10 ದಿನದಲ್ಲಿ 3 ಹುಲಿ ಸಾವು!
10 ದಿನದಲ್ಲಿ 3 ಹುಲಿ ಸಾವು! 2 ಹುಲಿ ವಿಷಪ್ರಾಶನದಿಂದ ಸತ್ತಿರುವ ಅನುಮಾನ | ಬಂಡೀಪುರ, ಭೀಮನಕಟ್ಟೆ, ಎಚ್ಡಿ ಕೋಟೆಯಲ್ಲಿ ಸಾವು
ಬೆಂಗಳೂರು (ಜೂ. 25): ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ರಾಜ್ಯದ ವಿವಿಧ ಅಭಯಾರಣ್ಯಗಳಲ್ಲಿ ಕಳೆದ 10 ದಿನಗಳಲ್ಲಿ ಮೂರು ಹುಲಿಗಳು ಮೃತ ಪಟ್ಟಿದ್ದು, ಈ ಪೈಕಿ ಎರಡು ಹುಲಿಗಳ ಸಾವು ವಿಷ ಪ್ರಾಶನದಿಂದ ಆಗಿರಬಹುದು ಎಂಬ ಗುಮಾನಿ ಉಂಟಾಗಿರುವ ಕಾರಣ ವನ್ಯಜೀವಿ ಪ್ರೇಮಿಗಳಲ್ಲಿ ಆತಂಕ ಮೂಡಿದೆ.
ಬಂಡೀಪುರ ಹುಲಿ ಯೋಜನೆ ವ್ಯಾಪ್ತಿಯ ಮೂಲೆಹೊಳೆ ಅರಣ್ಯ ವಲಯದಲ್ಲಿ ಜೂ.19ರಂದು 7 ವರ್ಷದ ಹುಲಿ ಸಾವನ್ನಪ್ಪಿದೆ. ಇದರ ದೇಹದ ಮೇಲೆ ಗಾಯದ ಗುರುತುಗಳಿದ್ದು, ಎರಡು ಹುಲಿಗಳ ಕಾದಾಟದಿಂದ ಸಾವನ್ನಪ್ಪಿದೆ ಎಂದು ಹೇಳಲಾಗಿದೆ.
ಉಳಿದಂತೆ ಮೈಸೂರು ಜಿಲ್ಲೆಯ ಭೀಮನಕಟ್ಟೆಯ ಬಳಿ ಜೂ.18ರಂದು 7 ವರ್ಷದ ಗಂಡು ಹುಲಿ ಅನುಮಾನಾಸ್ಪದವಾಗಿ ಮೃತಪಟ್ಟಿತ್ತು. ಈ ಹುಲಿಯ ಮೈಮೇಲೆ ಹಳೆಯ ಗಾಯದ ಗುರುತುಗಳು ಕಂಡುಬಂದಿದ್ದು, ಕತ್ತಿನ ಮೂಳೆ ಮುರಿದಿದೆ.
ಹೊಟ್ಟೆಭಾಗದ ಹಲವು ಅಂಗಾಂಗಗಳಿಗೆ ತೀವ್ರ ಪೆಟ್ಟಾಗಿದೆ. ಅಲ್ಲದೆ, ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್ನಲ್ಲಿ ಜೂ.24ರಂದು ಕೊಳೆತ ಸ್ಥಿತಿಯಲ್ಲಿ ಹುಲಿಯ ಶವ ಪತ್ತೆಯಾಗಿದ್ದು, ಈ ಹುಲಿಗಳಿಗೆ ವಿಷ ಹಾಕಿ ಕೊಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಬೆಳವಣಿಗೆ ವನ್ಯಜೀವಿ ಪ್ರೇಮಿಗಳಿಗೆ ಆತಂಕಕ್ಕೆ ಕಾರಣವಾಗಿದೆ.
ಕಳೆದ ಹತ್ತು ದಿನಗಳಲ್ಲಿ ಮೂರು ಹುಲಿಗಳು ಸತ್ತಿರುವ ಸಂಬಂಧ ವರದಿ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.
- ಸಂಜಯ್ ಮೋಹನ್, ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)