ಅಮೆರಿಕದಲ್ಲಿ ಆಗಸ್ಟ್ 30ರಿಂದ ಕನ್ನಡ ಹಬ್ಬ, ನಾವಿಕ ಸಮ್ಮೇಳನಕ್ಕೆ ಹೋಗಿ ಬರೋಣ
ನಾವಿಕ ಸಮ್ಮೇಳನಕ್ಕೆ ಅಮೆರಿಕ ಸಜ್ಜಾಗಿದೆ. ಅಮೆರಿಕದ ಒಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ ಕನ್ನಡ ಹಬ್ಬ ಕಳೆಕಟ್ಟಲಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡದ ಕಂಪು ಪಸರಿಸಲಿವೆ.
ಸಿನ್ಸಿನಾಟಿ [ಆ. 29] ಅಮೆರಿಕದ ನಾನಾ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಸಾಂಸ್ಕೃತಿಕವಾಗಿ ಸಂಘಟಿಸಲು ಅಸ್ತಿತ್ವಕ್ಕೆ ಬಂದ ಸಂಸ್ಥೆ ‘ನಾವಿಕ’ (ನಾವು ವಿಶ್ವ ಕನ್ನಡಿಗರು-ನಾರ್ತ್ ಅಮೇರಿಕಾ ವಿಶ್ವ ಕನ್ನಡ ಆಗರ) ಸಂಸ್ಥೆಯ 5ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ವೇದಿಕೆ ಸಿದ್ಧವಾಗಿದೆ.
ಸಿನ್ಸಿನಾಟಿ ಡ್ಯೂಕ್ ಎನರ್ಜಿ ಕನ್ವೆಕ್ಷನ್ ಸೆಂಟರ್ನಲ್ಲಿ ಸಮ್ಮೇಳನ ನಡೆಯಲಿದೆ. ಆಗಸ್ಟ್ 30 ರಿಂದ ಸೆಪ್ಟೆಂಬರ್ 1ರವರೆಗೆ 3 ದಿನಗಳ ಕಾಲ ಸಮ್ಮೇಳನ ನಡೆಯಲಿದೆ. ಸಿಂಚನ, ಸಂಗಮ, ಸ್ಪಂದನ ಎಂಬ ಅಡಿ ಬರಹವನ್ನು ಸಮ್ಮೇಳನಕ್ಕೆ ನೀಡಲಾಗಿದೆ.
ಸಮ್ಮೇಳನದ ವಿಶೇಷ: ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ, ಪತ್ರಕರ್ತ ವಿಶ್ವೇಶ್ವರ ಭಟ್, ಸಾಹಿತಿ ಡಾ. ಸಿದ್ಧಲಿಂಗಯ್ಯ, ನಾಡೋಜ ನಿಸಾರ್ ಅಹಮದ್, ಗೋಲ್ಡನ್ ಸ್ಟಾರ್ ಗಣೇಶ್, ಶಿಲ್ಪಾ ಗಣೇಶ್, ಯಮುನಾ ಶ್ರೀನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ವೈಭವ: ಗಾಯಕ ವಿಜಯ್ ಪ್ರಕಾಶ್, ಅನುರಾಧಾ ಭಟ್ ಸಂಗೀತ ಸಂಜೆ ನಡೆಸಿಕೊಡಲಿದ್ದಾರೆ. ವಿಶ್ವನಾಥ್ ಹನಸೋಗೆ, ನಾಗಚಂದ್ರಿಕಾ ಭಟ್ ಡಾ.ರಾಜ್ ನೈಟ್ ನಡೆಸಿಕೊಡಲಿದ್ದಾರೆ. ವಿದ್ಯಾ ಸಾಗರ್ ಅವರಿಮದ ವಯೋಲಿನ್ , ಪ್ರೊ.ಕೃಷ್ಣೇಗೌಡ, ರಿಚರ್ಡ್ ಲೂಯಿಸ್, ಮುಖ್ಯಮಂತ್ರಿ ಚಂದ್ರು, ಶ್ರೀನಾಥ್ ವಸಿಷ್ಠ, ಪ್ರೊ. ಪುತ್ತೂರಾಯ ಸ್ಟಾಂಡ್ ಅಪ್ ಕಾಮಿಡಿ ನಡೆಸಿಕೊಡಲಿದ್ದಾರೆ. ಸಂಗೀತಾ ಕಟ್ಟಿ ಸುಗಮ ಸಂಗೀತ, ನಿರುಪಮಾ ರಾಜೇಂದ್ರ ತಂಡದ ನೃತ್ಯ, ಗಾಯಕ ಹೇಮಂತ್ ಹಾಡು ಎಲ್ಲವೂ ತೆರದುಕೊಳ್ಳಲಿದೆ.
