ನರ್ಸರಿಗೆಂದು ಪರ್ಮಿಷನ್ ಪಡೆದು ಹೈಸ್ಕೂಲ್ ನಡೆಸುತ್ತಿದೆಯಾ ಶ್ರೀ ಅರಬಿಂದೋ ವಿದ್ಯಾಮಂದಿರ?
ನರ್ಸರಿ ನಡೆಸೋದು ಬಿಟ್ಟು ಅನಧಿಕೃತವಾಗಿ ಪ್ರೈಮರಿ ಹಾಗೂ ಹೈಸ್ಕೂಲ್ ನಡೆಸುತ್ತಿದ್ದು, ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆನ್ನುವ ಆರೋಪ ಕೇಳಿ ಬಂದಿದೆ.
ಬೆಂಗಳೂರು: ಕಮಲಾನಗರದಲ್ಲಿರುವ ರಾಜಾಜಿನಗರ ಶಿಕ್ಷಣ ಸಂಸ್ಥೆಯ ಶ್ರೀ ಅರಬಿಂದೋ ವಿದ್ಯಾಮಂದಿರ ಶಾಲೆಯು ನರ್ಸರಿ ನಡೆಸುವ ಉದ್ದೇಶಕ್ಕಾಗಿ ಸರ್ಕಾರದಿಂದ ಜಾಗವನ್ನು ಪಡೆದು ಇದೀಗ ಪ್ರೈಮರಿ, ಹೈಸ್ಕೂಲ್ ನಡೆಸುತ್ತಿದೆ. ಸಂಸ್ಥೆ 1997 ಮಾರ್ಚ್ 20ರಂದು ಬಿಡಿಎದಿಂದ ಸಿಎ ನಿವೇಶನ ಗುತ್ತಿಗೆ ಪಡೆದಿತ್ತು. ನರ್ಸರಿ ನಡೆಸೋದು ಬಿಟ್ಟು ಅನಧಿಕೃತವಾಗಿ ಪ್ರೈಮರಿ ಹಾಗೂ ಹೈಸ್ಕೂಲ್ ನಡೆಸುತ್ತಿದ್ದು, ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆನ್ನುವ ಆರೋಪ ಕೇಳಿ ಬಂದಿದೆ. ವರದಿ ಆಧರಿಸಿ ಬಿಡಿಎ ಆಯುಕ್ತರು 2017ರ ಏಪ್ರಿಲ್ 17ರಂದು ರಾಜಾಜಿನಗರ ಶಿಕ್ಷಣ ಸಂಸ್ಥೆ ನೀಡಿರುವ ಗುತ್ತಿಗೆಯನ್ನ ರದ್ದು ಮಾಡಿದ್ದಾರೆ. ಅಷ್ಟೇ ಅಲ್ಲದೇ ಒಂದು ವಾರದೊಳಗೆ ಗುತ್ತಿಗೆ ಕರಾರು ಮೂಲ ದಾಖಲಾತಿಗಳನ್ನು ಪ್ರಾಧಿಕಾರಕ್ಕೆ ಹಿಂತಿರುಗಿಸಬೇಕು. ಕಟ್ಟಡ ಖಾಲಿ ಮಾಡಿಕೊಡಬೇಕು ಎಂದು ಬಿಡಿಎ ಅಧಿಕಾರಿಗಳು ಆದೇಶಿಸಿದ್ದಾರೆ. ರಾಜಾಜಿನಗರ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಮಾತ್ರ ಬಿಡಿಎ ಆದೇಶವನ್ನು ಪ್ರಶ್ನಿಸಿ ತಾವು ನ್ಯಾಯಾಲಯದ ಮೊರೆ ಹೋಗಿರುವುದಾಗಿ ಹೇಳುತ್ತಿದೆ.