ಸ್ವಯಂಸೇವಕರಿಗೆ ಇನ್ಮುಂದೆ ಅಣ್ಣಾ ಹೊಸ  ಶರತ್ತು ರಾಜಕೀಯವನ್ನು ಸೇರುವುದಿಲ್ಲ ಎಂಬ ಅಫಿಡಾವಿಟ್

ನವದೆಹಲಿ: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ಜೊತೆ ಸೇರಿ ಕೆಲಸ ಮಾಡಲಿಚ್ಚಿಸುವ ಸ್ವಯಂಸೇವಕರಿಗೆ ಇನ್ಮುಂದೆ ಅಣ್ಣಾ ಹೊಸ ಶರತ್ತನ್ನು ವಿಧಿಸುವುದಾಗಿ ಹೇಳಿದ್ದಾರೆ.

ಅಣ್ಣಾ ಚಳುವಳಿಯಲ್ಲಿ ಸ್ವಯಂಸೇವಕರಾಗಲಿಚ್ಛಿಸುವವರು, ಭವಿಷ್ಯದಲ್ಲಿ ತಾನು ರಾಜಕೀಯವನ್ನು ಸೇರುವುದಿಲ್ಲ, ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಹಾಗೂ ಸಾಮಾಜಿಕ ಉದ್ದೇಶಗಳಿಗೆ ಮಾತ್ರ ಸೀಮಿತವಾಗಿರುವೆವು ಎಂದು ಅಫಿಡವಿಟ್ ಸಲ್ಲಿಸಬೇಕಂತೆ.

2011ರಲ್ಲಿ ಭ್ರಷ್ಟಾಚಾರ ವಿರೋಧಿ ಚಳುವಳಿ ಆರಂಭಿಸುವ ಮುನ್ನ, ರಾಜಕೀಯ ಸೇರಲ್ಲವೆಂದು ಅರವಿಂದ್ ಕೇಜ್ರಿವಾಲ್ ವಾಗ್ದಾನ ಮಾಡಿದ್ದರು. ಆದರೆ ಬಳಿಕದ ದಿನಗಳಲ್ಲಿ ಅವರು ತಮ್ಮದೇ ಪಕ್ಷವನ್ನು ಸ್ಥಾಪಿಸಿದರು. ಆಗ ಇಂತಹದ್ದೊಂದು ಅಫಿಡಾವಿಟ್ ಇರುತ್ತಿದ್ದರೆ ಅವರಿಂದು ಮುಖ್ಯಮಂತ್ರಿಯಾಗುತ್ತಿರಲಿಲ್ಲ, ಎಂದು ಹಝಾರೆ ಹೆಳಿದ್ದಾರೆ.

ನಮ್ಮ ಚಳುವಳಿಗೆ ಕಳಂಕ ರಹಿತ, ಬದ್ಧತೆಯುಳ್ಳ ವ್ಯಕ್ತಿಗಳು ಬೇಕು. ಪ್ರಾಮಾಣಿಕ ವ್ಯಕ್ತಿಗಳು ಮಾತ್ರ ಚಳುವಳಿ ಸೇರುವಂತಾಗಲು, ಅಫಿಡಾವಿಟ್’ಗೆ ಸಹಿ ಮಾಡಬೇಕು. ಕಡಿಮೆ ಮಂದಿ ಸೆರಿದರೂ ಪರ್ವಾಗಿಲ್ಲ. ಯಾರಾದರೂ ನಿಯಮವನ್ನು ಉಲ್ಲಂಘಿಸಿದರೆ ಅಂಥವರನ್ನು ಕೋರ್ಟಿಗೆ ಎಳೆಯಲಾಗುವುದು ಎಂದು ಅವರು ಹೇಳಿದ್ದಾರೆ.