ಸಮ್ಮೇಳನದ ಸಕಲ ಮಾಹಿತಿ ಇಲ್ಲಿ: http://ohio.navika.org/
ರಾಧಾ ದೇಸಾಯಿ, ಕೃಷ್ಣ ಪ್ರಸಾದ್, ನಿಶಾ ಕುಲಕರ್ಣಿ, ಸುಷ್ಮಾ ಪವನ್, ಕೈಲಾಶ್ ಹೇಮಚಂದ್ರ ಗಾಯನ ಮಿಸ್ ಮಾಡಿಕೊಳ್ಳುವ ಹಾಗೆ ಇಲ್ಲ. ರಮಣಿ ಅವರ ಕೊಳಲು ವಾದನ ಮನಸೂರೆಗೊಳ್ಳಲಿದೆ. ಇದರ ಜತೆಗೆ ಯಕ್ಷಗಾನ ಮತ್ತು ಜಾನಪದ ಲೋಕ ಸಹ ಇದೆ.
ಸಾಂಸ್ಕೃತಿಕ ಸ್ಪರ್ಧೆಗಳು: “ನಾವಿಕ ಕೋಗಿಲೆ”, “ನಾವಿಕ ಪ್ರತಿಭೆ”, “ನಾವಿಕ ಕ್ಷಣ”, “ನಾವಿಕ ಅಪ್ಸರ” ಹಾಗೂ “ನಾವಿಕ ಗಂಧರ್ವ” ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಇದೆ.
ಅಮೆರಿಕ ಅರಿಜೋನಾ ಕನ್ನಡ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ
ನಾವಿಕ ಅಧ್ಯಕ್ಷ ಸುರೇಶ್ ರಾಮಚಂದ್ರ, ಸಮ್ಮೇಳನದ ಅಧ್ಯಕ್ಷ ಡಾ. ಮನಮೋಹನ್ ಕಟಪಾಡಿ, ಸಮ್ಮೇಳನ ಉಪಾಧ್ಯಕ್ಷ ಸುರೇಶ್ ಶರೋಫ್, ಕನ್ವಿನಿಯರ್ ಅರುಣ್ ಕುಮಾರ್, ಪುಷ್ಪಲತಾ ನವೀನ್, ಅರುಡಿ ರಾಜಗೋಪಾಲ್, ವಲ್ಲೀಶಾ ಶ ಶಾಸ್ತ್ರಿ ಸಮ್ಮೇಳನದ ನೇತೃತ್ವ ವಹಿಸಿಕೊಂಡಿದ್ದಾರೆ.
ಈ ನಾವಿಕ ಸಂಸ್ಥೆಗೆ ದಶಕದ ಇತಿಹಾಸವಿದೆ. ಶಿಕ್ಷಣ, ಉದ್ಯೋಗ ನಿಮ್ಮಿತ್ತ ತೆರಳಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಉತ್ತರ ಅಮೇರಿಕಾ, ಉತ್ತರ, ಪಶ್ಚಿಮ, ಪೂರ್ವ ಹಾಗೂ ಮಧ್ಯ ರಾಜ್ಯಗಳಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಕನ್ನಡಿಗರು ನೆಲೆಸಿದ್ದಾರೆ. ಈ ಅನಿವಾಸಿ ಕನ್ನಡಿಗರು ವಿಭಿನ್ನ ಸಂಸ್ಕೃತಿಯ ನೆರಳಿನಲ್ಲಿ ಕುಳಿತು ಮೂಲ ಸಂಸ್ಕೃತಿ, ಭಾಷೆಯ ಸೊಗಡನ್ನು ಉಳಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಿದ್ದಾರೆ.
ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆಯ ಹಿರಿಮೆಯನ್ನು ತಮ್ಮ ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಪ್ರಯತ್ನಗಳಲ್ಲಿ ಈ ಸಮ್ಮೇಳನ ಪ್ರಮುಖ ಪಾತ್ರ ವಹಿಸಿಕೊಂಡು ಬಂದಿದೆ. ಕಳೆದ ವರ್ಷ ಮೈಸೂರಿನಲ್ಲಿ ನಡೆದ ನಾವಿಕ ಸಮ್ಮೇಳನ ಅನೇಕ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಆಗಿತ್ತು.