Asianet Suvarna News Asianet Suvarna News

15 ಅನರ್ಹ ಶಾಸಕರು ಕರ್ನಾಟಕದ ಮುತ್ತುಗಳು, ಇವರು ಮತ್ತೆ ಶಾಸಕರಾಗಬೇಕು: ಕಟೀಲ್

15 ಅನರ್ಹ ಶಾಸಕರು ಕರ್ನಾಟಕದ ಮುತ್ತುಗಳು!| ಆಡಳಿತ ಪಕ್ಷದ ಶಾಸಕರು ವಿರೋಧ ಪಕ್ಷ ಸೇರಿದ್ದು ಇದೇ ಮೊದಲು| ಇವರೆಲ್ಲರೂ ಮತ್ತೆ ಶಾಸಕರಾಗಬೇಕು: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌

15 Disqualified MLAs Are The Pearls Of Karnataka Says BJP State President Nalin Kumar Kateel
Author
Bangalore, First Published Nov 25, 2019, 8:37 AM IST

ಬೆಂಗಳೂರು[ನ.25]: ಅಪವಿತ್ರ ಮೈತ್ರಿ ಸರ್ಕಾರದಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿರುವ 15 ಶಾಸಕರು ‘ಕರ್ನಾಟಕದ ಮುತ್ತು’ಗಳಾಗಿದ್ದು, ಉಪಚುನಾವಣೆಯಲ್ಲಿ 15 ಮಂದಿಯೂ ಗೆಲ್ಲಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಮಹಾಲಕ್ಷ್ಮೇ ಲೇಔಟ್‌ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪರ ಭಾನುವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ರಾಜ್ಯದ ಇತಿಹಾಸದಲ್ಲಿ ವಿರೋಧ ಪಕ್ಷದ ಶಾಸಕರು ರಾಜೀನಾಮೆ ನೀಡಿ ಆಡಳಿತ ಪಕ್ಷ ಸೇರಿದ್ದನ್ನು ನೋಡಿದ್ದೇವೆ. ಆದರೆ, ಆಡಳಿತ ಪಕ್ಷದ ಶಾಸಕರು ವಿರೋಧ ಪಕ್ಷ ಸೇರಿರುವುದು ಕರ್ನಾಟಕದಲ್ಲಿ ಮಾತ್ರ. ಈ 15 ಮಂದಿ ಅಪವಿತ್ರ ಮೈತ್ರಿ ಸರ್ಕಾರದಲ್ಲಿ ಅಧಿಕಾರಕ್ಕಾಗಿ ಹಂಬಲಿಸಲಿಲ್ಲ, ಹಣಕ್ಕೆ ಆಸೆ ಪಡಲಿಲ್ಲ ಎಂದು ಶ್ಲಾಘಿಸಿದರು.

'ಭಾರತ್ ಮತಾಕೀ ಜೈ' ಹೇಳಲು ದಿನ ಕನ್ನಡಿ ಮುಂದೆ ಪ್ರಾಕ್ಟೀಸ್ ಮಾಡ್ತಿದ್ದೇನೆ ಎಂದ ಅನರ್ಹ ಶಾಸಕ

ಫೈವ್‌ ಸ್ಟಾರ್‌ ಹೋಟೆಲ್‌ನಿಂದ ಆಡಳಿತ ಮಾಡಿದ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಈ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಲಿಲ್ಲ. ಅಭಿವೃದ್ಧಿ ಯೋಜನೆಗಳಿಗೆ ಸಹಕಾರ ನೀಡಲಿಲ್ಲ. ಇದರಿಂದ ಬೇಸತ್ತು ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಆಚೆ ಬಂದರು. ಅಭಿವೃದ್ಧಿಯ ಕನಸುಗಳೊಂದಿಗೆ ಸ್ವಾಭಿಮಾನಕ್ಕಾಗಿ ಬಿಜೆಪಿಗೆ ಸೇರ್ಪಡೆಯಾದರು. ಹಾಗಾಗಿ ಈ 15 ಶಾಸಕರನ್ನು ಉಪಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಗೆಲ್ಲಿಸಬೇಕು ಎಂದು ಹೇಳಿದರು.

