ಕಲ್ಯಾಣ ಕರ್ನಾಟಕದಲ್ಲಿ 'ಕೈ' ಬಲಪಡಿಸಲು ಖರ್ಗೆ ಟಾಸ್ಕ್!
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಬಿಸಿ ಜೋರಾಗಿದೆ. ಬಹುಮತ ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ದೊಡ್ಡ ಮಟ್ಟದ ಲೆಕ್ಕಾಚಾರದಲ್ಲಿದೆ. ಇದರ ನಡುವೆ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಹೆಚ್ಚಿನ ಸ್ಥಾನವನ್ನು ಗಳಿಸುವ ನಿಟ್ಟಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖಂಡರಿಗೆ ಟಾಸ್ಕ್ ನೀಡಿದ್ದಾರೆ.
ಬೆಂಗಳೂರು (ಜ.11): ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಬಗ್ಗೆ ಕಾಂಗ್ರೆಸ್ ದೊಡ್ಡ ಮಟ್ಟದ ಲೆಕ್ಕಾಚಾರದಲ್ಲಿದೆ. ಬೇರೆ ಎಲ್ಲಾ ರಾಜ್ಯಗಳಿಗೆ ಹೋಲಿಸಿದರೆ, ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಸ್ವಲ್ಪ ಮಟ್ಟಿಗಿನ ಶ್ರಮ ವಹಿಸಿದಲ್ಲಿ ಬಹುಮತದ ಸ್ಥಾನಗಳನ್ನು ಗೆಲ್ಲಲು ಯಾವುದೇ ಸಮಸ್ಯೆ ಆಗಲಾರದು. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಕೂಡ ಲೆಕ್ಕಾಚಾರ ಹಾಕುತ್ತಿದೆ. ಹಾಗಾಗಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನ ಗಳಿಸಲು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪಕ್ಷದ ಮುಖಂಡರಿಗೆ ಟಾಸ್ಕ್ ನೀಡಿದ್ದಾರೆ ಎನ್ನಲಾಗಿದೆ. ಪಕ್ಷ ಅಧಿಕಾರಕ್ಕೆ ಬರಲು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಶಾಸಕರು ಇರಬೇಕು ಎನ್ನುವ ಅಂದಾಜು ಅವರಲ್ಲಿದೆ. ಗೆಲ್ಲೋದೊಂದೆ ಮಾನದಂಡ ಎನ್ನುವ ಸೂತ್ರದಡಿಯಲ್ಲಿ ಖರ್ಗೆಯಿಂದ ಖಡಕ್ ಸೂಚನೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ರವಾನೆಯಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಈಗಿರುವ ಶಾಸಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗಬೇಕು. ಹಾಲಿ 21 ಶಾಸಕರ ಜೊತೆಗೆ 9ಕ್ಕೂ ಹೆಚ್ಚು ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆಲ್ಲಬೇಕು. ಕಲ್ಯಾಣ ಕರ್ನಾಟಕದ 42 ಕ್ಷೇತ್ರಗಳ ಪೈಕಿ ಹೆಚ್ಚು ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ಬರಬೇಕು ಎಂದು ಮಲ್ಲಿಕಾರ್ಜುನ್ ಖರ್ಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಸೋತ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಹುಡುಕಿ ಪಕ್ಷಕ್ಕೆ ಕರೆ ತರಲು ಕೂಡ ಸೂಚನೆ ನೀಡಿದ್ದಾರೆ. ಸಾಮಾಜಿಕ ನ್ಯಾಯದ ಪಾಲನೆ ಕಷ್ಟವಾದರೂ ಗೆಲ್ಲೋದೊಂದೆ ಮಾನದಂಡ ಆಗಲಿ ಎಂದು ಹೇಳಿದ್ದಾರೆ. ಮೇಲ್ಜಾತಿಯ ಅಭ್ಯರ್ಥಿಗಳನ್ನು ಸೆಳೆಯುವ ತಂತ್ರಕ್ಕೂ ಮಲ್ಲಿಕಾರ್ಜುನ್ ಖರ್ಗೆ ಗ್ರೀನ್ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಒಂದಕ್ಕಿಂತ ಹೆಚ್ಚು ಕ್ಷೇತ್ರದ ಮೇಲೆ ಪರಿಣಾಮ ಬೀರುವ ಸಮುದಾಯದ ನಾಯಕನಿಗೆ ಮಣೆ ಹಾಕುವ ಸಾಧ್ಯತೆ ಇದೆ. ದಲಿತ, ಲಿಂಗಾಯತ, ಭೋವಿ, ಲಂಬಾಣಿ, ಗಂಗಾಮತಸ್ಥ, ಈಡಿಗ ಸಮುದಾಯದ ನಾಯಕರ ಸೆಳೆಯಲು ಒಪ್ಪಿಗೆ ನೀಡಿದ್ದಾರೆ. ರಾಯಚೂರು, ಕೊಪ್ಪಳ, ಯಾದಗಿರಿ ನಾಯಕರಿಗೆ ಪ್ರತ್ಯೇಕವಾಗಿ ಈ ಸೂಚನೆಯನ್ನು ಮಲ್ಲಿಕಾರ್ಜುನ ಖರ್ಗೆ ನೀಡಿದ್ದಾರೆ.
ನಿಮ್ಮ ಮನೆಯ ನಾಯಿಯಾದ್ರೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ಯಾ ಎಂದ ಖರ್ಗೆ: ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ
371ಜೆ ಅನ್ವಯ ನೇಮಕಾತಿ ಯಲ್ಲಿ ಅನ್ಯಾಯ ಆಗುತ್ತಿರುವ ವಿಚಾರವನ್ನು ಕೈಗೆತ್ತಿಕೊಳ್ಳಲು ಸೂಚನೆ ನೀಡಲಾಗಿದೆ. ನೇಮಕಾತಿ ವೇಳೆ ಲೋಪ ಆಗಿರುವ ಕುರಿತು ಯುವಕರಿಗೆ ಮಾಹಿತಿ ನೀಡಲು ನಿರ್ದೇಶನ ನೀಡಲಾಗಿದೆ. ಗುಂಪು ಸಭೆಗಳ ಮೂಲಕ ಯುವಕರಿಗೆ ಸತ್ಯ ಸಂಗತಿ ವಿವರಿಸಲು ಸೂಚಿಸಿದ್ದಾರೆ.
ನನ್ನ ಮೋದಿ ಶೂರ್ಪನಖಿ ಎಂದಿದ್ದರು... ಮೋದಿ, ರೇಣುಕಾ ಹಳೆ ವಿಡಿಯೋ ವೈರಲ್
ದೊಡ್ಡ ಸಮಾವೇಶ/ ಸಭೆ ಬದಲು ನೇರ ಸಂಪರ್ಕ ಮಾಡಲು ಕಾರ್ಯಕರ್ತರು ಮುಂದಾಗಬೇಕು. ಬಿಸಿಲಿನ ಕಾರಣಕ್ಕಾಗಿ ಸಮಾವೇಶ ನಡೆಸಲು ಅಡ್ಡಿಯಾಗುವ ಆತಂಕವಿದೆ.. ಗುಂಪು ಸಭೆ ಮತ್ತು ಸಣ್ಣ ಹಾಲ್ ಗಳಲ್ಲಿ ಜನರ ಸಂಪರ್ಕ ಮಾಡಲು ಆದ್ಯತೆ ನೀಡಲು ನಿರ್ದೇಶನ ನೀಡಲಾಗಿದೆ.