ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಬಸ್ ನಿಲ್ದಾಣ ಇದಾಗಿದ್ದು ಪ್ರತಿನಿತ್ಯ ನೂರಾರು ಬಸ್ ಗಳಲ್ಲಿ ಸಾವಿರಾರು ಪ್ರಯಾಣಿಕರು ಇಲ್ಲಿಗೆ ಆಗಮಿಸುತ್ತಾರೆ.

ಆನೇಕಲ್(ಆ.07): ಬೆಂಗಳೂರಿನ ಕೂಗಳತೆ ದೂರದಲ್ಲಿರುವ ಆನೇಕಲ್ ಪಟ್ಟಣದ ಬಸ್ ನಿಲ್ದಾಣದಲ್ಲಿ ಶೌಚಾಲಯ ಸಮಸ್ಯೆ ಎದುರಾಗಿದ್ದು, ಸಾರ್ವಜನಿಕರು ಕಳೆದ 15 ದಿನಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಈ ಶೌಚಾಲಯದ ಪೈಪ್ ಒಡೆದು ಹೋಗಿದ್ದು ಅದನ್ನು ಸರಿಪಡಿಸುವ ಸಲುವಾಗಿ ಕಳೆದ 15 ದಿನಗಳಿಂದ ಬೀಗ ಜಡಿಯಲಾಗಿದೆ. ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಬಸ್ ನಿಲ್ದಾಣ ಇದಾಗಿದ್ದು ಪ್ರತಿನಿತ್ಯ ನೂರಾರು ಬಸ್ ಗಳಲ್ಲಿ ಸಾವಿರಾರು ಪ್ರಯಾಣಿಕರು ಇಲ್ಲಿಗೆ ಆಗಮಿಸುತ್ತಾರೆ.

ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಜೊತೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದ ಕಾರಣ ಪ್ರಯಾಣಿಕರು ಬಸ್ ನಿಲ್ದಾಣದ ಮೂಲೆ ಪ್ರದೇಶಗಳಲ್ಲಿ ತಮ್ಮ ಅವಸರವನ್ನು ತೀರಿಸಿಕೊಳ್ಳುವಂತಾಗಿದೆ. ಇನ್ನು ಈ ಬಸ್ ನಿಲ್ದಾಣದಲ್ಲಿ ರಾತ್ರಿ ಸಮಯದಲ್ಲಿ ಸುಮಾರು 40ಕ್ಕೂ ಹೆಚ್ಚು ಬಸ್ ಗಳು ಉಳಿದುಕೊಳ್ಳಲಿದ್ದು ಚಾಲಕರು ಹಾಗೂ ನಿರ್ವಾಹಕರು ತಮ್ಮ ಶೌಚದ ಸಮಸ್ಯೆ ಹಾಗೂ ಸ್ನಾನದ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.

ಇದನ್ನು ಸರಿಪಡಿಸ ಬೇಕಾದ ಕೆಎಸ್ಆರ್ಟಿಸಿ ಅಧಿಕಾರಿಗಳು ಹಾಗು ಪುರಸಭೆ ಅಧಿಕಾರಿಗಳು ಕಂಡು ಕಾಣದಂತ್ತಿದ್ದಾರೆ. ಸಂಬಂಧಪಟ್ಟವರು ಶೀಘ್ರದಲ್ಲಿಯೇ ಶೌಚಾಲಯ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರಯಾಣಿಕರ ಹಾಗೂ ಸಾರಿಗೆ ಸಿಬ್ಬಂದಿಗಳ ಸಮಸ್ಯೆಯನ್ನು ನಿವಾರಿಸಬೇಕಿದೆ.