ಮಹಾಲಕ್ಷ್ಮೇ ಲೇಔಟ್‌ನ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಅವರು ಕ್ಷೇತ್ರದ ಅಭಿವೃದ್ಧಿಗೆ ಹಲವು ಕನಸು ಕಟ್ಟಿದ್ದಾರೆ. ಅವರನ್ನು ಮತ್ತೊಮ್ಮೆ ಗೆಲ್ಲಿಸುವ ಮುಖಾಂತರ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಶಕ್ತಿ ತುಂಬಿಬೇಕು. ರೈತ ಪರ ಹೋರಾಟದಿಂದ ಬೆಳೆದಿರುವ ಯಡಿಯೂರಪ್ಪ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ ದೇಶದಲ್ಲೇ ಮೊದಲ ಬಾರಿಗೆ ಕೃಷಿ ಬಜೆಟ್‌ ಮಂಡಿಸಿದ್ದರು. ಭಾಗ್ಯಲಕ್ಷ್ಮೇ ಯೋಜನೆ, ಸೈಕಲ್‌ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ ಜಾರಿಗೆ ತಂದರು. ಬೆಂಗಳೂರು ಅಭಿವೃದ್ಧಿಗೆ ನೂರಾರು ಕೋಟಿ ರು. ಅನುದಾನ ನೀಡಿದರು. ಇಂದು ಕರ್ನಾಟಕವನ್ನು ಅಭಿವೃದ್ಧಿಯಲ್ಲಿ ನಂಬರ್‌ ಒನ್‌ ಮಾಡುವ ಕನಸು ನನಸು ಮಾಡಲು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ನಾರಾಯಣ ಗೌಡ ವಿಭಿಷಣ, ಬಿಎಸ್‌ವೈ ರಾಮ, KR ಪೇಟೆ ರಾಮರಾಜ್ಯ: ನಳಿನ್

ಒಂದೂವರೆ ವರ್ಷಕ್ಕೆ ಡೈವೋರ್ಸ್‌ ಆಯ್ತು:

ಈ ಹಿಂದೆ ವಂಶಾಡಳಿತ ರಾಜಕಾರಣ ಹಾಗೂ ಕುಟುಂಬ ರಾಜಕಾರಣ ಮಾಡುವ ಕಾಂಗ್ರೆಸ್‌-ಜೆಡಿಎಸ್‌ ಅಪವಿತ್ರ ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಸುದೀರ್ಘ ಆಡಳಿತ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದವರು ಕೇವಲ ಒಂದೂವರೆ ವರ್ಷಕ್ಕೆ ಡೈವೋರ್ಸ್‌ ಪಡೆದರು. ಇನ್ನು ಯಾವುದೇ ಕಾರಣಕ್ಕೂ ಒಂದಾಗುವುದಿಲ್ಲ ಎಂದಿದ್ದಾರೆ. ಅವರಪ್ಪನಾಣೆಗೂ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಅವರು ಕಡೆಗೆ ಕುಮಾರಸ್ವಾಮಿ ಅವರನ್ನೇ ಮುಖ್ಯಮಂತ್ರಿ ಮಾಡಿದರು. ಅಂತಿಮವಾಗಿ ಸರ್ಕಾರ ಬೀಳಿಸಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ಜೆಡಿಎಸ್‌-ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ನಾಡಿನ ಜನರ ಕಣ್ಣೀರು ಒರೆಸುವ ಕೆಲಸ ಮಾಡಲಿಲ್ಲ ಎಂದು ಕಿಡಿಕಾರಿದರು.

ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಮತದಾರರು ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

Follow Us:
Download App:
  • android
  • ios