ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದ ಕರ್ನಾಟಕದ ಪ್ಯಾರಾ ಅಥ್ಲೀಟ್ ಶಿಲ್ಪಾ ಕೆ.ಶೈಲಾ ಅವರಿಗೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತ ದೊರೆತಿದೆ. ಈ ಯಶಸ್ಸಿಗಾಗಿ ರಾಜ್ಯ ಸರ್ಕಾರವು ಅವರಿಗೆ ₹15 ಲಕ್ಷ ನಗದು ಬಹುಮಾನ ಮತ್ತು ಗ್ರೂಪ್ ‘ಬಿ’ ಹುದ್ದೆ ನೀಡುವುದಾಗಿ ಘೋಷಿಸಿದೆ.
ಬೆಂಗಳೂರು: ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದ ಕರ್ನಾಟಕದ ಪ್ಯಾರಾ ಅಥ್ಲೀಟ್ ಶಿಲ್ಪಾ ಕೆ.ಶೈಲಾ ಅವರಿಗೆ ಗುರುವಾರ ನಗರದಲ್ಲಿ ಭವ್ಯ ಸ್ವಾಗತ ಸಿಕ್ಕಿದೆ. ಅಲ್ಲದೆ, ಈ ಹಿಂದೆ ಭರವಸೆ ನೀಡಿದಂತೆ ₹15 ಲಕ್ಷ ರು. ನಗದು ಬಹುಮಾನ ಹಾಗೂ ಗ್ರೂಪ್ ‘ಬಿ’ ಹುದ್ದೆ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.
ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶಿಲ್ಪಾ, ಪ್ಯಾರಾ ಅಥ್ಲೆಟಿಕ್ಸ್ ಕೋಚ್ ಸತ್ಯನಾರಾಯಣ ಹಾಗೂ ಮಹಿಳಾ ತಂಡದ ಕೋಚ್ ಪುಷ್ಪ ನಿರಂಜನ್ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಬಳಿಕ ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾ ಇಲಾಖೆ ವತಿಯಿಂದ, ಫಿಬಾ ಏಷ್ಯಾ ಅಧ್ಯಕ್ಷ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಡಾ.ಕೆ. ಗೋವಿಂದರಾಜು ಹಾಗೂ ಇತರ ಗಣ್ಯರಿಂದ ಸ್ವಾಗತ, ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಕ್ರೀಡಾ ಇಲಾಖೆಯ ಆಯುಕ್ತ ಎಂ.ಎನ್.ಅನುಚೇತ್, ‘ಕ್ರೀಡಾಕೂಟದಲ್ಲಿ ಭಾಗವಹಿಸಿದ ರಾಜ್ಯದ 8 ಜನರಿಗೆ ಸರ್ಕಾರದ ವತಿಯಿಂದ ತಲಾ ₹5 ಲಕ್ಷ ನೀಡಲಾಗಿದೆ. ಅಲ್ಲದೆ ಪದಕ ಗೆದ್ದಿರುವ ಶಿಲ್ಪಾಗೆ ₹15 ಲಕ್ಷ ನಗದು ಬಹುಮಾನ ಹಾಗೂ ಗ್ರೂಪ್ ‘ಬಿ’ ಹುದ್ದೆ ನೀಡಿ ಗೌರವಿಸಲಾಗುವುದು. ಇತರ ಸವಲತ್ತುಗಳನ್ನೂ ಒದಗಿಸಲಾಗುವುದು’ ಎಂದರು.
ಒಲಿಂಪಿಕ್ಸ್ ಮೆಡಲ್ ಗೆಲ್ಲಲು ಕ್ರೀಡಾ ವಿಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು: ಎನ್ಡಿಎ ಸಭೆಯಲ್ಲಿ ಸಚಿನ ಮಾನ್ಸುಖ್
ನವದೆಹಲಿ: ‘ಭಾರತವು 2036ರ ಒಲಿಂಪಿಕ್ಸ್ಗೆ ಆತಿಥ್ಯ ವಹಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಆ ಕೂಟದಲ್ಲಿ ನಾವು ಪದಕ ವಿಜೇತರಲ್ಲಿ ಅಗ್ರ 10ರಲ್ಲಿ ಇರಬೇಕು. 2047ರ ವೇಳೆಗೆ ನಾವು ಅಗ್ರ-5 ಕ್ರೀಡಾ ರಾಷ್ಟ್ರಗಳ ಪಟ್ಟಿಯಲ್ಲಿರಬೇಕು’ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ನಡೆದ ಎನ್ಡಿಎ ಸಭೆಯಲ್ಲಿ ಈ ಕುರಿತು ಅವರು ಮಾತನಾಡಿದರು. ‘1948 ರಿಂದ 2012ರವರೆಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ 21. ಆದರೆ ಕಳೆದ ಮೂರು ಆವೃತ್ತಿಗಳಲ್ಲಿಯೇ 15 ಗೆದ್ದಿದೆ. ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಪಟ್ಟಿಯಲ್ಲಿ ಮುನ್ನಡೆಯಲು ಕ್ರೀಡಾ ವಿಜ್ಞಾನಕ್ಕೆ ಹೆಚ್ಚು ಆದ್ಯತೆ ನೀಡಬೇಕು’ ಎಂದರು. ಅಲ್ಲದೆ, ಈ ಬಾರಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಸಾಧನೆಯನ್ನು ಕೊಂಡಾಡಿದರು.
ವಿಶ್ವ ಅಂ-20 ಅಥ್ಲೆಟಿಕ್ಸ್ ಕೂಟದಲ್ಲಿ ಭಾರತದ 3 ಮಂದಿ ಫೈನಲ್ ಪ್ರವೇಶ
ಯುಜೀನ್(ಅಮೆರಿಕ): ಅಂಡರ್-20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಮೊದಲ ದಿನ ಭಾರತದ ಮೂವರು ಫೈನಲ್ ಪ್ರವೇಶಿಸಿದ್ದಾರೆ. ಪುರುಷರ ಜಾವೆಲಿನ್ ಎಸೆತದ ಅರ್ಹತಾ ಸುತ್ತಿನಲ್ಲಿ ಆಶಿಶ್ ಯಾದವ್ ಅವರು 69.87 ಮೀ. ದೂರ ದಾಖಲಿಸಿ 2ನೇ ಸ್ಥಾನಿಯಾದರೆ, ಟಿ.ಧರಣೀಧರನ್ 72.50 ಮೀ. ದೂರಕ್ಕೆ ಜಾವೆಲಿನ್ ಎಸೆದು 12ನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿದರು. ಇದೇ ವೇಳೆ ಮಹಿಳೆಯ ಡಿಸ್ಕಸ್ ಎಸೆತದಲ್ಲಿ ಅಮಾನತ್ ಕಾಂಬೋಜ್ 52.58 ಮೀ. ದೂರ ದಾಖಲಿಸಿ ಅರ್ಹತಾ ಸುತ್ತಿನಲ್ಲಿ 6ನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದರು. ಪುರುಷರ 800 ಮೀ. ರೇಸ್ನಲ್ಲಿ ಮೊಗಾಲಿ ವೆಂಕಟರಾಮ್ ಸೆಮಿಫೈನಲ್ ತಲುಪಿದರು.


