ಕಟ್ಟಪ್ಪ ರಹಸ್ಯಕ್ಕಿಂತ ನಿಗೂಢವಾಗಿದೆ ಅಮಿತ್ ಶಾ ಮೌನ
ಮನಸ್ಸು ಮಾಡಿದ್ದರೆ ಇಬ್ಬರೂ ತೆಪ್ಪಗಿರಿ ಎಂದು ಒಂದೇ ದೂರವಾಣಿ ಕರೆಯಲ್ಲಿ ಆದೇಶ ನೀಡಿ ಕದನವೇ ನಡೆಯದಂತೆ ಅಮಿತ್ ಶಾ ಮಾಡಬಹುದಿತ್ತು
ರೋಮ್ಗೆ ಬೆಂಕಿ ಬಿದ್ದಾಗ ರಾಜ ಪಿಟೀಲು ಬಾರಿಸುತ್ತಿದ್ದುದು ಯಾಕೋ ಗೊತ್ತಿಲ್ಲ. ಆದರೆ, ಕರ್ನಾಟಕ ಬಿಜೆಪಿಗೆ ಭಿನ್ನಮತದ ಬೆಂಕಿ ಬಿದ್ದಿರುವಾಗ ಅಮಿತ್ ಶಾ ಸುಮ್ಮನಿರುವುದು ಮಾತ್ರ ಯಾವುದೋ ನಿಗೂಢ ಕಾರಣಕ್ಕೆ ಎಂಬುದು ಸುಳ್ಳಲ್ಲ. ಅತ್ತ ಬಾಹುಬಲಿ -2 ಬಿಡುಗಡೆಯಾಗುತ್ತಿರುವಾಗ ಇತ್ತ ಈಶ್ವರಪ್ಪ-ಯಡಿಯೂರಪ್ಪ ಕದನದ 2ನೇ ಕಂತೂ ಅದ್ದೂರಿಯಾಗೇ ಬಿಡುಗಡೆಯಾಗಿದೆ. ಮನಸ್ಸು ಮಾಡಿದ್ದರೆ ಇಬ್ಬರೂ ತೆಪ್ಪಗಿರಿ ಎಂದು ಒಂದೇ ದೂರವಾಣಿ ಕರೆಯಲ್ಲಿ ಆದೇಶ ನೀಡಿ ಕದನವೇ ನಡೆಯದಂತೆ ಅಮಿತ್ ಶಾ ಮಾಡಬಹುದಿತ್ತು. ಆದರೆ, ಅಮಿತ್ ಶಾ ಹಾಗೆ ಮಾಡದೇ ಯುದ್ಧ ನಡೆಯಲು ಬಿಟ್ಟಿದ್ದಾರೆ. ಹಾಗಾದರೆ, ಯುದ್ಧ ನೋಡುತ್ತಾ ಅಮಿತ್ ಶಾ ಸುಮ್ಮನಿರೋದು ಏಕೆ? ಅವರಿಗೆ ಯಡಿಯೂರಪ್ಪ-ಈಶ್ವರಪ್ಪ ಯುದ್ಧ ನಡೆಯೋದು ಬೇಕಿತ್ತಾ? ಅವರ ತಲೆಯಲ್ಲಿ ಏನಿದೆ ಎಂಬುದು ಬಾಹುಬಲಿ-ಕಟ್ಟಪ್ಪ ರಹಸ್ಯಕ್ಕಿಂತ ದೊಡ್ಡ ರಹಸ್ಯ ಎನಿಸುತ್ತಿದೆ.