ಮಹದೇವಪುರ ಕ್ಷೇತ್ರದ ಮಿಟ್ಟಗಾನಹಳ್ಳಿಯ ಕಲ್ಲು ಕ್ವಾರಿಯಲ್ಲಿ ಕಸ ಸುರಿಯುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಗ್ರಾಮಸ್ಥರು ನಡೆಸುತ್ತಿರುವ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಅಹೋರಾತ್ರಿ ಧರಣಿ ಮುಂದು ವರಿಸಿದ್ದಾರೆ.ಮಿಟ್ಟಗಾನಹಳ್ಳಿಯ ಕ್ವಾರಿಯಲ್ಲಿ ಕಸ ಸುರಿಯುವುದನ್ನು ವಿರೋಧಿಸಿ ಶಾಲಾ ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತ ಲಿನ ಸಾವಿರಾರು ಗ್ರಾಮಸ್ಥರು ಕಣ್ಣೂರು ಗ್ರಾಮದಿಂದ ಬೆಳ್ಳಹಳ್ಳಿ ಜಂಕ್ಷನ್‌ವರೆಗೂ ಕಾಲ್ನಡಿಗೆ ಜಾಥಾ ನಡೆಸಿ ಜಂಕ್ಷನ್‌ ಬಳಿ ಪ್ರತಿಭಟನೆ ನಡೆಸಿದರು.

2ನೇ ದಿನಕ್ಕೆ ಕಾಲಿಟ್ಟಗ್ರಾಮಸ್ಥರ ಅಹೋರಾತ್ರಿ ಧರಣಿ | ದೊರೆಸ್ವಾಮಿ, ಶಾಸಕ ಅರವಿಂದ ಲಿಂಬಾವಳಿ ಸಾಥ್‌

ಬೆಂಗಳೂರು : ಮಹದೇವಪುರ ಕ್ಷೇತ್ರದ ಮಿಟ್ಟಗಾನಹಳ್ಳಿಯ ಕಲ್ಲು ಕ್ವಾರಿಯಲ್ಲಿ ಕಸ ಸುರಿಯುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಗ್ರಾಮಸ್ಥರು ನಡೆಸುತ್ತಿರುವ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಅಹೋರಾತ್ರಿ ಧರಣಿ ಮುಂದು ವರಿಸಿದ್ದಾರೆ.
ಮಿಟ್ಟಗಾನಹಳ್ಳಿಯ ಕ್ವಾರಿಯಲ್ಲಿ ಕಸ ಸುರಿಯುವುದನ್ನು ವಿರೋಧಿಸಿ ಶಾಲಾ ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತ ಲಿನ ಸಾವಿರಾರು ಗ್ರಾಮಸ್ಥರು ಕಣ್ಣೂರು ಗ್ರಾಮದಿಂದ ಬೆಳ್ಳಹಳ್ಳಿ ಜಂಕ್ಷನ್‌ವರೆಗೂ ಕಾಲ್ನಡಿಗೆ ಜಾಥಾ ನಡೆಸಿ ಜಂಕ್ಷನ್‌ ಬಳಿ ಪ್ರತಿಭಟನೆ ನಡೆಸಿದರು.

Add Asianetnews Kannada as a Preferred SourcegooglePreferred

ಕಲ್ಲಿನ ಕ್ವಾರಿಯಲ್ಲಿ ಕಸ ಸುರಿಯುವುದರಿಂದ ಮಿಟ್ಟಗಾನಹಳ್ಳಿ, ಬೆಳ್ಳಹಳ್ಳಿ, ಕಣ್ಣೂರು, ಸಾತನೂರು, ಬಂಡೆ ಹೊಸುರು, ಕಾಡುಸೊಣ್ಣಪ್ಪನಹಳ್ಳಿ, ಶ್ರೀನಿವಾಸ ಪುರ, ಬಾಗಲೂರು, ಬಂಡೆ ಬೊಮ್ಮಸಂದ್ರ, ನಾಡಗೌಡನಹಳ್ಳಿ, ಚಿಕ್ಕಗುಬ್ಬಿ ಸೇರಿದಂತೆ ಅನೇಕ ಗ್ರಾಮಗಳ ವಾತಾವರಣ ಹದಗೆಟ್ಟಿದೆ. ಕಲುಷಿತ ವಾತಾವರಣದಿಂದ ಡೆಂಘೀ, ಚಿಕೂನ್‌ಗುನ್ಯಾ, ಮಲೇರಿಯಾ ಚರ್ಮರೋಗಗಳು ಸೇರಿದಂತೆ ನಾನಾ ರೀತಿಯ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಹಸಿ ಕಸ ಕೊಳತು ಉತ್ಪತ್ತಿಗೊಳ್ಳುವ ತ್ಯಾಜ್ಯ, ಅಂತರ್ಜಲದ ನೀರಿನ ಸೆಲೆಗಳಲ್ಲಿ ಬೆರೆತು ಕೊಳವೆ ಬಾವಿಗಳಲ್ಲಿ ವಿಷಪೂರಿತ ನೀರು ದೊರೆಯುವಂತಾಗಿದೆ. ಇದರಿಂದ ಸರ್ಕಾರ ಮತ್ತು ಬಿಬಿಎಂಪಿ ಇದಕ್ಕೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.

ನಾಗರಿಕರ ಹೋರಾಟಕ್ಕೆ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ಹಾಗೂ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. ಕೇವಲ 80 ಲಾರಿಗಳ ಕಸ ಸುರಿಯಲು ಅನುಮತಿ ಪಡೆದು 250ಕ್ಕೂ ಹೆಚ್ಚು ಲಾರಿಗಳ ಕಸ ಸುರಿಯಲು ಮುಂದಾಗಿದ್ದು ಜನರ ಜೀವನದೊಂದಿಗೆ ಪಾಲಿಕೆ ಚಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯ ಮುನೇಂದ್ರಕುಮಾರ್‌, ಕಣ್ಣೂರು ಪಂಚಾಯತಿ ಅಧ್ಯಕ್ಷ ಭಕ್ತಪಾಲ್‌, ಜಿಲ್ಲಾ ಪಂಚಾಯಿತಿ ಸದಸ್ಯ ಮಾಲಾ ಮಾರುತಿ, ಗಣೇಶ್‌, ತಾಲೂಕು ಪಂಚಾಯಿತಿ ಸದಸ್ಯ ಅಂಕಪ್ಪ, ಮುಖಂಡರಾದ ನಂಜೇಗೌಡ, ನಂಜುಂಡಪ್ಪ, ನಾರಾಯಣಗೌಡ ಇತರರಿದ್ದರು.