* ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ ಜೂನಿಯರ್ ಕುಸ್ತಿಪಟುವಿನ ಕೊಲೆ ಪ್ರಕರಣ* ಸಾಗರ್ ರಾಣಾ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್* ಸುಶೀಲ್‌ ಕುಮಾರ್‌ಗೆ  ಗ್ಯಾಂಗ್‌ಸ್ಟರ್ ಸಂಪರ್ಕ ಇರುವ ಆರೋಪ ಕೇಳಿ ಬಂದಿದೆ.

ನವದೆಹಲಿ(ಮೇ.27): 2 ಬಾರಿ ಒಲಿಂಪಿಕ್‌ ಪದಕ ವಿಜೇತ, ದಿಗ್ಗಜ ಕುಸ್ತಿಪಟು ಸುಶೀಲ್‌ ಕುಮಾರ್‌ ಗ್ಯಾಂಗ್‌ಸ್ಟರ್‌ಗಳ ಜೊತೆ ನಂಟು ಹೊಂದಿದ್ದಾರೆ ಎನ್ನುವ ಸ್ಫೋಟಕ ಸುದ್ದಿ ಹೊರಬಿದ್ದಿದೆ. ಕುಸ್ತಿಪಟು ಸಾಗರ್‌ ರಾಣಾ ಸಾವಿನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸುಶೀಲ್‌, ವಿಚಾರಣೆ ವೇಳೆ ಸುಲಿಗೆ ಪ್ರಕರಣಗಳಲ್ಲೂ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ ಎನ್ನಲಾಗಿದೆ.

Add Asianetnews Kannada as a Preferred SourcegooglePreferred

ಬಂಧಿತ ಗ್ಯಾಂಗ್‌ಸ್ಟರ್‌ ನೀರಜ್‌ ಬಾವನಾ ಅವರೊಂದಿಗೆ ಸುಶೀಲ್‌ ಕೈಜೋಡಿಸಿದ್ದರು ಎನ್ನಲಾಗಿದ್ದು, ಸಾಗರ್‌ ಮರಣ ಹೊಂದಿದ ಛತ್ರಾಸಲ್‌ ಕ್ರೀಡಾಂಗಣದಲ್ಲಿ ನೀರಜ್‌ಗೆ ಸಹಚರರಿಗೆ ಸೇರಿದ ವಾಹನವೊಂದು ಪತ್ತೆಯಾಗಿದೆ. ಅಲ್ಲದೇ ಘಟನೆ ನಡೆದ ರಾತ್ರಿ ಸುಶೀಲ್‌ ಜೊತೆ ನೀರಜ್‌ರ ಹಲವು ಸಹಚರರು ಸಹ ಇದ್ದರು ಎನ್ನಲಾಗಿದೆ.

ಕುಸ್ತಿಪಟು ಸಾವು: ರೈಲ್ವೆ ಹುದ್ದೆಯಿಂದ ಸುಶೀಲ್‌ ಅಮಾನತು

ದೆಹಲಿಯ ಮಾಡೆಲ್‌ ಟೌನ್‌ ನಗರದಲ್ಲಿ ಸ್ಥಳೀಯ ಕೇಬಲ್‌ ವ್ಯವಹಾರ ಮಾಡುವ ವ್ಯಕ್ತಿಯೊಬ್ಬನಿಗೆ ಕುಖ್ಯಾತ ಗ್ಯಾಂಗ್‌ಸ್ಟರ್‌ ಸಂದೀಪ್‌ ಅಲಿಯಾಸ್‌ ಕಾಲಾ ಜತೇಡಿ 1 ಕೋಟಿ ರು. ನೀಡುವಂತೆ ಬೇಡಿಕೆ ಇಟ್ಟಿದ್ದ. ಆತನಿಗೆ ಸುಶೀಲ್‌ ಮೂಲಕವೇ ಬೆದರಿಕೆ ಕರೆ ಹೋಗಿತ್ತು ಎನ್ನಲಾಗಿದೆ. ಜೊತೆಗೆ ದೆಹಲಿ, ಉತ್ತರ ಪ್ರದೇಶ, ಹರ್ಯಾಣದಲ್ಲಿ ಟೋಲ್‌ ಬೂತ್‌ಗಳ ಮೇಲೆ ನಿಯಂತ್ರಣ ಸಾಧಿಸಲು ಕಾಲಾ ಜತೇಡಿ ಮುಂದಾಗಿದ್ದ, ಈ ವೇಳೆ ಹಣ ಹಂಚಿಕೆ ವಿಚಾರದಲ್ಲಿ ಸುಶೀಲ್‌ ಹಾಗೂ ಕಾಲಾ ಜತೇಡಿ ನಡುವೆ ಜಗಳವಾದ ಕಾರಣ ಸುಶೀಲ್‌, ನೀರಜ್‌ ಜೊತೆ ಕೈಜೋಡಿಸಿದ್ದರು ಎನ್ನಲಾಗಿದೆ. ಕುಸ್ತಿಪಟು ಸಾಗರ್ ರಾಣಾ ಸಾವಿನ ಬಳಿಕ ಸುಶೀಲ್‌ ಪೊಲೀಸರಿಗೆ ಮಾತ್ರವಲ್ಲ, ಕಾಲಾ ಜತೇಡಿಗೂ ಹೆದರಿ ತಲೆಮರಿಸಿಕೊಂಡಿದ್ದರು ಎನ್ನಲಾಗಿದೆ.