ತಿಂಗ್ಳೊಳಗೆ ರೈತರ ಅಕೌಂಟ್ಗೆ ಫಸ್ಟ್ ಕಂತು: ಯಡಿಯೂರಪ್ಪ ಫುಲ್ ಫಾಸ್ಟಪ್ಪಾ
ಕೇಂದ್ರ ಸರ್ಕಾರದ ಪಿಎಂಕಿಸಾನ್ ಯೋಜನೆಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ 4000 ರು. ಘೋಷಿಸಿದೆ. ಈ ಪೈಕಿ ಮೊದಲ ಕಂತಿನ ಹಣವನ್ನು ತಿಂಗಳೊಳಗೆ ನೀಡಲು ಅಧಿಕಾರಿಗಳಿಗೆ ಬಿಎಸ್ವೈ ಡೆಡ್ಲೈನ್ ನೀಡಿದ್ದಾರೆ.
ಬೆಂಗಳೂರು, (ಆ.02): ಕೇಂದ್ರ ಸರ್ಕಾರವು ರೈತರಿಗೆ ಪಿಎಂಕಿಸಾನ್ ಯೋಜನೆಯಡಿ ವಾರ್ಷಿಕ 6000 ರೂಪಾಯಿ ನೆರವು ನೀಡುವ ಯೋಜನೆಗೆ ಪೂರಕವಾಗಿ ಕರ್ನಾಟಕ ಸರ್ಕಾರವು ಸಹ 4000 ರು. ಘೋಷಿಸಿದೆ.
4000 ರು. ಹಣವನ್ನು ಎರಡು ಕಂತುಗಳಲ್ಲಿ ನೀಡಲು ಯಡಿಯೂರಪ್ಪ ಸರ್ಕಾರ ನಿರ್ಧರಿಸಿದೆ. ಈ ಪೈಕಿ ಮೊದಲ ಕಂತಿನ 2000 ರೂಪಾಯಿಗಳನ್ನು 15-20 ದಿನಗಳೊಳಗೆ ರೈತರಿಗೆ ಪಾವತಿಸಲು ಕ್ರಮ ವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮೋದಿ 6 ಸಾವಿರ ರೂ.+ ಬಿಎಸ್’ವೈ 4 ಸಾವಿರ ರೂ.= ರೈತರಿಗೆ 10 ಸಾವಿರ ರೂ.!
ಇಂದು (ಶುಕ್ರವಾರ) ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ನಡೆಸಿದರು. ಈ ವೇಳೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಯಡಿಯೂರಪ್ಪ ಅವರು ನೇಕಾರರ ಸಾಲಮನ್ನಾದ ಜತೆಗೆ 'ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್' ಯೋಜನೆಗೆ ಪೂರಕವಾಗಿ ಪ್ರತಿ ರೈತನಿಗೂ ಎರಡು ಕಂತುಗಳಲ್ಲಿ 4000 ರು. ನೀಡಲಾಗುವುದು ಎಂದು ಪ್ರಕಟಿಸಿದ್ದರು.
ಒಟ್ಟಿನಲ್ಲಿ ಬಿಎಸ್ವೈ ಸಿಎಂ ಆಗಿನಿಂದ ಫುಲ್ ಆ್ಯಕ್ಟಿವ್ ಆಗಿದ್ದು, ರಾಜ್ಯ ವಿವಿಧ ವಿಭಾಗದ ಉನ್ನತಾಧಿಕಾರಿಗಳ ಸಭೆ ಮೇಲೆ ಸಭೆ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ನೀಡುತ್ತಿದ್ದಾರೆ.