ್ಷೇತ್ರ: ಕೆ.ಆರ್‌.ಪುರಂ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಬೈರತಿ ಬಸವರಾಜು ಮಂಗಳವಾರ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಸಚಿವ ಬೈರತಿ ಬಸವರಾಜ್‌ ಅವರು ತೆರೆದ ವಾಹನದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಐಟಿಐ ಗೇಟ್‌ನಿಂದ ಬಿಬಿಎಂಪಿ ಕಚೇರಿ ತನಕ ರಾರ‍ಯಲಿ ಮಾಡಿದರು. ಇದರಿಂದ ಹೊಸಕೋಟೆಗೆ ಹೋಗುವ ಮುಖ್ಯ ರಸ್ತೆ ಎರಡೂ ಭಾಗಗಳಲ್ಲಿ ಜನ ಜಮಾಯಿದ್ದರು. ಹೀಗಾಗಿ ರಸ್ತೆ ಸಂಪೂರ್ಣ ಜಾಮ್‌ ಆಗಿ ಸವಾರರು ಪರದಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios