Published : Apr 07 2017, 09:39 AM IST| Updated : Apr 11 2018, 12:39 PM IST
Share this Article
FB
TW
Linkdin
Whatsapp
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಚೌಧರಿ ಕೊಪ್ಪಲಿನಲ್ಲಿ 4ನೇ ಜನವರಿ 1925ರಲ್ಲಿ ಜನಿಸಿದ ಡಾ.ಹೊ. ಶ್ರೀನಿವಾಸಯ್ಯ ಅವರು ವಿದ್ಯಾರ್ಥಿಯಾಗಿದ್ದಾಗಲೇ ಮಹಾತ್ಮ ಗಾಂಧೀಜಿ ಅವರನ್ನು ಭೇಟಿಯಾಗಿದ್ದು, ಅದು ಅವರ ಜೀವನದ ಮಜಲು ಬದಲಾವಣೆಗೆ ಪ್ರಮುಖ ದಾರಿಯಾಯಿತು. ಗಾಂಧೀಜಿ ಅವರನ್ನು ಭೇಟಿಯಾದ ದಿನದಿಂದಲೂ ಅವರ ಪ್ರಭಾವಕ್ಕೊಳಗಾಗಿ ಗಾಂಧೀಜಿ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಬೆಳೆದು ಕರ್ನಾಟಕದ ಗಾಂಧಿ ಎಂದೇ ಪ್ರಖ್ಯಾತರಾಗಿದ್ದರು.
ಮಂಡ್ಯ(ಎ.07): ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಚೌಧರಿ ಕೊಪ್ಪಲಿನಲ್ಲಿ 4ನೇ ಜನವರಿ 1925ರಲ್ಲಿ ಜನಿಸಿದ ಡಾ.ಹೊ. ಶ್ರೀನಿವಾಸಯ್ಯ ಅವರು ವಿದ್ಯಾರ್ಥಿಯಾಗಿದ್ದಾಗಲೇ ಮಹಾತ್ಮ ಗಾಂಧೀಜಿ ಅವರನ್ನು ಭೇಟಿಯಾಗಿದ್ದು, ಅದು ಅವರ ಜೀವನದ ಮಜಲು ಬದಲಾವಣೆಗೆ ಪ್ರಮುಖ ದಾರಿಯಾಯಿತು. ಗಾಂಧೀಜಿ ಅವರನ್ನು ಭೇಟಿಯಾದ ದಿನದಿಂದಲೂ ಅವರ ಪ್ರಭಾವಕ್ಕೊಳಗಾಗಿ ಗಾಂಧೀಜಿ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಬೆಳೆದು ಕರ್ನಾಟಕದ ಗಾಂಧಿ ಎಂದೇ ಪ್ರಖ್ಯಾತರಾಗಿದ್ದರು.
ಕಾಲೇಜು ದಿನಗಳಲ್ಲಿಯೇ ಭೂಗತ ಪತ್ರಿಕೆಗಳನ್ನು ಪ್ರಕಟಿಸಿ, ಹಂಚುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ದೇಶಪ್ರೇಮಿ. ಕಠಿಣ ಪರಿಶ್ರಮದಿಂದ 1949ರಲ್ಲಿ ಮೆಕ್ಯಾನಿಕಲ… ಇಂಜಿನಿಯರ್ ಆಗಿ ವೃತ್ತಿ ಪ್ರಾರಂಭಿಸಿ, 1983ರಲ್ಲಿ ಬಿಇಎಂಎಲ್ನಲ್ಲಿ ಜನರಲ್ ಮ್ಯಾನೇಜರ್ ಆಗಿ ನಿವೃತ್ತರಾದರು. ಕಳೆದ ನಾಲ್ಕು ದಶಕಗಳಿಂದ ಅವರು ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾಗಿ, ಗಾಂಧಿಭವನದ ಏಳಿಗೆಗೆ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದರು. ಪ್ರವಾಸ, ಜೀವನ ಚರಿತ್ರೆ, ಹಾಸ್ಯ, ಪ್ರಕೃತಿ ಚಿಕಿತ್ಸೆ, ಗಾಂಧಿ ಚಿಂತನೆ ಕುರಿತ 90ಕ್ಕೂ ಹೆಚ್ಚು ಕೃತಿಗಳನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಬರೆದಿದ್ದಾರೆ. ಅವರ ‘ನಾ ಕಂಡ ಜರ್ಮನಿ' ಕೃತಿಗೆ 1976ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಹಾಲಿ ಸಚಿವ ಎಚ್.ಕೆ. ಪಾಟೀಲ… ಅವರೊಂದಿಗೆ ಅವರದ್ದು ವಿಶೇಷ ಒಡನಾಟ.
ಭಾರತ ಮತ್ತು ಜರ್ಮನಿಯ ಹಲವು ತಾಂತ್ರಿಕ ಸಂಸ್ಥೆಗಳ ಸದಸ್ಯರಾಗಿ ಆ ಸಂಸ್ಥೆಗಳ ಅಭ್ಯುದಯಕ್ಕಾಗಿ ದುಡಿದಿರುವ ಇವರು ಬೆಂಗಳೂರಿನ ಶ್ರೀ ಆಂಜನೇಯ ಕೋ-ಅಪರೇಟಿವ ಬ್ಯಾಂಕಿನ ಸ್ಥಾಪಕರು. ಪ್ರಕೃತಿ ಜೀವನ ಕೇಂದ್ರದ ಮೂಲ ಪುರುಷರು.
ಹಲವು ಪ್ರಶಸ್ತಿಗಳು: ಇವರ ಸೇವೆಯ ಹಿರಿಮೆಯನ್ನು ಗುರುತಿಸಿ ಈಗಾಗಲೇ ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪ್ರಕೃತಿ ಚಿಕಿತ್ಸೆಯಲ್ಲಿ ಗೌರವ ಡಾಕ್ಟರೇಟ್, ಚುಂಚಶ್ರೀ, ಕನ್ನಡ ಶ್ರೀ, ಕರ್ನಾಟಕ ಶ್ರೀ, ಪ್ರಕೃತಿ ಚಿಕಿತ್ಸಾ ರತ್ನ, ಕರ್ನಾಟಕ ಸರ್ಕಾರದ ಪತಾಂಜಲಿ ಸುವರ್ಣ ಪದಕ ಯೋಗಶ್ರೀ, ಆರ್ಯಭಟ ಮತ್ತು ಮೈಸೂರು ವಿ.ವಿ. ಯಿಂದ ಗೌರವ ಡಾಕ್ಟರೇಟ್ ಮುಂತಾದ ಪ್ರಶಸ್ತಿಗಳು ಸಂದಿವೆ. ಇಡೀ ದೇಶದಲ್ಲಿಯೇ ಪ್ರಥಮ ಬಾರಿಗೆ ಗಾಂಧೀ ಶಾಂತಿ ಸೇವಾ ಪ್ರಶಸ್ತಿ ನೀಡುತ್ತಿರುವ ಕರ್ನಾಟಕ ಸರ್ಕಾರ, 2015ನೇ ಸಾಲಿನ ಗಾಂಧೀ ಶಾಂತಿ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇತ್ತೀಚೆಗಷ್ಟೆರಾಷ್ಟ್ರಪತಿ ಅವರು ವಯೋಶ್ರೇಷ್ಠ ಸನ್ಮಾನ-2016 ಪ್ರಶಸ್ತಿ ನೀಡಿ ಗೌರವಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.