ಬೆಂಗಳೂರು(ಆ.31): ಸರ್ಕಾರಿ ಕೆಲಸ ಅಂದ್ರೆ , ದೇವರ ಕೆಲಸ ಅಂತಾರೆ. ಸರ್ಕಾರದ ಯಾವುದಾದರೂ ಒಂದೇ ಒಂದು ಇಲಾಖೆಯಲ್ಲಿ ಸಣ್ಣದೊಂದು ಕೆಲಸ ಸಿಕ್ಕಿಬಿಟ್ರೆ, ಜೀವನ ನೆಮ್ಮದಿಯಾಗಿ ಬಿಡುತ್ತದೆ ಎನ್ನುವವರು ರಾಜ್ಯದಲ್ಲಿ ಲಕ್ಷ ಲಕ್ಷಗಟ್ಟಲೇ ಇದ್ದಾರೆ. ಇಂಥಾ ನೌಕರಿಯಲ್ಲೂ ಈಗ ಅಡ್ಡದಾರಿ ಹಿಡಿಯುವವರ ಸಂಖ್ಯೆಯೇ ಹೆಚ್ಚಾಗಿದೆ. ದುಡ್ಡು ಕೊಟ್ಟರೆ, ಪರೀಕ್ಷೆಗೂ ಮುನ್ನವೇ ಕೆಲಸ ಗಿಟ್ಟಿಸಿ ಕೊಡುತ್ತೇವೆ ಎನ್ನುವವರ ಬೂಟಾಟಿಗರು ನಮ್ಮ ಮುಂದೆಯೇ ಇದ್ದಾರೆ. ಪ್ರತಿಷ್ಟಿತ ಸಬ್​ಇನ್ಸ್​ಪೆಕ್ಟರ್ ಹುದ್ದೆ, ಕೆಪಿಎಸ್​ಸಿ ವತಿಯಿಂದ ಅಧಿಸೂಚಿಸುವ ಎಫ್​ಡಿಎ ಎಸ್​ಡಿಎ ಹುದ್ದೆಗಳನ್ನ ಹಣ ಕೊಟ್ರೆ, ಸಾಕು ನಾವು​ ಮಾಡಿಸಿ ಬಿಡುತ್ತೇವೆ ಎನ್ನುವವರ ಬಟಾ ಬಯಲು ಮಾಡಿದೆ ಸುವರ್ಣನ್ಯೂಸ್​.

Add Asianetnews Kannada as a Preferred SourcegooglePreferred

ಕೆಪಿಎಸ್ ​ಸಿ ಕರ್ಮಕಾಂಡ ಅಗೆದಷ್ಟು ಬಯಲಾಗುತ್ತಲೇ ಇದೆ. ಹಣ ಕೊಟ್ಟರೆ, ಸರ್ಕಾರಿ ಹುದ್ದೆ ಸಲೀಸಾಗಿ ಮಾಡಿಸುವ ಜಾಲಗಳು ನಗರದಲ್ಲಿ ಇನ್ನೂ ತಲೆಯತ್ತಿವೆ. ರಾಜಾರೋಷವಾಗಿ, ಟ್ಯೂಟೋರಿಯಲ್​ ಮೂಲಕ ಅಭ್ಯರ್ಥಿಗಳನ್ನ ಸರ್ಕಾರಿ ಹುದ್ದೆಗಳಿಗೆ ಆಯ್ಕೆ ಮಾಡುವ ಜಾಲವೊಂದರ ಬಗ್ಗೆ ಸುವರ್ಣನ್ಯೂಸ್​ ರಹಸ್ಯ ಕಾರ್ಯಾಚರಣೆ ನಡೆಸಿದೆ. ಅಲ್ಲಿ ಸಿಕ್ಕವನು, ರಾಜಾಜಿನಗರದಲ್ಲಿ ಟ್ಯೂಟೋರಿಯಲ್ ಹೆಸರಿನಲ್ಲಿ ಕೋಚಿಂಗ್​ ಕೊಟ್ಕೊಂಡು, ಸರ್ಕಾರಿ ಹುದ್ದೆಗಳಿಗೆ ಅನರ್ಹರನ್ನು ನೇಮಕ ಮಾಡುವ ಖದೀಮ...!!!

