ನಿರ್ಗತಿಕರ ಅನ್ನದಾಸೋಹಕ್ಕೆ ಸಹಾಯಹಸ್ತ: ವಾಟ್ಸಾಪ್ ಮೆಸೆಜ್ಗೆ ಅಮೆರಿಕದಿಂದ ಸ್ಪಂದನೆ
ಅನ್ನದಾಸೋಹಕ್ಕೆ 5 ಸಾವಿರ ರು. ಸಹಾಯಹಸ್ತ| ಅನ್ನದಾಸೋಹಕ್ಕೆ ಹದಿನೈದು ಸಾವಿರ ರು. ದಾನ ನೀಡಿದ ಡಾ.ಅರವಿಂದ್, ಆರ್.ಕೆ. ಚಂದ್ರಶೇಖರ ಮತ್ತು ಶ್ಯಾಮ್ ರಾಮ ದ್ಯಾನಿ| ಸಾರ್ವಜನಿಕರ ಗಮನ ಸೆಳೆದ ಹಾಸನ್ ಫ್ರೆಂಡ್ಸ್ ಕಾರ್ನರ್ ಸ್ವಯಂ ಸೇವಾ ಸಂಘದ ಸದಸ್ಯರ ಕಾರ್ಯ|
ಹಾಸನ(ಏ.27): ವಾಟ್ಸಾಪ್ ಮೂಲಕ ಮಾಡಿದ ಸಂದೇಶಕ್ಕೆ ದೂರದ ಅಮೆರಿಕ ದೇಶದಿಂದ ತಕ್ಷಣದ 5 ಸಾವಿರ ರು. ನೀಡಿರುವ ಮಾನವೀಯ ಸ್ಪಂದನೆ ಸಿಕ್ಕಿದೆ. ವಾರ್ತಾ ಇಲಾಖೆ ಹಾಗೂ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ನೋಂದಣಿಗೊಂಡಿರುವ ಕೊರೋನಾ ವಾರಿಯರ್ಸ್ ಸ್ವಯಂ ಸೇವಕರು ಅಸಹಾಯಕರಿಗೆ ಹಾಸನ ನಗರದ ಸರ್ಕಾರಿ ಆಸ್ಪತ್ರೆಯ ಎದುರು ಊಟದ ವ್ಯವಸ್ಥೆಯನ್ನು ಪ್ರತಿದಿನ ಮಾಡುತ್ತಾ ಬಂದಿದ್ದಾರೆ.
ಇದನ್ನು ಗಮನಿಸಿದ ಹಾಸನದ ರಾಘವೇಂದ್ರ ಸ್ವಾಮಿ ಮಠದ ಪಕ್ಕದ ಪ್ರತಿಭಾ ಪ್ಯೂಯಲ್ಸ್ ಪೆಟ್ರೋಲ್ ಬಂಕ್ ಮಾಲೀಕ ರಾಮಚಂದ್ರ ಅವರು ಊಟ ಮತ್ತು ತಿಂಡಿ ವ್ಯವಸ್ಥೆ ಮಾಡಿಕೊಟ್ಟಿದ್ದರು. ಊಟದ ವ್ಯವಸ್ಥೆಯ ಪೋಟೋಗಳನ್ನು ತಮ್ಮ ಸ್ನೇಹಿತರಿಗೆ ವಾಟ್ಸಾಪ್ ಮೂಲಕ ರವಾನಿಸಿದರು. ದೂರದ ಅಮೆರಿಕ ದೇಶದ ಅವರ ಸ್ನೇಹಿತರಾದ ನರೇಂದ್ರನಾಥ್ ತಕ್ಷಣ ಈ ಸಂದೇಶಕ್ಕೆ ಸ್ಪಂದಿಸಿ 5 ಸಾವಿರ ಹಣ ಕಳುಹಿಸಿ ನಿರ್ಗತಿಕರಿಗೆ ಒಂದು ದಿನದ ದಾಸೋಹಕ್ಕೆ ಸಹಾಯ ಹಸ್ತ ನೀಡಿದ್ದಾರೆ.
ಗ್ರೀನ್ ಝೋನ್ನಲ್ಲಿ ಲಾಕ್ಡೌನ್ ಸಡಿಲ, ವಾಹನ ಸಂಚಾರ ಹೆಚ್ಚಳ
ಅಲ್ಲದೇ, ಸೇವಾ ಮನೋ ಭಾವನೆ ಹೊಂದಿರುವ ಡಾ.ಅರವಿಂದ್, ಆರ್.ಕೆ. ಚಂದ್ರಶೇಖರ ಮತ್ತು ಶ್ಯಾಮ್ ರಾಮ ದ್ಯಾನಿ ಅವರು ಹದಿನೈದು ಸಾವಿರ ರು. ನಿರ್ಗತಿಕರ ಅನ್ನ ದಾಸೋಹಕ್ಕೆ ದಾನ ನೀಡಿದ್ದಾರೆ. ಹಾಸನ್ ಫ್ರೆಂಡ್ಸ್ ಕಾರ್ನರ್ ಸ್ವಯಂ ಸೇವಾ ಸಂಘದ ಈ ಸದಸ್ಯರ ಕಾರ್ಯ ಸಾರ್ವಜನಿಕರ ಗಮನ ಸೆಳೆದಿದೆ.
ಇಂತಹ ಸಂಘಟನೆಯ ಗಮನ ಸೆಳೆಯುವಲ್ಲಿ ಹಾಸನ ಕೊರೋನಾ ಸೈನಿಕರ ಶ್ರಮ ಸಾರ್ಥಕ ಎನಿಸುತ್ತದೆ. ಇಂದಿನ ಊಟದ ವ್ಯವಸ್ಥೆಯಲ್ಲಿ ಒಂಬತ್ತು ಕೊರೋನಾ ಸೈನಿಕರು ಸಹಕಾರ ನೀಡಿದ್ದಲ್ಲದೇ ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ಶ್ರಮಿಸಿದರು. ಊಟದ ವ್ಯವಸ್ಥೆಗೆ ಸರದಿ ಸಾಲಿನಲ್ಲಿ ನಿಲ್ಲುವ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಬಿಳಿ ಗೆರೆ ಹಾಕಲಾಯಿತು.