ಜಯನಗರ ಬಿಜೆಪಿ ಸೋಲಿಗೆ ಬಿಜೆಪಿಯ ನಾಯಕರೇ ಕಾರಣವೇ?
ಬಿಜೆಪಿ ಸೋಲಿಗೆ ಬಿಜೆಪಿಯೇ ಕಾರಣ?
ಬಿಜೆಪಿಯ ಕೆಲ ಕಾರ್ಪೊರೇಟರ್ಸ್ ಕಾಂಗ್ರೆಸ್ ಪರ ಕೆಲಸ
ಸೌಮ್ಯ ರೆಡ್ಡಿಯ ಗೆಲುವಿನ ಸಂಭ್ರಮದಲ್ಲಿ ಭಾಗಿಯಾಗಿದ್ದ ಬಿಜೆಪಿ ಕಾರ್ಪೊರೇಟರ್
ಬಿಜೆಪಿಯ ಬೈರಸಂದ್ರ ವಾರ್ಡ್ ಪಾಲಿಕೆ ಸದಸ್ಯ ನಾಗರಾಜ್
ಭ್ರಷ್ಟಾಚಾರ ಕುರಿತ ಸಿಎಂ ಹೇಳಿಕೆಗೆ ಆಕ್ರೋಶ
ಸಿಎಂ ಪ್ರಣಾಳಿಕೆಯಲ್ಲಿನ ಭರವಸೆ ಈಡೇರಿಸಲಿ
ಬೆಂಗಳೂರು(ಜೂ.13): ಜಯನಗರ ವಿಧನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷದ ಕೆಲ ಕಾರ್ಪೊರೇಟರ್ಗಳು ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡಿ ದ್ರೋಹ ಮಾಡಿದ್ದಾರೆ ಎಂಬ ಆರೋಪವನ್ನು ಅವರು ತಳ್ಳಿ ಹಾಕಿದರು.
ಬಿಜೆಪಿಯ ಬೈರಸಂದ್ರ ಪಾಲಿಕೆ ಸದಸ್ಯ ನಾಗರಾಜ್ ಅವರು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಗೆಲುವಿನ ಬಳಿಕ ಸಂಭ್ರಮದಲ್ಲಿ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿಯ ಕೆಲ ಕಾರ್ಪೊರೇಟರ್ಗಳು ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಈ ಆರೋಪವನ್ನು ತಳ್ಳಿ ಹಾಕಿದ ಯಡಿಯೂರಪ್ಪ, ನಾಗರಾಜ್ ಸೇರಿದಂತೆ ಯಾವುದೇ ಕಾರ್ಪೊರೇಟರ್ ಗಳು ಪಕ್ಷಕ್ಕೆ ದ್ರೋಹ ಮಾಡಿಲ್ಲ ಎಂದು ಹೇಳಿದರು.
ಜಯನಗರದ ಮತದಾರರು ಪಕ್ಷದ ಮೇಲೆ ವಿಶ್ವಾಸವಿಟ್ಟು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಪಕ್ಷ ಜಯನಗರದ ಮತದಾರರಿಗೆ ಧನ್ಯವಾದ ಅಪಿರ್ಪಿಸುತ್ತದೆ ಎಂದು ಯಡಿಯೂರಪ್ಪ ಹೇಳಿದರು. ಕೊನೆ ಗಳಿಗೆಯಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಹಿಂದಕ್ಕೆ ಪಡೆದುಕೊಂಡ ಕಾರಣ ನಮಗೆ ಹಿನ್ನಡೆಯಾಗಿದೆ ಎಂದ ಅವರು, ಪಕ್ಷದ ಅಭ್ಯರ್ಥಿಯ ಸೋಲಿನ ಅಂತರ ಅತ್ಯಂತ ಕಡಿಮೆ ಇದೆ ಎಂದರು.
ಇದೇ ವೇಳೆ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ ಯಡಿಯೂರಪ್ಪ, ಇನ್ನೂ ಎರಡೂವರೆ ಸಾವಿರ ಮತ ಹೆಚ್ಚಿಗೆ ಪಡೆದಿದ್ದರೆ ಗೆಲುವು ನಮ್ಮದಾಗಲಿತ್ತು ಎಂದು ಚುನಾವಣೆ ಸೋಲಿನ ಪರಾಮರ್ಶೆ ನಡೆಸಿದರು.
ಇನ್ನು ವಿಧಾನಸೌಧದಲ್ಲಿ ಭ್ರಷ್ಟಾಚಾರ ಮೀತಿ ಮೀರಿದೆ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ, ಸಿಎಂ ಸ್ಥಾನದಲ್ಲಿ ಕುಳಿತು ಇಂತಹ ಮಾತು ಆಡಲು ಅವರಿಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದರು. ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎನ್ನುತ್ತಾರೆ, ಕುಮಾರಸ್ವಾಮಿ ಭ್ರಷ್ಟಾಚಾರ ನಿಗ್ರಹ ಕಷ್ಟ ಎನ್ನುತ್ತಾರೆ. ಇವರು ಮೊದಲು ತಮ್ಮ ನಡುವೆ ಇರುವ ಗೊಂದಲ ಬಗೆಹರಿಸಿಕೊಂಡು ಸುಗಮ ಆಡಳಿತ ನೀಡಲಿ ಎಂದು ಯಡಿಯೂರಪ್ಪ ಹರಿಹಾಯ್ದರು.
ಸಮ್ಮಿಶ್ರ ಸರ್ಕಾರ ಮೊದಲು ತಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲಿ ಎಂದು ಒತ್ತಾಯಿಸಿದ ಯಡಿಯೂರಪ್ಪ, ರೈತರ ಸಾಲಮನ್ನಾ ಕುರಿತು ಸಕಾರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ಗಮನಿಸಿ ಹೋರಾಟದ ರೂಪರೇಷೆ ಸಿದ್ದಪಡಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.