ರಾಜಾಜಿನಗರದ ಮೋದಿ ರಸ್ತೆಯ ಬಳಿ ಸರ್ಕಾರಿ ಹುದ್ದೆಗಳಿಗೆ ಕೋಚಿಂಗ್​ ನೀಡುವ ಟ್ಯೂಟೋರಿಯಲ್​ ನಡೆಸುತ್ತಿರೋ ಇವನ ಹೆಸರು ಅಂಕಯ್ಯ...! ಇವನ ಬಣ್ಣ ಸುವರ್ಣನ್ಯೂಸ್​ ಬಯಲು ಮಾಡಿದೆ. ಕೋಚಿಂಗ್​ಗೆ ಅಭ್ಯರ್ಥಿಯೊಬ್ಬರನ್ನ ಸೇರಿಸೋ ನೆಪದಲ್ಲಿ ಹೊರಟ ನಮಗೆ ಒಂದಷ್ಟು ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬಂದವು...!

ಬರೀ ಜಾತಿ ಹೆಸರು ಹೇಳಿದಾಕ್ಷಣ ಏನು ಬೇಕಾದರೂ ಮಾಡ್ತೀನಿ, ಅವರು ಉದ್ದಾರವಾಗಬೇಕು. ಎನ್ನುವ ಈ ಭೂಪ ಬರೀ ಕೆಪಿಎಸ್​​ಸಿ ಪರೀಕ್ಷೆಗಳಲ್ಲ. ಇತ್ತೀಚಿಗೆ ನಡೆದ ಸಬ್​ಇನ್ಸ್​ಪೆಕ್ಟರ್ ಎಕ್ಸಾಮ್ ನಲ್ಲೂ ಕೂಡಾ ನಮ್ಮ ಕೈ ಚಳಕ ನಡೆದಿದೆ ಅಂತಾ ಸರಾಸಗಟಾಗಿ ಹೇಳಿದ್ದಾನೆ.

ಇಂತಹ ಜಾತಿವಾದಿಗಳು ಇರುವುದರಿಂದಲೇ ಈ ದೇಶ ಇನ್ನೂ ಆ ಜಾತಿ, ಈ ಜಾತಿ ಅಂತಾ ಕಿತ್ತಾಡುತ್ತಿರುವುದು. ಸಬ್​ಇನ್ಸ್​ಪೆಕ್ಟರ್, ಎಫ್​ಡಿಐ ಕೆಲಸ ಕೊಡಿಸ್ತೀನಿ ಅಂತಾ ಭೋಗಳೇ ಬಿಡೋ ಇವನು ಇನ್ನೊಬ್ಬ ಮಹಾನ್ ವ್ಯಕ್ತಿಯನ್ನೂ ಭೇಟಿ ಮಾಡಿಸ್ತೀನಿ ಎಂದು ಹೇಳಿದ್ದ. ಆದರೆ, ಅವರನ್ನ ಭೇಟಿ ಮಾಡಿಸ್ತಾರೆ ಅಂತಾ ಕಾಯುತ್ತಿದ್ದ ನಮಗೆ ಯಾರನ್ನೂ ಭೇಟಿ ಮಾಡಿಸದೇ ಎಲ್ಲಾ ನಾನೇ ಮಾಡಿಸಿಕೊಡ್ತೀನಿ ಅಂದುಬಿಟ್ಟ. ಇಂಥಾ ಖದೀಮರ ಬಗ್ಗೆ ಅಭ್ಯರ್ಥಿಗಳು ಎಚ್ಚರದಿಂದಿರಬೇಕು...!