ಬೆಂಗಳೂರಿಗೆ ಯೋಗಿ ಆಗಮನ; ಕಮಲ ಪಾಳಯದಲ್ಲಿ ಸಂಚಲನ
ವಿಧಾನಸಭೆ ಚುನಾವಣೆಗೆ ಬಿಜೆಪಿ ಆರಂಭಿಸಿರುವ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬೆಂಗಳೂರಿಗೆ ಆಗಮಿಸಿದ್ದಾರೆ.
ಬೆಂಗಳೂರು (ಜ.08): ವಿಧಾನಸಭೆ ಚುನಾವಣೆಗೆ ಬಿಜೆಪಿ ಆರಂಭಿಸಿರುವ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬೆಂಗಳೂರಿಗೆ ಆಗಮಿಸಿದ್ದಾರೆ.
ಕಳೆದ ತಿಂಗಳು ಹುಬ್ಬಳ್ಳಿಯಲ್ಲಿ ನಡೆದ 2ನೇ ಹಂತದ ಪರಿವರ್ತನಾ ಯಾತ್ರೆಯಲ್ಲಿ ಯೋಗಿ ಪಾಲ್ಗೊಂಡಿದ್ದರು. ಇದೀಗ ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಬಾಗಿಯಾಗಿದ್ದಾರೆ. ಬಿಎಸ್ವೈ, ಅನಂತ ಕುಮಾರ್ ಸೇರಿ ಹಲವರು ಭಾಗಿಯಾಗಿದ್ದಾರೆ. ಸಮಾವೇಶದಲ್ಲಿ ಮೋದಿ ಪರ ವ್ಯಾಪಕ ಜಯಘೋಷ ವ್ಯಕ್ತವಾಗಿದೆ.
ಎಲ್ಲಾ ಯೋಜನೆಗಳ ಲಾಭ ರಾಜ್ಯಕ್ಕೆ ಸಿಗಲು ಬಿಜೆಪಿ ಬೇಕು. ಬೆಂಗಳೂರಿನ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ. ಬೆಂಗಳೂರಿಗೆ ಏರ್ಪೋರ್ಟ್, ಮೆಟ್ರೋ ಸಿಕ್ಕಿದೆ. ಮೋದಿ ಪ್ರಧಾನಿಯಾದ ಮೇಲೆ ಬೆಂಗಳೂರಿಗೆ ಸ್ಮಾರ್ಟ್ ಸಿಟಿ ಪಟ್ಟ ಸಿಕ್ಕಿದೆ. ಇದನ್ನು ಮುಂದುವರಿಸಲು ರಾಜ್ಯ ಸರ್ಕಾರ ಶ್ರಮವಹಿಸಬೇಕು. ಆದರೆ ಕೇಂದ್ರದ ಯೋಜನೆಯ ಹಣ ರಾಜ್ಯದಲ್ಲಿ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ರಾಜ್ಯ-ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಎಲ್ಲವೂ ಸಾಧ್ಯ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಅಭಿವೃದ್ಧಿಗೆ ಯಾವುದೇ ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಕೇವಲ ಎಟಿಎಂ ಮಾತ್ರ. ಈ ಪಕ್ಷವನ್ನ ದೇಶದೆಲ್ಲೆಡೆ ಜನ ತಿರಸ್ಕರಿಸುತ್ತಿದ್ದಾರೆ. ಗುಜರಾತ್, ಹಿಮಾಚಲ ಪ್ರದೇಶವೇ ಇದಕ್ಕೆ ಉದಾಹರಣೆ ಎಂದು ಯೋಗಿ ಹೇಳಿದ್ದಾರೆ.