ಅಂದು ಆಡಿಸಿದ್ರು ದೇವೇಗೌಡ್ರು, ಇಂದು ಅದೇ ಆಟಕ್ಕೆ ಸಿಲುಕಿದ್ರಾ?
1983 ರಿಂದ ಬಹುತೇಕ ಎಲ್ಲ ಕಾಂಗ್ರೆಸ್ಸೇತರ ಸರ್ಕಾರಗಳಲ್ಲಿ ಬಂಡಾಯ ಭುಗಿಲೆದ್ದಿದ್ದರ ಹಿಂದೆ ದೇವೇಗೌಡ್ರು | ಅಂದು ಅವರಾಡಿದ ಆಟ ಇಂದು ಅವರಿಗೇ ಮುಳುವಾಯ್ತಾ?
ಕರ್ನಾಟಕದಲ್ಲಿ 1983 ರಿಂದ ಬಹುತೇಕ ಎಲ್ಲ ಕಾಂಗ್ರೆಸ್ಸೇತರ ಸರ್ಕಾರಗಳಲ್ಲಿ ಬಂಡಾಯ ಭುಗಿಲೆದ್ದಿದ್ದರ ಹಿಂದೆ ದೇವೇಗೌಡರಿದ್ದಾರೆ ಎಂದು ಇತಿಹಾಸ ಹೇಳುತ್ತದೆ.
88 ರಲ್ಲಿ ಬೊಮ್ಮಾಯಿ ವಿರುದ್ಧ ಶಾಸಕರನ್ನು ಮೊದಲು ಒಟ್ಟು ಮಾಡಿದ್ದು ಜೀವರಾಜ್ ಆಳ್ವಾ ಆದರೂ, ನಂತರ ಅದರ ಸೂತ್ರ ಬಂದದ್ದು ದೇವೇಗೌಡರ ಕೈಗೆ. ದೇವೇಗೌಡರು, ಬೀದರ್ ಶಾಸಕ ಮೊಲೆಕೇರಿ ಮೂಲಕ 19 ಶಾಸಕರ ಬೆಂಬಲ ಹಿಂದೆ ತೆಗೆದುಕೊಳ್ಳುವ ಪತ್ರವನ್ನು ರಾಜ್ಯಪಾಲ ವೆಂಕಟಸುಬ್ಬಯ್ಯ ಬಳಿಗೆ ಕಳುಹಿಸಿದ್ದರಿಂದಲೇ ಬೊಮ್ಮಾಯಿ ವಿಶ್ವಾಸಮತಕ್ಕೂ ಅವಕಾಶ ಸಿಗದೆ ಅಧಿಕಾರ ಕಳೆದುಕೊಂಡರು.
ಎಲ್ಲ ಪಕ್ಷಗಳ ‘ಡಾರ್ಲಿಂಗ್’ ಆಗಿದ್ದ ಕುಮಾರಸ್ವಾಮಿ ಒಂದೇ ವರ್ಷದಲ್ಲಿ ಒಂಟಿ?
94 ರಲ್ಲಿ ಮುಖ್ಯಮಂತ್ರಿ, 96 ರಲ್ಲಿ ಪ್ರಧಾನಿಯಾದ ದೇವೇಗೌಡರು ನಂತರ 97ರಲ್ಲಿ ಬೆಂಗಳೂರಿಗೆ ಬಂದು ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಬಳಸಿಕೊಂಡು ಮುಖ್ಯಮಂತ್ರಿ ಜೆ ಎಚ್ ಪಟೇಲ್ ಹೈರಾಣಾಗುವಂತೆ ಮಾಡಿದರು.
2006 ರಲ್ಲಿ ದೇವೇಗೌಡರ ಮಗ ಕುಮಾರಸ್ವಾಮಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಿಂದ ಹೊರಬಂದು ಬಿಜೆಪಿ ಬೆಂಬಲ ಪಡೆದು ಮುಖ್ಯಮಂತ್ರಿ ಆದರು. ಪುನಃ 2008 ರಲ್ಲಿ ದೇವೇಗೌಡರು ಹಟ ಹಿಡಿದು, ಆಣೆ ಮಾಡಿಸಿ ಮಗನನ್ನು ಬಿಜೆಪಿಯಿಂದ ದೂರ ಕರೆತಂದರು.
ಅದರಿಂದಾಗಿ, ಕೊಟ್ಟಮಾತಿನಂತೆ ಕುಮಾರಸ್ವಾಮಿ 20 ತಿಂಗಳ ಅಧಿಕಾರವನ್ನು ಬಿಜೆಪಿಗೆ ಬಿಟ್ಟುಕೊಡದೆ ವಚನಭ್ರಷ್ಟರಾದರು ಎಂಬ ಆರೋಪ ಬಂತು. ನಿಸ್ಸಂದೇಹವಾಗಿ ದೇವೇಗೌಡರ ಆಡಳಿತ, ನೆಲ-ಜಲದ ಬಗೆಗಿನ ಬದ್ಧತೆ ಪ್ರಶ್ನಾತೀತ. ಆದರೆ ಅಧಿಕಾರ ಮನೆಯಲ್ಲಿ ಇದ್ದಾಗ ಅವರು ಇಡುವ ಹೆಜ್ಜೆಗಳ ಬಗ್ಗೆ ವಿಶ್ಲೇಷಣೆ ನಡೆಯಬೇಕು ಎನಿಸುತ್ತದೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