ಅಪಘಾತದಿಂದ ಮೃತಪಟ್ಟಿದ್ದ ರಾಬಿನ್ ಸನ್ ಗುರುತು ಪತ್ತೆ/ ಬರೋಬ್ಬರಿ 1 ತಿಂಗಳ ನಂತರ ಪತ್ತೆ ಮಾಡಿದ ಕುವೈತ್ ಅಧಿಕಾರಿಗಳು/ ಪಾರ್ಥಿವ ಶರೀರವನ್ನು ದೇಶಕ್ಕೆ ತರಲು ಮನವಿ ಮಾಡಿದ್ದ ಕುಟುಂಬ

ಕಾರವಾರ [ಅ. 16] ತಾಲೂಕಿನ ಕಡವಾಡ ಚರ್ಚ್‌ವಾಡದ ರಾಬಿನ್ಸನ್ ರಿಝಾರಿಯೋ ಮೃತಪಟ್ಟು 1 ತಿಂಗಳು ಕಳೆದ ಮೇಲೆ ಶವದ ಗುರುತು ಪತ್ತೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಪಘಾತದಿಂದ ರಾಬಿನ್ಸನ್ ಹಾಗೂ ಇತರ ಮೂವರು ಪ್ರಯಾಣಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿ ಎಲ್ಲರ ಶವ ಸುಟ್ಟು ಕರಕಲಾಗಿತ್ತು. ಶವದ ಗುರುತು ಪತ್ತೆಗೆ ಫಾರೆನ್ಸಿಕ್ ಪರೀಕ್ಷೆಯ ಮೊರೆ ಹೋಗಲಾಗಿತ್ತು. 

ಕುವೈತ್ ಕೆಎಫ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಬಿನ್ಸನ್ ಕಳೆದ ಸೆ. 15 ರಂದು ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಕುಟುಂಬಸ್ಥರು ಜಿಲ್ಲಾಡಳಿತಕ್ಕೆ ಶವ ತರಲು ಸಹಾಯ ಮಾಡುವಂತೆ ಕೋರಿ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಡಳಿತ ಭಾರತೀಯ ರಾಯಭಾರ ಕಚೇರಿಗೆ ಪತ್ರ ಕಳಿಸಿತ್ತು.

ದೇಹ ಗುರುತು ಪತ್ತೆ ಮಾಡಲು ತಾಯಿ ಅಥವಾ ಸಹೋದರನ ಡಿಎನ್‌ಎ ಪರೀಕ್ಷೆ ಆಗಬೇಕಿದ್ದು, ಅವರನ್ನು ಕಳಿಸುವಂತೆ ಕುವೈತ್‌ನಿಂದ ಮರುಪತ್ರ ಬಂದಿತ್ತು. ರಾಬಿನ್ಸನ್ ಸಹೋದರ ಕುವೈತ್‌ಗೆ ತೆರಳಿ 20 ದಿನ ಕಳೆದಿದ್ದು, ಮಂಗಳವಾರ ಫಾರೆನ್ಸಿಕ್ ವರದಿ ಬಂದಿದ್ದು, ರಾಬಿನ್ಸನ್ ಶವ ಪತ್ತೆಯಾಗಿದೆ.

ಪುತ್ರನ ಮೃತದೇಹ ತರಲಾರದೆ ಕುಟುಂಬದ ಪರದಾಟ

ಸೆ. 15 ರಂದು ರಾತ್ರಿ ಕುವೈತ್‌ನ ತಮ್ಮ ಮನೆಯಿಂದ ಕಚೇರಿಗೆ ಕೆಲಸಕ್ಕೆ ರಾಬಿನ್ಸನ್ ಹಾಗೂ ಇತರರು ತೆರಳುತ್ತಿದ್ದರು. ಈ ವೇಳೆ ಅವರ ಕಾರು ಅಪಘಾತವಾಗಿ ದೇಹ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ವಯೋವೃದ್ಧ ತಂದೆ ತಾಯಿ ಹಾಗೂ ಕುಟುಂಬಸ್ಥರು ದೇಹ ಹಸ್ತಾಂತರ ಆಗಲು ವಿಳಂಬ ಆಗುತ್ತಿರುವುದಕ್ಕೆ ಆತಂಕ ಪಡುತ್ತಿದ್ದಾರೆ. ತಂದೆ ತಾಯಿ ಮಗನನ್ನು ನೆನೆದು ಪ್ರತಿನಿತ್ಯ ಕಣ್ಣೀರು ಇಡುತ್ತಿದ್ದಾರೆ. ಕುಟುಂಬಸ್ಥರು ಅಪಘಾತದ ಸುದ್ದಿ ಕೇಳಿದಾಗಿನಿಂದ ಸರಿಯಾಗಿ ಊಟ ತಿಂಡಿ ಮಾಡದೇ, ನಿದ್ರಿಸದೇ ಮರುಗುತ್ತಿದ್ದಾರೆ. 

ಶವದ ಗುರುತು ಪತ್ತೆ ಹಾಗೂ ಭಾರತಕ್ಕೆ ಶವ ಹಸ್ತಾಂತರಕ್ಕೆ ಕಾರವಾರ ಶಾಸಕಿ ರೂಪಾಲಿ ನಾಯ್ಕ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಶವದ ಗುರುತು ಪತ್ತೆ ಮಾಡಿದ ಬಗ್ಗೆ ಕುವೈತ್ ರಾಯಭಾರ ಕಚೇರಿಯಿಂದ ರೂಪಾಲಿ ನಾಯ್ಕ ಅವರಿಗೆ ಪತ್ರ ಬಂದಿದೆ.