ಕಪ್ಪು ಹಣದ ವಿರುದ್ಧ ಇಮ್ರಾನ್ ಖಾನ್ ಸಮರ | ಬಡವರ ಖಾತೆಗೆ ಹಣ ವರ್ಗಾಯಿಸುತ್ತಿರುವ ಕಪ್ಪುಕುಳಗಳು | 

ಕರಾಚಿ (ಅ. 29): ಕಾಳಧನ ಸಂಪಾದಿಸಿರುವ ಕಪ್ಪು ಕುಳಗಳ ಮೇಲೆ ಪ್ರಧಾನಿ ಇಮ್ರಾನ್ ಸಮರ ಸಾರಿದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ವಿಚಿತ್ರ ಬೆಳವಣಿಗೆಗಳು ನಡೆಯುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಪ್ಪು ಕುಳಗಳು ತಮ್ಮಲ್ಲಿರುವ ನೂರಾರು ಕೋಟಿ ರು. ಹಣವನ್ನು ಅಮಾಯಕ ಬಡವರ ಬ್ಯಾಂಕ್ ಖಾತೆಗೆ ವರ್ಗಾಯಿಸಿ, ವಿದೇಶಕ್ಕೆ ಸಾಗಿಸುತ್ತಿದ್ದಾರೆ. ಏಕಾಏಕಿ ತಮ್ಮ ಖಾತೆಗೆ ನೂರಾರು ಕೋಟಿ ರು. ಹಣ ಬಂದು ಹೋಗಿರುವುದನ್ನು ಕಂಡು
ಬಡವರು ಚಿಂತಾಕ್ರಾಂತರಾಗಿದ್ದರೆ, ಈ ವ್ಯವಹಾರದ ಬಗ್ಗೆ ಅಧಿಕಾರಿಗಳು ಬಡವರ ಮನೆ ಬಾಗಿಲು ಬಡಿಯುತ್ತಿದ್ದಾರೆ.

ಮೊಹಮ್ಮದ್ ರಶೀದ್ ಎಂಬ ರಿಕ್ಷಾ ಚಾಲಕ ತನ್ನ ಮಗಳಿಗೆ ಸೆಕೆಂಡ್ ಹ್ಯಾಂಡ್ ಸೈಕಲ್ ಕೊಡಿಸುವುದಕ್ಕಾಗಿ 300 ರು. ಹಣ ಕೂಡಿಸಲು ಒಂದು ವರ್ಷ ಕಷ್ಟಪಟ್ಟಿದ್ದ. ಆದರೆ ಇದೀಗ ರಶೀದ್‌ನ ಬ್ಯಾಂಕ್ ಖಾತೆ ಮೂಲಕ ವಿದೇಶಕ್ಕೆ ಏಕಾಏಕಿ 300 ಕೋಟಿ ರು. ವರ್ಗಾವಣೆಯಾಗಿದೆ. ಇದನ್ನು ಕಂಡು ರಶೀದ್ ಹೆದರಿದ್ದಾರೆ. ಇದರ ಬೆನ್ನಲ್ಲೇ ಪಾಕಿಸ್ತಾನದ ತನಿಖಾಧಿಕಾರಿಗಳು ವಿಚಾರಣೆಗೆ ಬುಲಾವ್ ನೀಡಿದ್ದಾರೆ. ಹೀಗಾಗಿ ರಶೀದ್ ಒತ್ತಡಕ್ಕೆ ಸಿಲುಕಿ ತಲೆಮರೆಸಿಕೊಳ್ಳಲು ಯತ್ನಿಸಿದ್ದರು.

ಕುಟುಂಬ ಸದಸ್ಯರ ಮನವೊಲಿಕೆ ಬಳಿಕ ವಿಚಾರಣೆಗೆ ಹಾಜರಾಗಿ ನಡೆದಿದ್ದನ್ನು ವಿವರಿಸಿದ್ದಾರೆ. ಮತ್ತೊಂದೆಡೆ ಕರಾಚಿ ಕೊಳಗೇರಿಯಲ್ಲಿ ವಾಸಿಸುವ ಖಾದೀರ್ ಖಾತೆಯಿಂದ 225 ಕೋಟಿ ರು. ವರ್ಗ ಆಗಿದೆ. ಆತನೂ ಕಂಗಾಲಾಗಿದ್ದಾನೆ. ಈ ವಿಷಯ ತಿಳಿದ ನೆರೆಹೊರೆಯುವರು ಆತನನ್ನು ಹಣವಿಲ್ಲದ ಕೋಟ್ಯಧೀಶ ಎಂದು ಕಿಚಾಯಿಸುತ್ತಿದ್ದರೆ, ದುಷ್ಕರ್ಮಿಗಳು ತನ್ನನ್ನು ಅಪಹರಿಸಬಹುದು ಎಂದು ಖಾದೀರ್ ಹೆದರಿದ್ದಾನೆ.